40 ಸಾವಿರ ಮೇಲ್ಮನವಿ ಇತ್ಯರ್ಥಪಡಿಸಿದ ಆಯೋಗ
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರ ಹೇಳಿಕೆ
ವಿಜಯಪುರ, ಮೇ 2 : ಕಳೆದೊಂದು ವರ್ಷದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಆಯೋಗವು 40 ಸಾವಿರ ದ್ವಿತೀಯ ಮೇಲ್ಮನವಿ ಪ್ರಕರಣಗಳನ್ನು ರಾಷ್ಟ್ರದಲ್ಲೇ ದಾಖಲೆ ಪ್ರಮಾಣದಲ್ಲಿ ಇತ್ಯರ್ಥಪಡಿಸಿದೆ ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ರಾಜಶೇಖರ ಎಸ್ ಹಾಗೂ ಬೆಳಗಾವಿ ಪೀಠದ ಮಾಹಿತಿ ಆಯುಕ್ತರಾದ ಪ್ರಕಾಶ ನಾರಾಯಣ ಚನ್ನಾಳ ಹೇಳಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಅರಿವು ಮೂಡಿಸುವ ವಿಶೇಷ ತರಬೇತಿ ಕಾರ್ಯಾಗಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠದಲ್ಲಿ ಪ್ರತಿ ದಿನ 40-60 ಅರ್ಜಿಗಳ ವಿಚಾರಣೆ ಆಫ್ ಲೈನ್ ಮತ್ತು ಆನ್ ಲೈನ್ನಲ್ಲಿ ನಡೆಯುತ್ತಿದೆ ಎಂದರು.
ಗ್ರಾಮೀಣ ಭಾಗದ ಜನರ ಅರ್ಜಿಗಳಿಗೆ ಹೆಚ್ಚಿನ ಒತ್ತು ನೀಡಿ, ಗ್ರಾಮೀಣ ಭಾಗದ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸರಬರಾಜು, ಸ್ವಚ್ಛತೆ, ಆರೋಗ್ಯದಂತ ಸಮಸ್ಯೆಗಳ ವಿಚಾರಣೆಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದರು.
ಒಂದು ವೇಳೆ ಮಾಹಿತಿ ನೀಡದೇ ಇರುವ ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಲು ಶಿಸ್ತು ಕ್ರಮ ಜರುಗಿಸಿ, ವಿಚಾರಣೆ ಸಮಿತಿಯ ಶಿಫಾರಸು, ದಂಡ ಮತ್ತು ಅರ್ಜಿದಾರರಿಗೆ ಪರಿಹಾರ ಆದೇಶ ಮಾಡಲಾಗುತ್ತಿದೆ ಎಂದರು.
ಬೆಳಗಾವಿ ಪೀಠಕ್ಕೆ ಬರುವ ಅರ್ಜಿಗಳ ಪ್ರಮಾಣ ಹೆಚ್ಚಳ ಇದ್ದುದರಿಂದ ವರ್ಷಕ್ಕೆ 6 ಸಾವಿರದಿಂದ 7 ಸಾವಿರ ವಿಚಾರಣೆಗಳ ಇತ್ಯರ್ಥಕ್ಕಾಗಿ ಯೋಜನೆ ಹಾಕಿಕೊಳ್ಳಲಾಗಿದೆ. ಜಿಲ್ಲಾವಾರು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಯುಕ್ತರಾದ ಪ್ರಕಾಶ ನಾರಾಯಣ ಚನ್ನಾಳ ತಿಳಿಸಿದರು.
ಬೆಳಗಾವಿ ಪೀಠ ಇಲ್ಲಿಯವರೆಗೆ 42.32 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 6.50 ಲಕ್ಷ ರೂ ದಂಡ ವಿಧಿಸಿ, ಅಂತಹ ಅಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದರು.
ನಾವು ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚೆ 59 ಸಾವಿರ ಅರ್ಜಿಗಳು ವಿಲೇವಾರಿಯಾಗಿರಲಿಲ್ಲ. ಆದರೆ ನಾವು ಬಂದ ಬಳಿಕ ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಿದ್ದಾಗಿ ಮಾಹಿತಿ ಹಕ್ಕು ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ತಿಳಿಸಿದರು. ಪ್ರತಿ ಸರ್ಕಾರಿ ಕಚೇರಿ ಮುಂಭಾಗ ಮಾಹಿತಿ ಹಕ್ಕು ಆಯೋಗದ ಫಲಕ ಅಳವಡಿಸಲು ಸೂಚಿಸಿದ್ದಾಗಿ ತಿಳಿಸಿದರು.
ಪ್ರಥಮ ಮೇಲ್ಮನವಿ ವಿಚಾರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಪರಿಣಾಮಕಾರಿ ಹಾಗೂ ಜನಪರ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಆಯುಕ್ತರಾದ ರಾಜಶೇಖರ ಎಸ್. ಮಾತನಾಡಿ, ಮಾಹಿತಿ ಕೊಡಿ. ಇಲ್ಲವಾದಲ್ಲಿ ದಂಡ ತೆತ್ತಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿದ್ದಾಗಿ ತಿಳಿಸಿದರು.ಮಾಹಿತಿ ಹಕ್ಕು ದುರುಪಯೋಗವಾಗುತ್ತದೆ ಎಂದು ಅಧಿಕಾರಿಗಳು ತಮಗೆ ತಿಳಿಸಿದ್ದಾಗಿ ಅವರು ಹೇಳಿದರು. ಅವರಿಗೆ ಮಾಹಿತಿ ಕೊಡಲು ತಿಳಿಸಿದ್ದಾಗಿ ರಾಜಶೇಖರ್ ತಿಳಿಸಿದರು.ಹಾಗಾಗಿ ಮಾಹಿತಿ ಕೊಡಲು ನಿರ್ದೇಶನ ನೀಡಿದ್ದಾಗಿ ತಿಳಿಸಿದರು.ತÀಪ್ಪು ಮಾಹಿತಿ ಕೊಟ್ಟರೆ ದಂಡ ವಿಧಿಸಲಾಗುವುದು ಹಾಗೂವತಕ್ಷಣ ಮಾಹಿತಿ ಕೊಡಲು ಸೂಚಿಸಿದ್ದಾಗಿ ತಿಳಿಸಿದರು.ಕರ್ತವ್ಯ ಲೋಪ ಎಸಗಿದ ಅಧಿಕಾರಿ ವಿರುದ್ಧ ದಿನಕ್ಕೆ 250 ರೂ. ನಂತೆ 25 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು. ಜೊತೆಗೆ ಅಂತಹ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರÀಕ್ಕೆ ಬರೆಯುವುದಾಗಿ ತಿಳಿಸಿದರು.
ಬೆಳಗಾವಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ದುರುಪಯೋಗವಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಎಡಿಸಿ ಡಾ. ಔದ್ರಾಮ ಉಪಸ್ಥಿತರಿದ್ದರು.


















