ಸೊಳ್ಳೆಗಳ ನಿಯಂತ್ರಣದಿಂದ ಮಲೇರಿಯಾ ಮುಕ್ತ ಸಮಾಜ ಸಾಧ್ಯ: ಡಾ. ಸತೀಶ್ ತಿವಾರಿ ಕರೆ
ಮುದ್ದೇಬಿಹಾಳ: ಮಲೇರಿಯಾ, ಡೆಂಗಿ, ಚಿಕುನ್ಗುನ್ಯಾ ಹಾಗೂ ಆನೆಕಾಲು ರೋಗದಂತಹ ಭೀಕರ ಕಾಯಿಲೆಗಳು ಸೊಳ್ಳೆಗಳಿಂದಲೇ ಹರಡುತ್ತಿದ್ದು, ಸಾರ್ವಜನಿಕರು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸುವ ಮೂಲಕ ಜಾಗೃತಿ ವಹಿಸಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ಹೇಳಿದರು.
ಇಲ್ಲಿನ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಸಿದ್ದಗಂಗಾ ಪ್ಯಾರಾ ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಮಲೇರಿಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಗೌಡರ ಮಾತನಾಡಿ, “ಹೆಣ್ಣು ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ. ಚಳಿ, ವಿಪರೀತ ಜ್ವರ ಮತ್ತು ನಂತರ ಬೆವರುವಿಕೆ ಈ ರೋಗದ ಪ್ರಮುಖ ಲಕ್ಷಣಗಳು. ಇಂತಹ ಲಕ್ಷಣಗಳು ಕಂಡುಬಂದ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ದೃಢಪಟ್ಟಲ್ಲಿ ಪ್ರಮ್ಯಾಕ್ವಿನ್ ಮಾತ್ರೆಗಳ ಸೇವನೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು” ಎಂದು ಮಾಹಿತಿ ನೀಡಿದರು.
ವಿ.ಬಿ.ಡಿ ಮೇಲ್ವಿಚಾರಕ ಎಸ್.ಸಿ. ರುದ್ರವಾಡಿ ಮಾತನಾಡಿ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೊಳ್ಳೆಗಳ ನಿಯಂತ್ರಣಕ್ಕೆ ಮೊದಲ ಆದ್ಯತೆಯಾಗಬೇಕು. ಸೊಳ್ಳೆ ಪರದೆ, ಬೇವಿನ ಸೊಪ್ಪಿನ ಹೊಗೆ ಹಾಗೂ ಸೊಳ್ಳೆ ಬತ್ತಿಗಳನ್ನು ಬಳಸುವ ಮೂಲಕ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಎ.ಪಿ. ಶಾಸ್ತ್ರಿಮಠ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರಶಾಂತ್ ಕಡಿ,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೀರೇಶ ಎಸ್.ಬಿ, ವಿಜಯ ಹೂಗಾರ, ಕಾಲೇಜಿನ ಶಿಕ್ಷಕರಾದ ಹಿನಾಕೌಸರ್ ಸುತಾರ, ಮುನಿರಾಬೇಗಂ ನದಾಪ್, ಪಾರ್ವತಿ ಹಿರೇಮಠ್, ಮಲ್ಲಿಕಾರ್ಜುನ ಹೆಬ್ಬಾಳ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



















