ನಾಗಬೇನಾಳ ಗ್ರಾಮ ಪಂಚಾಯಿತಿಗೆ ೭೫ ಲಕ್ಷಕ್ಕೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದೆ. ಕೂಡಲೇ ವಸೂಲಿ ಆಗ್ರಹಿಸಿ ಧರಣಿ ಸತ್ಯಾಗ್ರಹ
ಯುವಜನ ಸೇನೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೇತ್ರತ್ವದಲ್ಲಿ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಾರಾಯಣಪುರ ಜಲಾಶಯದ ಕೃಷ್ಣಾ ನದಿ ಹಿನ್ನೀರು ಬಳಸಿ ವಿದ್ಯುತ್ ಉತ್ಪಾದಿಸುವ ಮುರ್ಡೇಶ್ವರ ಪವರ್ ಕಾರ್ಪೋರೇಷನ್ ಕಂಪನಿಯು ನಾಗಬೇನಾಳ ಗ್ರಾಮ ಪಂಚಾಯಿತಿಗೆ ೭೫ ಲಕ್ಷಕ್ಕೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದೆ. ಕೂಡಲೇ ವಸೂಲಿ ಮಾಡಿ ಪಂಚಾಯಿತಿ ಅಭಿವೃದ್ದಿಗೆ ಬಳಸಬೇಕು, ಸರ್ಕಾರಕ್ಕೆ ವಂಚಿಸಿ ನಷ್ಟ ಉಂಟು ಮಾಡಿದ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವಜನ ಸೇನೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರು ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.
ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, ೨೪ ವರ್ಷಗಳಲ್ಲಿ ಅಂದಾಜು ೨-೩ ಕೋಟಿ ರೂ ತೆರಿಗೆ ವಂಚಿಸಲಾಗಿದೆ. ೧೪-೨೦೦೦ದಿಂದ ೨-೧೨-೨೦೨೪ರವರೆಗೆ ಕಂಪನಿಯು ವಿದ್ಯುತ್ ಉತ್ಪಾದನೆಯ ವಾಣಿಜ್ಯ ತೆರಿಗೆ ಕಟ್ಟಿಲ್ಲ. ಪಿಡಿಓನಿಂದ ಜಿಲ್ಲಾಧಿಕಾರಿಯವರೆಗೆ ಪತ್ರ ವ್ಯವಹಾರ ನಡೆಸಿದ್ದರೂ ಸ್ಪಂಧಿಸಿಲ್ಲ. ಮೋಸ ಮಾಡಿದ್ದು ಸಾಬೀತಾಗಿದ್ದರೂ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಬಡವರಿಗೆ, ಸಣ್ಣ, ಮಧ್ಯಮ ಕಂಪನಿಯವರ ಮೇಲೆ ತೆರಿಗೆಗಾಗಿ ಗದಾಪ್ರಹಾರ ನಡೆಸುವ ಅಧಿಕಾರಿಗಳು ದೊಡ್ಡ ಮಟ್ಟದ ಬಾಕಿ ಉಳಿಸಿಕೊಂಡಿರುವ ಈ ಕಂಪನಿ ವಿರುದ್ಧ ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿ ತಾಪಂ ಯೋಜನಾಧಿಕಾರಿ ಖೂಬಾಸಿಂಗ್ ಜಾಧವ ಇದುವರೆಗೂ ಕೈಕೊಂಡ ಕ್ರಮಗಳ ಮಾಹಿತಿ ನೀಡಿದರು. ತಾಪಂ ಇಓ ಎನ್.ಎಸ್.ಮಸಳಿ ಆಗಮಿಸಿ ಬೇಡಿಕೆ ಪರಿಶೀಲಿಸಲು ಕಾಲಾವಕಾಶ ಕೇಳಿದರು. ಇದರಿಂದ ಹೋರಾಟಗಾರರು ಆಕ್ರೋಶಗೊಂಡು ಈ ಕುರಿತು ಅನೇಕ ಬಾರಿ ಪಿಡಿಓ, ಹಿಂದಿನ ತಾಪಂ ಇಓ ಗಮನಕ್ಕೆ ತಂದಿದ್ದನ್ನು ತಿಳಿಸಿ ಹರಿಹಾಯ್ದರು. ಕೆಲಹೊತ್ತಿನ ನಂತರ ಮತ್ತೇ ಧರಣಿ ಸ್ಥಳಕ್ಕೆ ಬಂದ ಇಓ ಕಾಲಾವಕಾಶ ಕೇಳಿದರು. ಜಿಪಂ ಸಿಇಓ, ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ತೆರಿಗೆ ವಂಚನೆ ಕುರಿತು ಕ್ರಮ ಕೈಕೊಳ್ಳುವುದಾಗಿ, ಬಾಕಿ ತೆರಿಗೆ ತುಂಬಿಸಿಕೊಳ್ಳುವುದಾಗಿ ಲಿಖಿತ ಪತ್ರ ನೀಡಿದರೆ ಮಾತ್ರ ಧರಣಿ ಕೈಬಿಡುವುದಾಗಿ ಹೋರಾಟಗಾರರು ಸ್ಪಷ್ಟಪಡಿಸಿದರು. ಈ ಹಂತದಲ್ಲಿ ಸ್ಪಷ್ಟತೆ ಸಿಗದ ಕಾರಣ ಧರಣಿ ಬುಧವಾರಕ್ಕೂ ಮುಂದುವರೆಸಲು ತೀರ್ಮಾನಿಸಿದರು.
ಸಂಘಟನೆಗಳ ಪ್ರಮುಖರಾದ ಗಿರಿಯಪ್ಪ ತಳವಾರ, ಮಲ್ಲು ಬಿಜ್ಜೂರ, ರಾಜು ಮಸಿಬಿನಾಳ, ಸಂಗಯ್ಯ ಸಾರಂಗಮಠ, ಶಿವು ವನಕಿಹಾಳ, ರಫೀಕ ತೆಗ್ಗಿನಮನಿ, ಬಾಬು ತಡ್ಲಿಮನಿ, ಗುರು ತಂಗಡಗಿ, ಶಕೀಲ ಅವಟಿ, ರಾಹುಲ್ ಚಲವಾದಿ, ರಮೇಶ ಚಲವಾದಿ, ಶರಣು ಕಂಬಳಿ, ವೀರೇಶ ವಡ್ಡರ, ಸಂಗಮೇಶ ತಳವಾರ, ಶೇಖಪ್ಪ ಚಲವಾದಿ, ಮಂಜುನಾಥ ತಿಳಗೂಳ, ಶೇಖಸಾ ನದಾಫ, ಹಣಮಂತ ಗೌಂಡಿ, ಸುರೇಶ ಚಲವಾದಿ, ಮಂಜುನಾಥ ಬಾವಿಕಟ್ಟಿ, ಎಂ.ಎಚ್.ಚಲವಾದಿ ಇನ್ನಿತರರು ಇದ್ದರು.
ಮುದ್ದೇಬಿಹಾಳ: ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರು ಯುವಜನ ಸೇನೆ ಪದಾಧಿಕಾರಿಗಳು ಧರಣಿ ನಡೆಸಿದ ವೇಳೆ ಇಓ ಎನ್.ಎಸ್.ಮಸಳಿ ಭೇಟಿ ನೀಡಿ ಬೇಡಿಕೆ ಆಲಿಸಿದರು. ಶಿವಾನಂದ ವಾಲಿ, ಮಹಿಬೂಬ ಕುಳಗೇರಿ, ಸಂಗಯ್ಯ ಸಾರಂಗಮಠ, ಮಲ್ಲು ಬಿಜ್ಜೂರ, ಗಿರಿಯಪ್ಪ ತಳವಾರ ಇನ್ನಿತರರು ಇದ್ದಾರೆ.