ಬಡತನವೇ ಪಾಠ ಕಲಿಸುವ ವಿಶ್ವವಿದ್ಯಾಲಯ : ಎಸಿ ಅಬೀದ್ ಗದ್ಯಾಳ
ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ..! ಎಸಿ ಅಬೀದ್ ಗದ್ಯಾಳ..
ಇಂಡಿ : ಬಡತನದಲ್ಲಿ ಹುಟ್ಟಿದ್ದು ತಪ್ಪಲ..! ಆದರೆ ಬಡತನದಲ್ಲಿ ಸಾಯುವುದು ತಪ್ಪು..! ಬಡತನವನ್ನು ಮೆಟ್ಟಿ ನಿಲ್ಲಲು ಬಡತನವನ್ನು ಚಾಲೆಂಜಾಗಿ ಸ್ವೀಕಾರ ಮಾಡಬೇಕು. ನಿಮ್ಮಲ್ಲಿರುವ ಬಡತನವನ್ನು ಓಡಿಸುವ ಜೊತೆಗೆ ನಿಮ್ಮ ಸುತ್ತಮುತ್ತಲಿರುವ ಪರಿಸರ, ಪ್ರಕೃತಿಯಲ್ಲಿಯ ಬಡತನ ಓಡಿಸಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆ ಹಾಗೂ ಪಿ.ಯು ಕಾಲೇಜಿನ ಆಶ್ರಯದಲ್ಲಿ ಜರುಗಿದ ಎಸ್ ಎಸ್ ಎಲ್ ಸಿ ಹಾಗೂ ಪಿಯು ಕಾಲೇಜು ವಿಧ್ಯಾರ್ಥಿಗಳ ಬಿಳ್ಕೋಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೆಳದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಶಸ್ಸಿಗೆ ನಿರಂತರ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಅನಿವಾರ್ಯ,ಅತ್ಯಗತ್ಯ. ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ. ಮಕ್ಕಳ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಆಶಯ. ಶಿಕ್ಷ ಣ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲೆ ಒಳ್ಳೆಯ ಗುಣನಡತೆಗಳನ್ನು ರೂಢಿಸಿಕೊಳ್ಳಬೇಕು. ಪ್ರೀತಿ, ತ್ಯಾಗ, ಪರೋಪಕಾರ, ಸತ್ಯ, ನ್ಯಾಯ, ಕರುಣೆ, ಅನುಕಂಪದಂತಹ ಸದ್ಗುಣಗಳನ್ನು ರೂಢಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು.
ಪ್ರಾಥಮಿಕ & ಪ್ರೌಢ ಹಂತದಲ್ಲಿ ಪಡೆಯುವ ಶಿಕ್ಷಣವು ಮುಂದಿನ ಉನ್ನತ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ಜೀವನದಲ್ಲಿ ಒಳ್ಳೆಯ ನಡತೆ, ಇತರರ ನೋವಿಗೆ ಸ್ಪಂದಿಸುವಂತಹ ಸದ್ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.