ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ 3 ದುರ್ಮಣ
ಮುದ್ದೇಬಿಹಾಳ: ಜಾತ್ರೆಯಲ್ಲಿ ಸ್ಪರ್ಧೆ, ನಾಟಕ ನೋಡಲೆಂದು ಬಂದವರು ಬಜಾಜ್ ಪಲ್ಸಾರ್ ೨೦೦ ಸಿಸಿ ಬೈಕ್ ಸವಾರನ ವ್ಹೀಲಿಂಗ್ ಹುಚ್ಚಾಟಕ್ಕೆ ಸವಾರರ ಸಹಿತ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಗಾಯಗೊಂಡ ಐವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಗುರುವಾರ ಮಧ್ಯರಾತ್ರಿ ೧೧-೧೫ ಗಂಟೆ ನಂತರ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕುಂಟೋಜಿ ಗ್ರಾಮದ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬೈಕ್ ಸವಾರ ತಾಳಿಕೋಟೆ ತಾಲೂಕು ಗೋಟಖಂಡ್ಕಿ ಗ್ರಾಮದ ನಿಂಗರಾಜ ದೇವೇಂದ್ರಪ್ಪ ಚೌಧರಿ (೨೨), ಅದೇ ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ದೇವರ ಹಿಪ್ಪರಗಿ ತಾಲೂಕು ಹಂಚಲಿ ಗ್ರಾಮದ ಅನೀಲ ಮಲ್ಲಪ್ಪ ಖೈನೂರ (೨೭), ರಸ್ತೆ ಬದಿ ನಿಂತಿದ್ದ ಮುದ್ದೇಬಿಹಾಳ ತಾಲೂಕು ಮಲಗಲದಿನ್ನಿ ಗ್ರಾಮದ ಉದಯಕುಮಾರ ರಮೇಶ ಪ್ಯಾಟಿ (೧೯) ಮೃತರು. ಮಲಗಲದಿನ್ನಿ ಗ್ರಾಮದ ರಾಯಪ್ಪ ಮಹಾಂತೇಶ ಬಾಗೇವಾಡಿ, ಹಣಮಂತ್ರಾಯ ಹುಲ್ಲಪ್ಪ ಕುರುಬಗೌಡ್ರ ಇವರ ಸ್ಥಿತಿ ಚಿಂತಾಜನಕವಾಗಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ವೆಂಟಿಲೇಟರ್ನಲ್ಲಿರಿಸಲಾಗಿದೆ. ಮಲಗಲದಿನ್ನಿಯ ಪ್ರಶಾಂತ ಹುಲ್ಲಪ್ಪ ಕುರುಬಗೌಡ್ರ, ಶಾಹಿದ್ ಕಾಶಿಮಸಾಬ ಹುನಗುಂದ, ನಾಗಬೇನಾಳದ ಶಂಕ್ರಪ್ಪ ಯಮನಪ್ಪ ಕೊಂಡಗೂಳಿ ಗಾಯಗೊಂಡವರಾಗಿದ್ದು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಘಟನೆ ನಡೆದ ಕೂಡಲೇ ಪ್ರತ್ಯಕ್ಷದರ್ಶಿಗಳು ಆರೋಗ್ಯ ಕವಚ ಅಂಬ್ಯೂಲೆನ್ಸ್ಗೆ ಕರೆ ಮಾಡಿದ್ದಾರೆ. ಚಲನಚಿತ್ರ ಕಲಾವಿದರೂ ಆಗಿರುವ ಇಎಂಟಿ ಶ್ರೀಶೈಲ ಹೂಗಾರ ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಗೊಂಡ ಎಲ್ಲರನ್ನೂ ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ಸಕಾಲಕ್ಕೆ ಕರೆತಂದು ದಾಖಲಿಸಿದ್ದಾರೆ. ಡ್ಯೂಟಿ ಡಾಕ್ಟರ್ ಪರಶುರಾಮ ವಡ್ಡರ ಎಲ್ಲರಿಗೂ ಚಿಕಿತ್ಸೆ ನೀಡಿ ರಾಯಪ್ಪ, ಹಣಮಂತ್ರಾಯ ಇವರನ್ನು ಬಾಗಲಕೋಟೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಿದರು.
ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶವಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ಕ್ರಮ ಕೈಕೊಂಡರು. ಶುಕ್ರವಾರ ಬೆಳಿಗ್ಗೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಬಸವನ ಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾವಿ, ನಂತರದಲ್ಲಿ ಎಸ್ಪಿ ಋಷಿಕೇಶ ಸೋನಾವಣೆ ಸ್ಥಳಕ್ಕೆ ಬಂದು ಘಟನೆಯ ಮಾಹಿತಿ ಸಂಗ್ರಹಿಸಿದರು. ಮೃತ ಉದಯಕುಮಾರನ ತಂದೆ ರಮೇಶ ಪ್ಯಾಟಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಬೆಳಗಿನ ಜಾವ ೪ ಗಂಟೆಗೆ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ: ಕುಂಟೋಜಿಯಲ್ಲಿ ಬಸವೇಶ್ವರ ಜಾತ್ರೆಯ ಕೊನೇ ದಿನ ಗುರುವಾರ ವಿವಿಧ ಶಕ್ತಿ ಪ್ರದರ್ಶನ ಸ್ಪರ್ಧೆ, ರಾತ್ರಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಸುತ್ತಲಿನ ಗ್ರಾಮಗಳ ಯುವಕರು ಸ್ಪರ್ಧೆ, ನಾಟಕ ನೋಡಲು ಆಗಮಿಸಿದ್ದರು. ಇವರಲ್ಲಿ ಮಲಗಲದಿನ್ನಿ ಗ್ರಾಮದ ಯುವಕರ ತಂಡ ರಸ್ತೆ ಬದಿ ಮೂತ್ರ ವಿಸರ್ಜನೆಗೆ ನಡೆದುಕೊಂಡು ಹೊರಟಿತ್ತು. ನಿಂಗರಾಜನು ತಾಳಿಕೋಟೆ ಕಡೆಯಿಂದ ವೇಗವಾಗಿ ಬೈಕ್ ವ್ಹೀಲಿಂಗ್ ಮಾಡುತ್ತ ೧-೨ ಸಾರಿ ಅದೇ ರಸ್ತೆಯಲ್ಲಿ ಸಂಚರಿಸಿದ್ದ. ಹೀಗೆ ಸಂಚರಿಸುವಾಗ ವೃದ್ಧನೊಬ್ಬನ ಕೈಗೆ ಬೈಕ್ ಬಡಿದಿತ್ತು. ಆದರೂ ನಿಲ್ಲಿಸದೆ ೩ನೇ ಬಾರಿ ವೇಗವಾಗಿ ವ್ಹೀಲಿಂಗ್ ಮಾಡುವಾಗ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಹೊರಟಿದ್ದ ಮಲಗಲದಿನ್ನಿಯ ಯುವಕರ ತಂಡಕ್ಕೆ ಹಿಂದಿನಿAದ ಜೋರಾಗಿ ಡಿಕ್ಕಿ ಹೊಡೆಯಿತು. ರಭಸಕ್ಕೆ ಬೈಕನಲ್ಲಿದ್ದ ಇಬ್ಬರು, ರಸ್ತೆ ಪಕ್ಕದಲ್ಲಿದ್ದ ಒಬ್ಬ ಸೇರಿ ಮೂವರು ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದರು. ರಸ್ತೆ ತುಂಬೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳು, ಗಾಯಾಳುಗಳ ದೇಹದಿಂದ ಹರಿಯುತ್ತಿದ್ದ ರಕ್ತ ಮಡುಗಟ್ಟಿ ನಿಂತು ಕತ್ತಲೆಯಲ್ಲೂ ಭೀಭತ್ಸತೆ ಸೃಷ್ಟಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಾರಸುದಾರರ ಗೋಳಾಟ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ತಂದಿರಿಸಲಾಗಿತ್ತು. ಮೃತರ ತಂದೆ, ತಾಯಿ, ಅಜ್ಜ, ಬಂಧುಗಳು ಶುಕ್ರವಾರ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬಾಳಿ ಬದುಕಬೇಕಿದ್ದ ತಮ್ಮ ಮನೆಮಕ್ಕಳ ಸಾವಿಗೆ ಪಡುತ್ತಿದ್ದ ಸಂಕಟ, ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಿಂಗರಾಜ ಜಾತ್ರೆಗೆಂದು ಬಂದು ಪ್ರಾಣ ತೆತ್ತದ್ದು ಆತನ ಕುಟುಂಬಕ್ಕೆ ಸಹಿಸಲಾಗದ ಶೋಕ ತಂದಿಟ್ಟಿತ್ತು. ಸಂಜೆ ವೇಳೆವೆ ಅವರವರ ಗ್ರಾಮಗಳಲ್ಲಿ ಶೋಕಸಾಗರದ ನಡುವೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಏತನ್ಮಧ್ಯೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್ನಲ್ಲಿರುವ ಇಬ್ಬರು ಯುವಕರು ಸಾವು ಬದುಕಿನ ನಡೆವೆ ಹೋರಾಟ ನಡೆಸಿದ್ದು ಅವರ ಪಾಲಕರೂ ಸಹಿತ ದಿಗ್ಭಾçಂತರಾಗಿ ದಿಕ್ಕು ತೋಚದವರಂತಿದ್ದಾರೆ.
ಮುದ್ದೇಬಿಹಾಳ: ಘಟನಾ ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನಾವಣೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈ ಸಂಜಯ್ ತಿಪ್ಪರಡ್ಡಿ, ಪೊಲೀಸ್ ಸಿಬ್ಬಂದಿ ಇದ್ದಾರೆ.