ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ ಎಂದು ನಿರ್ಗಮಿತ ತಾಲೂಕು ದಂಡಾಧಿಕಾರಿ ಬಲರಾಮ ಕಟ್ಟಿಮನಿ ಹೇಳಿದರು.
ನ್ಯಾಯವಾದಿ ಚೇತನ ಶಿವಶಿಂಪಿ ಹಾಗೂ ಅವರ ಸ್ನೇಹಿತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ತಾಲೂಕಿನ ಜನ ಹೃದಯ ಶ್ರೀಮಂತಿಕೆ ಉಳ್ಳವರು. ಕಚೇರಿಯ ಸಿಬ್ಬಂದಿಗಳೂ ಕೂಡ ಅಷ್ಟೇ ಒಳ್ಳೆಯವರು. ಇಲ್ಲಿನ ಸೇವೆ ನನಗೆ ಸಾಕಷ್ಟು ಹೊಸ ವಿಷಯಗಳನ್ನು ಪರಿಚಯಿಸುವುದರ ಜೊತೆಗೆ ಒಳ್ಳೆಯ ಅನುಭವ ತಂದು ಕೊಟ್ಟಿದೆ. ಇಲ್ಲಿನ ಜನತೆ ಮತ್ತು ಸಿಬ್ಬಂದಿಗಳನ್ನು ನಾನೆಂದಿಗೂ ಮರೆಯಲಾರೆ ಎಂದರು.
ಈ ವೇಳೆ ನ್ಯಾಯವಾದಿ ಚೇತನ ಶಿವಶಿಂಪಿ ಅವರು ಮಾತನಾಡಿ, ಕಟ್ಟಿಮನಿ ಸಾಹೇಬರು ಅತ್ಯಂತ ಸರಳ ಜೀವಿಗಳು. ಸೌಮ್ಯ ಸ್ವಭಾವದವರು. ಅಷ್ಟೇ ಕಾನೂನನ್ನು ಪಾಲಿಸುವವರು. ಕಾನೂನಿಗೆ ಗೌರವಿಸದವರಿಗೆ ಬೆವರಿಳಿಸುತ್ತಿದ್ದರು. ತಮ್ಮ ಬಳಿ ಬಂದ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದು ತಾವೇ ಬಗೆಹರೆಸುತ್ತಿದ್ದರು. ಇಂತಹ ವ್ಯಕ್ತಿತ್ವದ ಅಧಿಕಾರಿಯನ್ನು ಈವೆರೆಗೂ ನಾನು ಕಂಡಿಲ್ಲ. ಸಧ್ಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿಗೆ ವರ್ಗಾವಣೆಯಾದ ಇವರ ಸೇವೆಯನ್ನು ಪಡೆಯುವ ಹುಕ್ಕೇರಿ ತಾಲೂಕಿನ ಜನತೆ ಪುಣ್ಯವಂತರು. ಸಾಹೇಬರು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಆಶಿಸಿದರು.
ಶಿಕ್ಷಕ ಹಾಗೂ ಕಲಾವಿದ ಟಿ.ಡಿ.ಲಮಾಣಿ ಅವರು ಮಾತನಾಡಿ, ಶಿಸ್ತಿನ ಸಿಪಾಯಿಗಳಾದ ಕಟ್ಟಿಮನಿ ಸಾಹೇಬರ ಸೇವೆ ಮಾದರಿಯಾಗಿತ್ತು. ಇವರ ಸೇವೆಯಲ್ಲಿ ಕಚೇರಿ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಇನ್ನೂ ಇವರ ಸೇವೆ ನಮ್ಮ ತಾಲೂಕಿಗೆ ಅವಶ್ಯವಿತ್ತು. ಆದರೆ ಇಲಾಖಾ ನಿಯಮಗಳ ಪ್ರಕಾರ ವರ್ಗಾವಣೆ ಅನಿವಾರ್ಯ. ಹುಕ್ಕೇರಿಯಲ್ಲಿಯೂ ಒಳ್ಳೆಯ ಸೇವೆ ನೀಡುವ ಭರವಸೆ ನನಗಿದೆ ಎಂದರು.
ಈ ವೇಳೆ ಕಂದಾಯ ನಿರೀಕ್ಷಕ ಪವನ ತಳವಾರ, ಪ್ರಮುಖರಾದ ನಾಗೇಂದ್ರ ಶಿವಶಿಂಪಿ, ಭೀಮಪ್ಪ ಲಮಾಣಿ, ವಿಕ್ರಂ ಬಿರಾದಾರ, ವಿಜಯ ಬಡಿಗೇರ, ಶಂಕರ ದುರ್ವೆ, ಮಹೇಶ ಕುರಣಿ ಸೇರಿದಂತೆ ಮತ್ತೀತರರು ಇದ್ದರು.


















