ವಿಜಯಪುರ : ಟ್ರಾಫಿಕ್ ಜಾಮ್ ಆಗಿದ್ದ ವೇಳೆ ಟಾಟಾ ಏಸ್ ವಾಹನದ ಚಾಲಕನಿಗೆ ಹಾರ್ನ್ ಬಾರಿಸಬೇಡ ಎಂದಿದಕ್ಕೆ ಅಂಗಡಿ ಮಾಲೀಕನ ಮೇಲೆ ವಾಹನ ಚಾಲಕ ಹಾಗೂ ಆತನ ಸ್ನೇಹಿತರು ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 72ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ. ವಿಜಯಪುರ ನಗರದ ಶಾಹಪೇಟೆ ನಿವಾಸಿಗಳಾದ ತನ್ವೀರ ಡೋಣೂರ, ಇರ್ಫಾನ್ ಡೋಣೂರ ಹಾಗೂ ಇಸ್ಮಾಯಿಲ್ ಹೊನ್ನುಟಗಿ ಜೈಲು ಶಿಕ್ಷೆಗೊಳಗಾದವರು. ಶ್ರೀಶೈಲ್ ಬಾಗೇವಾಡಿ ಹಲ್ಲೆಗೊಳಗಾದವರು. 2019 ಏಪ್ರಿಲ್ 30 ರಂದು ಅವರ ಅಂಗಡಿ ಬಳಿ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಶಿಕ್ಷೆಗೊಳಗಾದ ಆರೋಪಿ ತನ್ವೀರ್ ದಸ್ತಗೀರಿಸಾಬ ಡೋಣೂರು ಸಂಚಾರ ಮುಕ್ತ ಮಾಡುವಂತೆ ವಾರ್ನ್ ಹೊಡೆದಿದ್ದಾನೆ. ಪದೇ ಪದೇ ಹಾರ್ನ್ ಹೊಡೆದ ಕಾರಣ ಕಿರಿಕಿರಿಯಾಗಿ ಅಂಗಡಿ ಮಾಲೀಕ ಹಾರ್ನ್ ಹೊಡೆಯಬೇಡ ಎಂದು ಹೇಳಿದ್ದಕ್ಕೆ ಕೋಪಗೊಂಡ ತನ್ವೀರ್ ವಾಹನ ನಿಲ್ಲಿಸಿ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ನಂತರ ಜೀವ ಬೆದರಿಕೆ ಹಾಕಿದ್ದರು. ಅಂದಿನ ಪಿಎಸ್ ಐ ಆಗಿದ್ದ ಆರೀಫ್ ಮುಶಾಪುರ ತನಿಖೆ ನಡೆಸಿ ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಾಜಿ ನಾಲವಾಡೆ, ಸಾಕ್ಷಿ, ಆಧಾರ ಪರಿಗಣಿಸಿ ಮೂರು ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತು ಆದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ 72ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಕೆ.ಕೆ.ಕುಲಕರ್ಣಿ ಹಾಗೂ ಎಸ್.ಎಚ್. ಹಕೀಮ್ ವಾದ ಮಂಡಿಸಿದ್ದರು.