‘ಹರಗೃಹದಿಂದ ಹರಿ ಗೃಹದಿಂ ಸುರಗೃಹದಿಂ ಬೌದ್ದಾಲಯದಿಂ ಗೊರವರ ಸವಣರ ನೆರವಿಗಳಿಂದಿಂಡಿ ನಾಡೆ ಸೋಗೈಸಿ ತೋರ್ಕಂ’ ಎನ್ನುವ ಭಾವೈಕ್ಯತೆ ಸಾರುವ ಇಂಡಿ ಶಾಸನದ ಉಲ್ಲೇಖದಂತೆ ಇಂಡಿ ಇಂದು ಸರ್ವ ಧರ್ಮಗಳ ಸಮನ್ವಯದ ಬೀಡಾಗಿ ಇಂದು ಪವಾಡ ಪುರುಷ ಶ್ರೀ ಶಾಂತೇಶ್ವರನ ನೆಲವೀಡಾಗಿದೆ.
ಶ್ರೀ ಶಾಂತೇಶ್ವರನ ಚಾರಿತ್ರಿಕ ಹಿನ್ನಲೆ
ಕ್ರಿ. ಶ. ೧೨ ನೇ ಶತಮಾನದ ಇಂಡಿ ಶಾಸನದ ಪ್ರಕಾರ ತನ್ನದೆಯಾದ ಆಚಾರ-ವಿಚಾರ ಸಂಪ್ರದಾಯಗಳಿಂದ ಇಂಡಿ
ಪಟ್ಟಣ ವೈಭವದೊಂದಿಗೆ ಕಂಗೊಳಿಸುತ್ತಿತ್ತು.ಶಾಸನದ ಪ್ರಕಾರ ಅಂದು ಇಂಡಿಯಲ್ಲಿ ಎರಡು ದೇವಸ್ಥಾನಗಳಿದ್ದು ಮೊದಲನೆಯದು ಬಂದಿನಾಥ ಎರಡನೇಯದು ಕರ ಕಂಠೇಶ್ವರ ದೇವಸ್ಥಾನಗಳು ತಮ್ಮ ಮಠಗಳೊಂದಿಗೆ ಅಸ್ತಿತ್ವದಲ್ಲಿದ್ದವು. ಈಗೀನ ಕಿರಿ ಇಂಡಿ ಪುರ ಹುಟ್ಟುವ ಮುನ್ನ ಮೊದಲು ಹಿರೇ ಇಂಡಿ ಅವತರಣವಾಗಿತ್ತು. ಇಂಡಿ ಎಂದರೆ ಇದರ ಅರ್ಥ ಒಟ್ಟಾಗಿರುವುದು ಇನ್ನೊಂದು ಅರ್ಥದಲ್ಲಿ ಹೂವುಗಳ ಗೊಂಚಲು ಎನ್ನುವ ಸೊಗಸಾದ ಅರ್ಥಪೂರ್ಣವಾದ ಹೆಸರಿದೆ. ಪ್ರಾಚೀನ ಕಾಲದಲ್ಲಿ ಇಂಡಿಗೆ ಪಯಕ್ಷೇತ್ರವೆಂದು ಕರೆಯುತ್ತಿದ್ದರು ಎನ್ನುವ ಪ್ರತೀತಿಯಿದೆ.
ನೂರಾರು ವರ್ಷಗಳ ಹಿಂದೆ ಈಗಿನ ಶಾಂತೇಶ್ವರ ದೇವಾಲಯದ ಪ್ರದೇಶದಲ್ಲಿ ಒಂದು ದೊಡ್ಡದಾದ ಬನ ಪ್ರದೇಶವಿತ್ತು.ಅತೀ ವಿರಳ ಜನಸಂಖ್ಯೆಯಿರುವ ಈ ಕಾಡು ಪ್ರದೇಶದಲ್ಲಿ ದಿನಾಲೂ ಒಂದು ಆಕಳು ಬಂದು ಇಲ್ಲಿನ ಹುತ್ತದಲ್ಲಿ ಬಂದಿಯಾಗಿದ್ದ ಬನದ ಲಿಂಗಕ್ಕೆ ಹಾಲನ್ನು ಹಿಂಡುತ್ತಿತ್ತು.ಒಮ್ಮೆ ಈ ಕೌತುಕವನ್ನು ಗಮನಿಸಿದ
ವ್ಯೆಕ್ತಿಯೊರ್ವ ಪುರದ ಪ್ರಮುಖ ಜನರಿಗೆ ಮಾಹಿತಿ ತಿಳಿಸಿದಾಗ ಜನರು ಕುತೂಹಲದಿಂದ ಓಡೋಡಿ ಬಂದು ಹುತ್ತು ಅಗೆದು ನೋಡಿದಾಗ ಅದರಲ್ಲಿ ಲಿಂಗವೊಂದು ಕಂಡು ಬಂದಿತು.
ಇದರಿಂದ ಆಶ್ಚರ್ಯ ಚಕಿತರಾದ ಜನರು ನಿತ್ಯವು ಇಲ್ಲಿನ ಲಿಂಗಕ್ಕೆ ಭಯ ಭಕ್ತಿಯಿಂದ ಪೂಜಿಸ ತೊಡಗಿದರು.ಇಲ್ಲಿ ಪೂಜೆಗೊಳ್ಳುತ್ತಿದ್ದ ಲಿಂಗ ದೇವಾಲಯದ ಪ್ರದೇಶಕ್ಕೆ ಮುಂದೆ ಕೆಲ ವರ್ಷಗಳ ನಂತರ ಶ್ರೀ ಸದ್ಗುರ ಶಾಂತೇಶ್ವರರೆಂಬ ಪವಾಡ ಪುರುಷನ ಆಗಮನವಾಯಿತು. ಶ್ರೀ ಶಾಂತೇಶ್ವರರು ಹಲವಾರು ವರ್ಷಗಳಿಂದ ಇಲ್ಲಿನ ದೇವಸ್ಥಾನದಲ್ಲಿ ನೆಲೆನಿಂತು ಅನೇಕ ರೀತಿಯ ಆಧ್ಯಾತ್ಮಿಕ ಕ್ರಾಂತಿ ಯೋಗ, ಜೀವನ ದರ್ಶನ,
ಪಾಠ-ಪ್ರವಚನ ಪವಾಡಗಳನ್ನು ಮಾಡಿ ಜನಮಾನಸದಲ್ಲಿ ನೆಲೆ ನಿಂತರು.ಅವರು ಇಂಡಿಯನ್ನು ತಮ್ಮ ಧಾರ್ಮಿಕ ಸೇವೆಗಳಿಂದ ಕಾರ್ಯಕ್ಷೇತ್ರ,ಕರ್ಮಕ್ಷೇತ್ರ, ಧರ್ಮಕ್ಷೇತ್ರವಾಗಿ ಮಾಡಿಕೊಂಡ ಪರಿಣಾಮ ಇಂದು ಇಂಡಿ ಶ್ರೀ ಶಾಂತೇಶ್ವರನ ಸುಕ್ಷೇತ್ರವೆಂದು ಪರಿಚಯವಾಗಿ ಲೋಕ ಪ್ರಸಿದ್ಧಿಯಾಗಿ ಇತಿಹಾಸವಾಗಿದೆ.
ಶ್ರೀ ಶಾಂತೇಶ್ವರನ ಪವಾಡಗಳು
ಇಂಡಿಯ ಶ್ರೀ ಸದ್ಗುರು ಶಾಂತೇಶ್ವರರ ಮಾಡಿದ ಪವಾಡಗಳ ಕುರಿತು ಇಲ್ಲಿನ ಭಕ್ತರು ಈಗಲೂ ಕೊಂಡಾಡುತ್ತಾರೆ. ಒಮ್ಮೆ ಊರಿನ ಬಡವಿ ಹೆಣ್ಣು ಮಗಳೊಬ್ಬಳ ಕೂಸು ದುರಂತದಿಂದ ಅಸು ನೀಗಿದಾಗ ದೇವಸ್ಥಾನದ ದಿಬ್ಬದ ಮೇಲೆ ನಿಂತ ಶಾಂತೇಶ್ವರ ಮಹಾ ಮಹೀಮರು ಸತ್ತ ಹಸುಗೂಸನ್ನು ಬದುಕಿಸಿ ಪವಾಡ ಮೆರೆದು ಜನಪ್ರೀಯರಾದರು.
ಇಂಡಿಯ ಶ್ರೀ ಶಾಂತೇಶ್ವರರು ನಿತ್ಯವು ಕಲ್ಯಾಣದ ಅನುಭವ ಮಂಟಪಕ್ಕೆ ಹೂವುಗಳ ದಂಡೆಯ ಹಾರವನ್ನು ಕಳುಹಿಸುತಿದ್ದರು ಎನ್ನುವ ವಾಡಿಕೆಯ ಮಾತುಗಳು ಕೂಡಾ ಇಂಡಿಯಲ್ಲಿ ಈಗಲೂ ಚಾಲ್ತಿಯಲ್ಲಿವೆ. ಹಾಗೂ ಇವರು ಇಂಡಿಯಲ್ಲಿ ಚಮತ್ಕಾರದ ಅಕ್ಕಿಯ ಪವಾಡವನ್ನು ಮಾಡಿದ ಪ್ರತೀತಿಯಿದೆ.
ಈಗಲೂ ಶಾಂತೇಶ್ವರ ದೇವಸ್ಥಾನದ ಲಿಂಗಕ್ಕೆ ಕ್ವಿಂಟಾಲ ಗಟ್ಟಲೆ ಅಕ್ಕಿಯನ್ನು ಬರೀ ಒಂದೇ ಒಂದು ದಾರದ ಎಳೆಯಿಂದ ಕಟ್ಟುತ್ತಾರೆ. ಸೂಜಿಗಲ್ಲಿನಂತೆ ಸೆಳೆಯುವ ಈ ಮನ ಮೋಹಕ ದೃಶ್ಯವನ್ನು ಕಾಣಲು ಜನರು ಕಾತುರದಿಂದ ಕಾಯುತ್ತಾರೆ.
ಹಾಗೆ ಇಲ್ಲಿನ ಭಕ್ತರ ಸಣ್ಣಪುಟ್ಟ ಕಾಯಿಲೆಗಳಿಗೆ ಶ್ರೀ ಶಾಂತೇಶ್ವರನ ಬೆತ್ತದ ಸ್ಪರ್ಶದಿಂದ ಭಕ್ತರ ಶಾರೀರಿಕ ಪೀಡೆಗಳು ಮರೆಯಾಗಿರುವ ಅನೇಕ ನಿದರ್ಶನಗಳನ್ನು ನಾವು ಕಾಣಬಹುದು. ಸೂಫಿ ಸಂತ ಮಂಜಲೇಪೀರನಿಗೆ ದೃಷ್ಠಿ ನೀಡಿದ ಉದಾಹರಣೆಯೂ ಕೂಡಾ ಒಂದಾಗಿದೆ.
ಇಂಡಿ ನಗರದ ಆರಾಧ್ಯ ದೇವನಾಗಿರುವ ಶ್ರೀಶಾಂತೇಶ್ವರನಿಗೆ ನೆಲ್ಲಕ್ಕಿಯ ನೈವಿದ್ಯ ಅತ್ಯಂತ ಇಷ್ಟವಾದ ಸಂಗತಿಯಾಗಿದೆ. ಇದರಿಂದ ಇಲ್ಲಿನ ಜನರು ಮೊದಲು ಶಾಂತೇಶ್ವರನಿಗೆ ತಮ್ಮ ಹೊಲ ಗದ್ದೆಗಳಲ್ಲಿ ನೆಲ್ಲಕ್ಕಿ ಬೆಳೆಯುವ ಪದ್ದತಿ, ನೆಲ್ಲಕಿಯನ್ನು ಲಿಂಗ ಪೂಜೆಗೆ ಕಟ್ಟುವ, ನೈವಿದ್ಯೆ ಹಿಡಿಯುವ ಭಕ್ತಿಯ ಪದ್ದತಿ ಇಂದಿಗೂ ಕೂಡಾ ಬಹಳಷ್ಟು ರೂಡಿಯಲ್ಲಿದೆ.
ಶ್ರೀ ಶಾಂತೇಶ್ವರ ದೇವಸ್ಥಾನದ ಹಿನ್ನಲೆ
ಈಗಿನ ಶ್ರೀ ಶಾಂತೇಶ್ವರ ದೇವಾಲಯವು ಹೋಳ್ಕರ ಶೈಲಿಯಿಂದ ನಿರ್ಮಿತವಾಗಿದ್ದು ಬಹಳಷ್ಟು ಸುಂದರ ಕಲಾಕೃತಿಯನ್ನು ಹೊಂದಿದೆ. ಇದು ಮೊದಲು ವೈಷ್ಣವ ಶೈಲಿಯ ಶಿವನ ಆರಾಧನ ಮಂದಿರವಾಗಿತ್ತು.ಈ ರೀತಿಯ ಮತ ಪಂಥಗಳ ಸಾಮರಸ್ಯ ಸಾರುವ ದೇವಾಲಯಗಳು ರಾಷ್ಟ್ರಕೂಟರ ಕಾಲದಲಿ ಹೆಚ್ಚಾಗಿ ನಿರ್ಮಿತವಾಗಿದ್ದವು.ಇಲ್ಲಿನ ದೇವಾಸ್ಥಾನದ ಲಿಂಗಕ್ಕೆ ಶ್ರೀಶೈಲ ಪದ್ಧತಿಯಂತೆ ತ್ರಿಕಾಲ ಪೂಜೆ ನಡೆಯುತ್ತದೆ.ಅದು ಬಾಲ್ಯ- ಯೌವ್ವನ-ಮುಪ್ಪನ್ನು ಹೋಲುತ್ತ ಮನುಷ್ಯನ ಜೀವನ ಚಕ್ರವನ್ನು ಹೋಲುವ ಅದ್ಭುತವಾದ ಮೌಲ್ಯಾದಾರಿತ ಸಂಯೋಜನೆ ಹೊಂದಿದೆ ಎಂದು ಅಭಿಪ್ರಾಯ ಸಲಾಗಿದೆ.
ಜಾತ್ರೆಯ ವೈಶಿಷ್ಟಗಳು.
ಶಾಂತೇಶ್ವರ ಜಾತ್ರೆ ಮೂರು ದಿನಗಳ ಕಾಲ ನಿರಂತರವಾಗಿ ಜರಗುವದು. ಈ ಜಾತ್ರೆಯಲ್ಲಿ ಪುರವಂತರ ವೀರಗಾಸೆ, ಸಾಮೂಹಿಕ ವಿವಾಹ, ಅಕ್ಕಿಯ ಪೂಜೆ,ನಂದಿಕೋಲ ಮೆರವಣಿಗೆ,ಸಿಡಗಾಯಿ ಒಡೆಯುವ ಪದ್ದತಿ, ಮಂಜಲೆ ಪೀರನಿಗೆ ಗಂಧ ಗಲೀಪು ಅರ್ಪಣೆ, ಜಂಗಿ ನಿಖಾಲಿ ಕುಸ್ತಿ, ಚಿತ್ರ ವಿಚಿತ್ರ ಮದ್ದು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ಜರಗುತ್ತವೆ.
ದಶರಥ ಕೋರಿ ಶಿಕ್ಷಕರು ಇಂಡಿ.


















