ಮುದ್ದೇಬಿಹಾಳ:ನಾವು ಕಲಿತ ವಿದ್ಯೆ ನಮ್ಮ ಸ್ವಹಿತದ ಜೊತೆಗೆ ದೇಶದ, ನಾಡಿನ ಏಳ್ಗೆಗೆ ಸಲ್ಲುವಂತಾಗಬೇಕೆಂದು ಮಾಜಿ ಶಾಸಕ, ರಾಜ್ಯ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಅವರು ಭಾನುವಾರ ಪಟ್ಟಣದ ಟಾಪ್ ಇನ್ ಟೌನ್ ಹಾಲ್ ನಲ್ಲಿ ಮುದ್ದೇಬಿಹಾಳ ವ್ಯಾಪಾರಸ್ಥರ ಸಂಘದವರು ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಟ್ಟಣದ ಇಂದ್ರಾಣಿ ಪ್ಯಾಷನ್ ಮಾಲೀಕರಾದ ಗಜೇಂದ್ರ ಜೈನ ಅವರ ಪುತ್ರ ತರುಣ ಜೈನ ಅವರನ್ನು ಸನ್ಮಾನಿಸಿ ಮಾತನಾಡಿದರು.
ಉನ್ನತ ಪರೀಕ್ಷೆಯಲ್ಲಿ ಪಾಸಾಗಲು ಶ್ರಮಿಸಿ, ಮಾರ್ಗದರ್ಶನ ನೀಡಿದ ತಂದೆ, ತಾಯಿ, ಸಮಾಜದ, ದೇಶದ ಋಣ ತೀರಿಸುವ ಕೆಲಸವನ್ನು ನಾವು ಮಾಡಬೇಕು. ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ ಅಬ್ದುಲ್ ಕಲಾಂ ಅವರಂತೆ ದೇಶ ಸೇವೆಗೆ ನಮ್ಮ ಜ್ಞಾನ ಮೀಸಲಿಡಬೇಕು.
ವರ್ತಮಾನದಲ್ಲಿ ನಾವು ಹಣವನ್ನು ಭೌತಿಕವಾಗಿ ನೋಡದೇ ಡಿಜಿಟಲ್ ರೂಪದಲ್ಲಿ ಹಣವನ್ನು ಎಣಿಸುತ್ತಿದ್ದೇವೆ. ತಂತ್ರಜ್ಞಾನ ಆಧಾರಿತ ಹಣಕಾಸು ವ್ಯವಸ್ಥೆಗೆ ನಾವು ಇನ್ನಷ್ಟು ಕೊಡುಗೆ ನೀಡುವಂತಾಗಬೇಕೆಂದು ಅವರು ಹೇಳಿದರು.
ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮಹಾಂತಪ್ಪ ನಾವದಗಿ ಮಾತನಾಡಿ, ಶಿಕ್ಷಣದಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ನಾವು ಸಂಸ್ಕಾರವಂತರಾಗಿ ನಮ್ಮ ಸೇವೆ ನೀಡಬೇಕು ಎಂದರು. ಸಾಹಿತಿ ಅಶೋಕ ಮಣಿ ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸಾದವರು ದೊಡ್ಡ ದೊಡ್ಡ ನಗರಗಳಿಗೆ ಹೋಗುತ್ತಾರೆ. ತರುಣ ಜೈನ ಅವರು ಇಲ್ಲಿಯೇ ಇದ್ದುಕೊಂಡು ತಮ್ಮ ಸೇವೆಯನ್ನು, ಜ್ಞಾನವನ್ನು ಎಲ್ಲರಿಗೂ ನೀಡುವಂತಾಗಬೇಕು. ತರುಣ ಜೈನ ಅವರು ಇಡೀ ಜೈನ ಸಮಾಜಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಸಭೆಯನ್ನುದ್ದೇಶಿಸಿ ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಭು ಕಡಿ, ವಕೀಲರ ಸಂಘದ ಅಧ್ಯಕ್ಷರಾದ ಶಶಿಕಾಂತ ಮಾಲಗತ್ತಿ ಮಾತನಾಡಿದರು.
ವೇದಿಕೆಯಲ್ಲಿ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಮಾಜಿ ಅಧ್ಯಕ್ಷ ಬಾಬುಲಾಲ ಓಸ್ವಾಲ, ಗಜೇಂದ್ರ ಜೈನ್ ಇದ್ದರು.
ಕಾರ್ಯಕ್ರಮದಲ್ಲಿ ತರುಣ ಜೈನ ಅವರನ್ನು ಪಟ್ಟಣದ ವಿವಿಧ ಸಂಘ, ಸಂಸ್ಥೆಗಳು ಸನ್ಮಾನಿಸಿದವು. ಮಹಾಬಲೇಶ್ವರ ಗಡೇದ ಸ್ವಾಗತಿಸಿದರು. ಡಾ.ವೀರೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಪಡದಾಳಿ ನಿರೂಪಿಸಿದರು. ಮಾಣಿಕಚಂದ ದಂಡಾವತಿ ವಂದಿಸಿದರು.