ಕಾರಹುಣ್ಣಿಮೆ ಸಂಭ್ರಮಕ್ಕೆ ಸಜ್ಜಾದ ರೈತರು; ಮಾರುಕಟ್ಟೆಯಲ್ಲಿ ಅಲಂಕಾರಿಕ ಸಾಮಗ್ರಿಗಳ ಖರೀದಿ ಜೋರು
———-
ಕಾರಹುಣ್ಣಿಮೆ ಸಡಗರ; ಎತ್ತುಗಳ ಶೃಂಗಾರಕ್ಕೆ ರೈತರ ಭರದ ಸಿದ್ಧತೆ.
ಮಾರುಕಟ್ಟೆಯಲ್ಲಿ ಅಲಂಕಾರಿಕ ಸಾಮಗ್ರಿಗಳ ಖರೀದಿ ಜೋರು | ಸಂಪ್ರದಾಯ ಉಳಿಸಿಕೊಳ್ಳಲು ರೈತರ ಒಲವು.
ವಿಶೇಷ ವರದಿ: ಬಸವರಾಜ ಈ. ಕುಂಬಾರ
ಮುದ್ದೇಬಿಹಾಳ: ಉತ್ತರ ಕರ್ನಾಟಕದ ರೈತರ ಪ್ರಮುಖ ಸಂಪ್ರದಾಯಿಕ ಹಬ್ಬವಾದ ಕಾರಹುಣ್ಣಿಮೆ ಆಚರಣೆಗೆ ತಾಲೂಕಿನ ರೈತರು ಭರದ ಸಿದ್ಧತೆ ನಡೆಸಿದ್ದಾರೆ. ಎತ್ತುಗಳು ಹಾಗೂ ಇತರೆ ಜಾನುವಾರುಗಳನ್ನು ಸಿಂಗರಿಸಲು ಅಗತ್ಯವಿರುವ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಲು ಭಾನುವಾರ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಳಿಕೋಟೆ ಹಾಗೂ ನಾಲತವಾಡದ ಮಾರುಕಟ್ಟೆಗಳಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಬ್ಬದ ಸಂಭ್ರಮದಿಂದ ಮಾರುಕಟ್ಟೆಯಲ್ಲಿ ವ್ಯಾಪಾರವೂ ಚುರುಕುಗೊಂಡಿತ್ತು.
ಕೃಷಿಯಲ್ಲಿ ಟ್ರ್ಯಾಕ್ಟರ್ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವುದರಿಂದ ಎತ್ತುಗಳ ಬಳಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಕಾರಹುಣ್ಣಿಮೆಯ ಹಿಂದಿನ ವೈಭವವೂ ಸ್ವಲ್ಪ ಮಂಕಾಗಿದೆ. ಆದರೂ ರೈತರು ತಮ್ಮ ಪೂರ್ವಜರಿಂದ ಬಂದಿರುವ ಸಂಪ್ರದಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಬ್ಬವನ್ನು ಎಂದಿನಂತೆ ಆಚರಿಸಲು ಸಜ್ಜಾಗಿದ್ದಾರೆ.
ಕಾರಹುಣ್ಣಿಮೆಯ ದಿನ ಎತ್ತುಗಳನ್ನು ಬೆಳಗ್ಗೆಯೇ ಸ್ವಚ್ಛವಾಗಿ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣ ಬಳಿದು, ಗೊಂಡೆ, ಕರಿದಾರ ಹಗ್ಗ, ದಾಂಡ, ಗಂಟೆ, ಕಾಲುಗೆಜ್ಜೆ, ಹುರಿಗೆಜ್ಜೆ, ಮೂಗುದಾರ, ಮುಗಡಾ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಎತ್ತುಗಳಿಗೆ ವಿಶೇಷ ಆಹಾರ ನೀಡಿ ಗ್ರಾಮಗಳಲ್ಲಿ ಮೆರವಣಿಗೆ ನಡೆಸುವುದು, ಕರಿ ಹರಿಯುವ ಸಂಪ್ರದಾಯ ಸೇರಿದಂತೆ ವಿವಿಧ ಆಚರಣೆಗಳು ನಡೆಯುತ್ತವೆ.
ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿದ್ದರೂ ರೈತರು ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಹೊಸ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿ ಸಿದ್ಧತೆ ನಡೆಸಿದ್ದಾರೆ. ಮುದ್ದೇಬಿಹಾಳ, ತಾಳಿಕೋಟೆ ಹಾಗೂ ನಾಲತವಾಡ ಮಾರುಕಟ್ಟೆಗಳಲ್ಲಿ ಹಳದಿ, ಕೆಂಪು, ಹಸಿರು, ಬಿಳಿ ಬಣ್ಣದ ವಾರ್ನಿಷ್, ಗೊಂಡೆ, ಸರ, ಗಂಟೆ, ಬಾರಕೋಲು, ಕರಿದಾರ ಹಗ್ಗ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಜೋರಾಗಿತ್ತು.
ರೈತ ಹಣಮಂತ ಕಾರಕೂರ ಮಾತನಾಡಿ, “ಕಾರಹುಣ್ಣಿಮೆ ರೈತರ ಪಾಲಿನ ಮೊದಲ ಹಬ್ಬ. ಪ್ರತಿ ವರ್ಷ ಹೊಸ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಎತ್ತುಗಳನ್ನು ಸಿಂಗರಿಸುತ್ತೇವೆ. ನಮ್ಮ ಗ್ರಾಮದಲ್ಲಿ ಸೋಮವಾರ 29 ರಂದು ಸಂಜೆ 5 ಗಂಟೆಗೆ ಕರಿ ಹರಿಯುವ ಸಂಪ್ರದಾಯ ನಡೆಯಲಿದೆ. ಎತ್ತುಗಳು ಆರೋಗ್ಯದಿಂದ ಇದ್ದರೆ ರೈತನ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ,” ಎಂದು ಹೇಳಿದರು.
ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾದರೂ ಕಾರಹುಣ್ಣಿಮೆಯಂತಹ ಸಂಸ್ಕೃತಿ ಮತ್ತು ಸಂಪ್ರದಾಯಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿವೆ. ಹೊಸ ತಲೆಮಾರಿಗೆ ಈ ಸಂಪ್ರದಾಯಗಳನ್ನು ಪರಿಚಯಿಸುವ ಕೆಲಸವನ್ನು ರೈತರು ಇಂದಿಗೂ ಮುಂದುವರಿಸಿಕೊಂಡು ಬಂದಿರುವುದು ವಿಶೇಷ.
ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ಎತ್ತುಗಳ ಬಳಕೆ ಕಡಿಮೆಯಾದ ಕಾರಣ ಹಿಂದಿನ ವರ್ಷಗಳಷ್ಟು ವ್ಯಾಪಾರವಾಗುತ್ತಿಲ್ಲ. ಇದರಿಂದ ಅಲಂಕಾರಿಕ ಸಾಮಗ್ರಿಗಳ ಮಾರಾಟಕ್ಕೂ ಹೊಡೆತ ಬಿದ್ದಿದೆ.
ಮೈಹಿಬೂಬು ಕಲಬುರ್ಗಿ, ವ್ಯಾಪಾರಿ,ಮುದ್ದೇಬಿಹಾಳ
ಸಂಪ್ರದಾಯ ಉಳಿದಿದೆ, ಬಳಕೆ ಕಡಿಮೆಯಾಗಿದೆ
“ಟ್ರ್ಯಾಕ್ಟರ್ ಸೇರಿದಂತೆ ಆಧುನಿಕ ಯಂತ್ರಗಳ ಬಳಕೆ ಹೆಚ್ಚಿರುವುದರಿಂದ ಕೃಷಿಯಲ್ಲಿ ಎತ್ತುಗಳ ಬಳಕೆ ಕಡಿಮೆಯಾಗಿದೆ. ಆದರೂ ಕಾರಹುಣ್ಣಿಮೆಯಂದು ಎತ್ತುಗಳನ್ನು ಶೃಂಗರಿಸಿ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ನಮ್ಮ ಕುಟುಂಬ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ಇದು ನಮ್ಮ ಕೃಷಿ ಸಂಸ್ಕೃತಿಯ ಪ್ರತೀಕವಾಗಿದೆ.
– ಶಂಕರಗೌಡ ಶಿವಣಗಿ, ರೈತ, ಕಂದಗನೂರ


















