ಮಾಹಿತಿ ಹಕ್ಕು ಕಾಯ್ದೆ ಸಂಪೂರ್ಣ ಅಧ್ಯಯನ ಮಾಡಿ
ಮಾಹಿತಿ ಹಕ್ಕು ಆಯೋಗದ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆ
ವಿಜಯಪುರ, ಮೇ ೨ : ಮಾಹಿತಿ ಹಕ್ಕು ಕಾಯ್ದೆ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಜನಪರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿದ್ದು, ಇಂತಹ ಜನಪರವಾಗಿರುವ ಈ ಕಾಯ್ದೆಯನ್ನು ಪ್ರತಿಯೊಬ್ಬ ಅಧಿಕಾರಿಗಳು ಅಧ್ಯಯನ ಮಾಡಿಕೊಂಡು ಸರಾಗ ಆಡಳಿತಕ್ಕೆ ಕೈಜೋಡಿಸಬೇಕು ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ (RTI) ಕುರಿತು ಅರಿವು ಮೂಡಿಸುವ ವಿಶೇಷ ತರಬೇತಿ ಕಾರ್ಯಾಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾಹಿತಿ ಹಕ್ಕಿನಡಿ ಅರ್ಜಿದಾರ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೆ, 30 ದಿನಗಳೊಗಾಗಿ ಉತ್ತರ ಕೊಡಬೇಕು. ಅರ್ಜಿದಾರ ಕೋರಿದ ಮಾಹಿತಿ ನೀಡಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ಒಂದು ವೇಳೆ ನೀವು ಮಾಹಿತಿ ನೀಡಲು ಹಿಂಜರಿದರೆ ಅದು ಅಪಾರ್ಥಕ್ಕೆ ಕಾರಣವಾಗಲಿದೆ. ಹಾಗಾಗಿ ಪ್ರಥಮ ಮೇಲ್ಮನವಿಗೆ ಹೋಗುವ ಮುನ್ನವೇ ಪ್ರತಿಯೊಬ್ಬ ಅಧಿಕಾರಿಯೂ ಉತ್ತರ ನೀಡಬೇಕು. ದ್ವಿತೀಯ ಮೇಲ್ಮನವಿಗೆ ಬಂದಾಗ ಅದನ್ನು ನಾವು ನೋಡಿಕೊಳ್ಳುತ್ತೇವೆ ಎಂದರು.
ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ ತರುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬ ದೂರದೃಷ್ಟಿಯಿಂದ ಜಾರಿಗೆ ತಂದಿರುವ ಮಾಹಿತಿ ಹಕ್ಕು ಕಾಯ್ದೆ ಜನಪರವಾಗಿದೆ. ಆದರೆ ಈ ಕಾಯ್ದೆ ದುರುಪಯೋಗ ಸಲ್ಲದು ಎಂದು ಹರ್ತಿಕೋಟಿ ಹೇಳಿದರು.
ಈ ಮಹತ್ವಾಕಾಂಕ್ಷೆಯ ಕಾಯ್ದೆ ಸದ್ಬಳಕೆಯಾಗಬೇಕು ಎಂಬ ದೂರದೃಷ್ಟಿಯಿಂದ ನಮ್ಮ ಆಯೋಗ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಗೆ ಪುನರ್ಮನನ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ ಎಂದರು.
ಸರ್ಕಾರದ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಹಾಗೂ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂಬ ಆಶಯದೊಂದಿಗೆ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ ಈ ಕಾಯ್ದೆ ಅಸ್ತಿತ್ವಕ್ಕೆ ಬಂದಿದೆ. ಈ ಕಾಯ್ದೆಗೆ ಈಗ ಬರೋಬ್ಬರಿ 21 ವರ್ಷ ಭರ್ತಿಯಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಮಾದರಿಯಲ್ಲಿ ಈ ಕಾಯ್ದೆ ಪ್ರಧಾನಿ ಮನಮೋಹನ ಸಿಂಗ್ ಅಧಿಕಾರವಧಿಯಲ್ಲಿ ಜಾರಿಗೆ ಬಂದಿದ್ದು ಹೆಮ್ಮೆಯ ಸಂಗತಿ ಎಂದರು.
ಈ ಕಾಯ್ದೆ ಮೊದಲು ಸ್ವೀಡನ್ ದೇಶದಲ್ಲಿ ಜಾರಿಯಾಯಿತು. ಬಳಿಕ ಹಲವು ದೇಶಗಳಲ್ಲಿ ಜಾರಿಗೆ ಬಂತು. ಭಾರತದಲ್ಲಿ ೨೧ ವರ್ಷಗಳ ಹಿಂದೆ ಪ್ರಧಾನಿ ಮನಮೋಹನಸಿಂಗ್ ಕಾಲದಲ್ಲಿ ಜಾರಿಗೆ ಬರುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತುನೀಡುತ್ತಿದೆ ಎಂದರು.
ಈ ಕಾಯ್ದೆ ದುರ್ಬಲಗೊಳ್ಳಬಾರದು ಎಂದೇ ಆಯೋಗ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಅಧಿಕಾರಿಗಳಿಗೆ ಕಾಯ್ದೆಯ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ. ಅಧಿಕಾರಿಗಳು 30 ಸಂಗತಿಗಳಿರುವ ಈ ಕಾಯ್ದೆ ಹಾಗೂ ಆಗಾಗ್ಗೆ ಈ ಕುರಿತು ಸುಪ್ರಿಂ, ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ಅಧ್ಯಯನ
ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ 76 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿ ಬಾಕಿ ಇವೆ. ಬೆಳಗಾವಿ ವಿಭಾಗ 3 ನೇ ಸ್ಥಾನದಲ್ಲಿದೆ. ಹೀಗೆಯೇ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ಇದು ಆಗಬಾರದು ಎಂದ ಅವರು, ವಿಜಯಪುರ ಜಿಲ್ಲೆಯಲ್ಲೂ 41ಎ 41 ಬಿ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಬೇಕು ಎಂದರು. ಸೂಕ್ತ ಅಧ್ಯಯನ ನಡೆಸಿದರೆ, ಕಾನೂನಿನ ತೊಡಕಿಲ್ಲದೇ ಅರ್ಜಿ ವಿಲೇವಾರಿ ಮಾಡಬಹುದಾಗಿದೆ ಎಂದರು.
ಅರ್ಜಿದಾರ ಕೋರಿದ ಮಾಹಿತಿಗೆ ಸ್ಪಷ್ಟ ಕಾರಣ ಕೊಡಬೇಕು. ಇಲ್ಲವಾದಲ್ಲಿ ಕನಿಷ್ಠ ಪಕ್ಷ ಹಿಂಬರಹವನ್ನಾದರೂ ನೀಡಬೇಕು.
ಬಹಳಷ್ಟು ಕಡೆಯಲ್ಲಿ ಅರ್ಜಿಗಳು ಕಚೇರಿಗೆ ಬರುವ ಅರ್ಜಿ ವಿಲೇವಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಆಸ್ತಿ ಪ್ರಕರಣದಲ್ಲಿ 5 ದಿನಗಳೊಗಾಗಿ ಮಾಹಿತಿ ಕೊಡಬೇಕು. ಆದರೆ ವ್ಯಕ್ತಿಗತವಾಗಿದ್ದರೆ, ಆ ವ್ಯಕ್ತಿಯ ಅನುಮತಿ ಪಡೆದೇ ಮಾಹಿತಿ ಕೊಡಬೇಕು ಎಂದರು.
ಒಬ್ಬೊಬ್ಬರೇ ಸಾಕಷ್ಟು ಅರ್ಜಿ ಹಾಕುತ್ತಾರೆ. ಆದರೆ ಅರ್ಜಿ ಹಾಕಲಿಕ್ಕೆ ಸಂಖ್ಯೆಯ ಮಿತಿಯಿಲ್ಲ. ಒಬ್ಬನೇ ಸಾಕಷ್ಟು ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕದಲ್ಲಿ ಒಬ್ಬರು 9 ಸಾವಿರ ಅರ್ಜಿ ಹಾಕಿದ್ದರು. ಅವರಿಗೆ ನ್ಯಾಯಾಲಯ ದಂಡ ವಿಧಿಸಿತು. ಆದರೆ ಸಂಖ್ಯಾ ಮಿತಿಯಿಲ್ಲದ್ದರಿಂದ ಉತ್ತರ ಕೊಡಬೇಕು ಎಂದರು. ವಿಜಯಪುರ ಜಿಲ್ಲೆಯಲ್ಲ್ಲೂ ದಂಡ ವಿಧಿಸಲಾಗಿದೆ. ಆಯೋಗ ದಂಡ ಹಾಕದಂತೆ ಅಧಿಕಾರಿಗಳು ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.
ಕೆಡಿಪಿ ಸಭೆಯಲ್ಲಿ ಚರ್ಚಿಸಲು ಸೂಚನೆ
ಕೆಡಿಪಿ ಸಭೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ತ್ರೈಮಾಸಿಕ ಸಭೆಯಲ್ಲೂ ಮಾಹಿತಿ ಹಕ್ಕು ಅರ್ಜಿಗಳ ಕುರಿತು ಚರ್ಚೆ ನಡೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ವಿಷಯದಲ್ಲಿ ಸರ್ಕಾರಕ್ಕೂ
ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಸರ್ಕಾರ ಈ ಕುರಿತು ಆದೇಶ ಹೊರಡಿಸಲಿದೆ ಎಂದರು.
ಬಹುತೇಕ ಅರ್ಜಿದಾರರು ಅಧಿಕಾರಿಗಳನ್ನು ಬೆದರಿಸುತ್ತಾರೆ. ನೀವು ಮಾತ್ರ ಅವರನ್ನು ಬೆದರಿಸಬಾರದು. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕೇಳಿದ ಮಾಹಿತಿ ನೀಡಬೇಕು. ಒಂದು ವೇಳೆ ಅವರು ಅನಕ್ಷರಸ್ಥರಿದ್ದರೆ, ಅವರಿಗೆ ಸಹಾಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದಾಖಲೆಗಳನ್ನು ಸಿಡಿ ಮಾಡಬೇಕು. ಆದರೆ ಇದಕ್ಕೆ ವೆಚ್ಚ ದುಬಾರಿಯಾಗಿದೆ. ಕಡತ ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದರು. ಕ 30 ದಿನಗಳೊಗಾಗಿ ಅವರಿಗೆ ಹಣ ಭರಿಸಿಕೊಂಡು ಮಾಹಿತಿ ನೀಡಬೇಕು ಎಂದರು.
ಅರ್ಜಿದಾರರೊಂದಿಗೆ ಎಲ್ಲವೂ ಪತ್ರ ವ್ಯವಹಾರದಲ್ಲೇ ಆಗಬೇಕು. ಪ್ರತಿ ಅರ್ಜಿಗಳನ್ನು ನಿಗದಿತ ಸಮಯದೊಳಗಾಗಿ ವಿಲೇವಾರಿ ಮಾಡಬೇಕು ಎಂದರು. ಮಾಹಿತಿ ಹಕ್ಕು ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಪ್ರತಿ ನೀಡಬೇಕು. ಅದಕ್ಕೆ ಆದಾಯ ಪತ್ರ ಪಡೆಯಬೇಕು ಎಂದರು. ಜನಪರವಾಗಿರುವ ಈ ಕಾಯ್ದೆಯನ್ನು ಯಶಸ್ಸುಗೊಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು ಎಂದರು.
ಆಯುಕ್ತರಾದ ರಾಜಶೇಖರ ಎಸ್. ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರು ಮತ್ತು ಸರ್ಕಾರದ ಕೊಂಡಿ ಇದ್ದಂತೆ ಎಂಬುದು ಮಾಹಿತಿ ಹಕ್ಕು ಕಾಯ್ದೆಯ ಆಶಯವಾಗಿದೆ. ಪಾರದರ್ಶಕವೇ ಈ ಕಾಯ್ದೆಯ ಮೂಲ ಮಂತ್ರ. ಈ ಕಾಯ್ದೆ ಜಾರಿಗೆ ಮುನ್ನವೇ ಕೆಲವರಿಗಷ್ಟೇ ಮಾಹಿತಿ ಗೊತ್ತಾಗುತ್ತಿತ್ತು. ಆದರೆ ಈ ಕಾಯ್ದೆ ಬಂದ ಬಳಿಕ ಪ್ರತಿಯೊಬ್ಬರಿಗೂ ಮಾಹಿತಿಯ ಸಿಗುತ್ತದೆ ಎಂದರು. ಸಾರ್ವಜನಿಕರು ಕೇಳುವ ಮಾಹಿತಿ ನೀಡಿ,
41 ಎಬಿ ಮಾಡಿದರೆ, ನಿಮಗೆ ಕೆಲಸ ಹಗುರವಾಗುತ್ತದೆ. ಇದೊಂದು ಸರಳ ಕಾಯ್ದೆಯಾಗಿದ್ದು, ಆದರೆ ಶಕ್ತಿ ಶಾಲಿ ಕಾಯ್ದೆಯಾಗಿದೆ. ಹಾಗಾಗಿ 30 ಪುಟಗಳ ಈ ಕಾಯ್ದೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಒಬ್ಬ ವ್ಯಕ್ತಿ 50 ಅರ್ಜಿ ಹಾಕಿದರೂ, ನೀವು ಸಂಪೂರ್ಣ ಕಾಯ್ದೆಯನ್ನು ಅಧ್ಯಯನ ಮಾಡಿದ್ದರೆ, ಸುಲಭವಾಗಿ ಮಾಹಿತಿ ನೀಡಬಹುದಾಗಿದೆ. ಈ ವಿಷಯದಲ್ಲಿ ಆದಿತ್ಯ ಬಂಡೋಪಾಧ್ಯಾಯ ಕೇಸ್ ಓದಿದರೆ, ನಿಮಗೆ ಸುಲಭವಾಗುತ್ತದೆ ಎಂದರು.
ನೀವು ಸಕಾಲಕ್ಕೆ ಉತ್ತರ ಕೊಡಲೇಬೇಕು. ಕೇಳಿದ ಮಾಹಿತಿ ತಕ್ಷಣ ನೀಡಬೇಕು ಎಂದರು. ಅರ್ಜಿದಾರ ಅರ್ಜಿ ನೀಡಿ ಮಾಹಿತಿ ಕೋರಿದಾಗ, ಅದಕ್ಕೆ ನೇರ ಉತ್ತರ ಕೊಡಿ. ಕ್ರಮ ಕೈಗೊಂಡಿದ್ದರೆ, ಕ್ರಮ ಕೈಗೊಂಡಿದ್ದೇವೆ ಎಂಬುದಾಗಿ, ಕ್ರಮ ಕೈಗೊಳ್ಳದಿದ್ದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಉತ್ತರ ನೀಡಬೇಕು ಎಂದರು.
ಪ್ರಥಮ ಮೇಲ್ಮನವಿ ಅಧಿಕಾರಿಗಳು ಪ್ರಕರಣಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿ, ಉತ್ತರ ಕೊಟ್ಟು ನಿಮ್ಮ ಹಂತದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.
ಮಾಹಿತಿ ಹಕ್ಕುಕಾಯ್ದೆಯನ್ನು ಸಂಪೂರ್ಣ ಅರ್ಥೈಸಿಕೊಳ್ಳಬೇಕು ಎಂದರು.
ಇನ್ನೊಬ್ಬ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಅಧಿಕಾರಿಗಳಿಂದ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಮಾತನಾಡಿ, ಈ ಕಾಯ್ದೆ ಸಾರ್ವಜನಿಕರರಿಗೆ ಪಾರದರ್ಶಕವಾಗಿದೆ. ಸಮಯಕ್ಕೆ ಸರಿಯಾಗಿ ಉತ್ತ ಒದಗಿಸಬೇಕು. ಸಾರ್ವಜನಿಕ ಮಾಹಿತಿ ಕೊಡಬೇಕು ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಸೇರಿದಂತೆ ಬೇರೆ ಬೇರೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


















