ವಿದ್ಯಾರ್ಥಿನಿಯರು ಮೊಬೈಲ್ ವ್ಯಾಮೋಹ ಬಿಟ್ಟು ಉನ್ನತ ಶಿಕ್ಷಣದತ್ತ ಗಮನಹರಿಸಿ: ಶಾಸಕ ಸಿ.ಎಸ್. ನಾಡಗೌಡ
ಮುದ್ದೇಬಿಹಾಳ: ದಿನಗಳಲ್ಲಿ ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಹಾಗೂ ಅವರಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ವಸತಿ ನಿಲಯಗಳ ಅವಶ್ಯಕತೆ ಹೆಚ್ಚಿದೆ. ಪಾಲಕರ ಬೇಡಿಕೆಯಂತೆ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಈ ನೂತನ ಕಟ್ಟಡವನ್ನು ಉದ್ಘಾಟಿಸಲಾಗಿದೆ ಎಂದು ಕೆಎಸ್ಡಿಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಅವರು ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ನೂತನ ವಸತಿ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸವಿರಲಿ”ಖಾಸಗಿ ಶಾಲೆಗಳು ಕೇವಲ ಭವ್ಯ ಕಟ್ಟಡಗಳಿಂದ ಪಾಲಕರನ್ನು ಆಕರ್ಷಿಸುತ್ತವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅನುಭವವಿರುವ ಶ್ರೇಷ್ಠ ಶಿಕ್ಷಕರಿದ್ದಾರೆ. ಇಂದು ಸರ್ಕಾರಿ ವಸತಿ ನಿಲಯ ಹಾಗೂ ಶಾಲೆಗಳಲ್ಲಿ ಓದಿದ ಬಡ ವಿದ್ಯಾರ್ಥಿಗಳು ಐಎಎಸ್ (IAS), ಕೆಎಎಸ್ (KAS) ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಖಾಸಗಿ ಶಾಲೆಗಳಿಗಿಂತಲೂ ಹೆಚ್ಚಿನ ಡಿಜಿಟಲ್ ಸೌಲಭ್ಯಗಳು ಇಂದು ಸರ್ಕಾರಿ ಶಾಲೆಗಳಲ್ಲಿ ಲಭ್ಯವಿವೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಹಿಂಜರಿಕೆಯಿಲ್ಲದೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು, ಎಂದು ಕರೆ ನೀಡಿದರು.
6.50 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ: ವಸತಿ ನಿಲಯಕ್ಕೆ ಮಿನಿ ಬಸ್ ಭರವಸೆ
”ಸರ್ಕಾರವು ಸುಮಾರು 6.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುಂದರ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. ವಿದ್ಯಾರ್ಥಿನಿಯರು ತಮ್ಮ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತಾರೋ, ಅದೇ ರೀತಿ ಈ ವಸತಿ ನಿಲಯವನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿನಿಯರ ಸಂಚಾರದ ಅನುಕೂಲಕ್ಕಾಗಿ ಶೀಘ್ರದಲ್ಲೇ ಒಂದು ಮಿನಿ ಬಸ್ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಇದೇ ವರ್ಷದಲ್ಲಿ ಪ್ರೀ-ಮೆಟ್ರಿಕ್ ವಸತಿ ನಿಲಯ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು,” ಎಂದು ಭರವಸೆ ನೀಡಿದರು.
ಅಧಿಕಾರಿಗಳಿಗೆ ಶಾಸಕರ ಖಡಕ್ ಸೂಚನೆ
ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, “ವಸತಿ ನಿಲಯದ ಕಟ್ಟಡವು ತಳಮಟ್ಟದಿಂದ ಸರಿಯಾದ ಎತ್ತರದಲ್ಲಿರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಸುತ್ತಮುತ್ತ ಮನೆಗಳು ನಿರ್ಮಾಣವಾದಾಗ ಮಳೆ ನೀರು ನಿಂತು ಕಟ್ಟಡದ ಆಯಸ್ಸು ಕಡಿಮೆಯಾಗುತ್ತದೆ. ಅಲ್ಲದೆ, ಬಾಲಕಿಯರ ಸುರಕ್ಷತೆಯ ದೃಷ್ಟಿಯಿಂದ ಕಾಂಪೌಂಡ್ ಅತಿ ಎತ್ತರವಾಗಿ ಹಾಗೂ ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು, ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಧಿಕಾರಿಗಳ ವಿವರಣೆ
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಸಂತಿ ಮಠ ಮಾತನಾಡಿ, “2013 ರಿಂದ ಬಾಡಿಗೆ ಕಟ್ಟಡದಲ್ಲಿದ್ದ ಈ ನಿಲಯಕ್ಕೆ ಶಾಸಕರ ಸತತ ಪ್ರಯತ್ನದಿಂದಾಗಿ ಈಗ ಸ್ವಂತ ಕಟ್ಟಡ ಲಭಿಸಿದೆ. ಇಲ್ಲಿ ಕಂಪ್ಯೂಟರ್ ಸೇರಿದಂತೆ ಎಲ್ಲಾ ಸೌಲಭ್ಯಗಳಿದ್ದು, ಬಾಲಕಿಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದರು. ಇದೇ ವೇಳೆ ಹಳೆಯದಾಗಿರುವ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೂ ಹೊಸ ಕಟ್ಟಡ ನಿರ್ಮಿಸಿಕೊಡಲು ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎ.ಬಿ. ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, “2023 ರಲ್ಲಿ ಚಾಲನೆ ನೀಡಲಾದ ಈ ಕಾಮಗಾರಿಯಲ್ಲಿ 100 ವಿದ್ಯಾರ್ಥಿನಿಯರ ಸಾಮರ್ಥ್ಯದ 18 ಸುಸಜ್ಜಿತ ಕೊಠಡಿಗಳು ಹಾಗೂ ಸಿಸಿ ರಸ್ತೆ ನಿರ್ಮಿಸಲಾಗಿದೆ,” ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ ಇಒ ಸಂಗನಗೌಡ ಬಿರಾದಾರ, ಮಾಜಿ ಪುರಸಭೆ ಅಧ್ಯಕ್ಷ ಮೈಹಿಬೂಬು ಗೊಳಸಂಗಿ, ಜಿಒಸಿ ಪ್ರಮುಖರಾದ ಆನಂದಗೌಡ ಬಿರಾದಾರ, ಸತೀಶ್ ಓಸ್ವಾಲ್, ವಿರೇಶ ಹಡಲಗೇರಿ, ಶ್ರೀಕಾಂತ್ ಚಲವಾದಿ,ಸಿಕಂದರ್ ಜಾನ್ವೇಕಾರ, ಗುತ್ತಿಗೆದಾರ ಅರುಣ ಎಸ್. ಮಠ, ಇಂಜಿನಿಯರ್ ಸುನಿಲ್ ನಾಯಕ,ಮುತುರಾಜ ಹಡಲಗೇರಿ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ವಾರ್ಡನ್ ಗಳು ಮತ್ತು ಸಿಬ್ಬಂದಿಗಳು,ವಿದ್ಯಾರ್ಥಿನಿಯರು ಸೇರಿದಂತೆ ಉಪಸ್ಥಿತರಿದ್ದರು.
—————
ಮೆಟ್ರಿಕ್ ನಂತರ ಬಾಲಕಿಯರ
ವಸತಿ ನಿಲಯದ ಕಟ್ಟಡವು ತಳಮಟ್ಟದಿಂದ ಸರಿಯಾದ ಎತ್ತರದಲ್ಲಿರಬೇಕು. ಭವಿಷ್ಯದಲ್ಲಿ ಸುತ್ತಮುತ್ತಲಿನ ಮನೆಗಳ ನಿರ್ಮಾಣವಾದಾಗ ಮಳೆ ನೀರು ನಿಂತು ಕಟ್ಟಡದ ಆಯಸ್ಸು ಕಡಿಮೆಯಾಗಬಾರದು. ಬಾಲಕಿಯರ ಸುರಕ್ಷತೆಯ ದೃಷ್ಟಿಯಿಂದ ಕಾಂಪೌಂಡ್ ಅತಿ ಎತ್ತರವಾಗಿ ಮತ್ತು ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಸಿ.ಎಸ್. ನಾಡಗೌಡ
ಶಾಸಕರು ಹಾಗೂ ಕೆಎಸ್ಡಿ ನಿಗಮದ ಅಧ್ಯಕ್ಷರು,



















