ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್
ಇಂಡಿ: ಇಂದಿನ ವಿದ್ಯಾರ್ಥಿಗಳು ಜ್ಞಾನವನ್ನು ಕೇವಲ ಪುಸ್ತಕಗಳಲ್ಲಿ ಸೀಮಿತಗೊಳಿಸದೇ ಅದನ್ನು ಕೌಶಲ್ಯವನ್ನಾಗಿ, ಕೌಶಲ್ಯವನ್ನು ಅವಕಾಶವನ್ನಾಗಿ ರೂಪಿಸಿದಾಗ ಮಾತ್ರ ಅವರ ನಿಜವಾದ ಬೆಳವಣಿಗೆ ಸಾಧ್ಯ ಎಂದು ಉದ್ಯಮಿ ಅನಂತ್ ಜೈನ್ ಹೇಳಿದರು.
ಗುರುವಾರ ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ‘ಬದುಕು-ಬದುಕುವ ದಾರಿ’
ಕುರಿತ ವಿಚಾರ ಸಂಕಿರಣ ಹಾಗೂ ಪಾಲಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ವ್ಯಕ್ತಿಯ ಭವಿಷ್ಯದ ಅಡಿಪಾಯ. ಈ ಅವಧಿಯಲ್ಲಿ ಕಲಿಯುವ ಜ್ಞಾನ, ಶಿಸ್ತು, ಕೌಶಲ್ಯ ಅವರ ವೃತ್ತಿಜೀವನ ಮತ್ತು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಮುಖ್ಯ ಉಪನ್ಯಾಸಕರಾಗಿ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಐಟಿಐ ಕೇವಲ ಒಂದು ಶಿಕ್ಷಣವಲ್ಲ, ಅದು ಕೈಗಾರಿಕಾ ಜಗತ್ತಿಗೆ ಬೇಕಾದ ನುರಿತ ಕೌಶಲ್ಯ ಕಲಿಸುವ ಭದ್ರ ಬುನಾದಿ. ಪ್ರಾಯೋಗಿಕ ಜ್ಞಾನ, ಸೃಜನಶೀಲತೆ, ನಿರಂತರ ಕಲಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ. ಜ್ಞಾನವೇ ಜೀವನದ ನಿಜವಾದ ಆಸ್ತಿ. ಪ್ರತಿಯೊಬ್ಬ ಐಟಿಐ ವಿದ್ಯಾರ್ಥಿ ತಮ್ಮ ಕೌಶಲ್ಯವನ್ನೇ ಬಂಡವಾಳವಾಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಕೌಶಲ್ಯಾಭಿವೃದ್ಧಿ, ನೈಜ ಯೋಜನೆ ಪ್ರತಿ ಐಟಿಐ ವಿದ್ಯಾರ್ಥಿಗೂ ಅಗತ್ಯ ಎಂದು ಹೇಳಿದರು.
ಪ್ರಾಚಾರ್ಯ ಪರಶುರಾಮ ರಜನಿಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಿಯಾದ ಗುರಿ ವಿದ್ಯಾರ್ಥಿಯನ್ನು ಉದ್ಯಮಶೀಲತೆ, ಉದ್ಯೋಗ, ಆರ್ಥಿಕ ಸ್ವಾವಲಂಬನೆಯತ್ತ ಸಾಗಿಸುತ್ತದೆ. ತಾಂತ್ರಿಕ ಶಿಕ್ಷಣ ಕೇವಲ ಉದ್ಯೋಗಕ್ಕೆ ಸೀಮಿತಗೊಳಿಸದೇ ಅದನ್ನು ಜೀವನದ ಗುರಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕುಮಾರಿ ಸ್ವಾತಿ ಜೈನ್ ಸಸಿಗೆ ನೀರುಣಿಸಿ ತಮ್ಮ ಅನುಭವ ಹಂಚಿಕೊಂಡರು. ಉಪನ್ಯಾಸಕರಾದ ಗಂಗಾಧರ ಭಾಗೆಳ್ಳಿ, ರಮೇಶ ಮೇತ್ರಿ, ಸಂತೋಷ ಹಟ್ಟಿ, ಭೀಮಾಶಂಕರ ಶಿವೂರ, ಭಾಗ್ಯಜ್ಯೋತಿ, ಕವಿತಾ ರಾಠೋಡ, ರವಿ ಹಾದಿಮನಿ, ಪಾಲಕ ಪ್ರತಿನಿಧಿ ವಿಲಾಸ ಲಿಂಗಸೂರ ಸೇರಿದಂತೆ ಪಾಲಕರು, ತಾಯಂದಿರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.


















