ಇಂಡಿ :ಸಾಹಿತ್ಯದ ಅವಲೋಕನ ಮಾಡುವ ಘಟ್ಟದಲ್ಲಿ ನಾವಿದ್ದು, ಸಮಾಜದ ದಿಕ್ಕು ಬದಲಿಸುವ ಸಾಹಿತ್ಯದ ಸೃಷ್ಟಿ ಮಕ್ಕಳಿಂದ ಆಗಬೇಕೆಂದು ಖ್ಯಾತ ಹಿರಿಯ ಮಕ್ಕಳ ಸಾಹಿತ್ಯ ಹ.ಮ ಪೂಜಾರಿ ಹೇಳಿದರು.
ಮಂಗಳವಾರ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಮತಿ ರಮಾಬಾಯಿ ಪ್ರೌಢಶಾಲೆಯಲ್ಲಿ ವಿಜಯಪುರ ಜಿಲ್ಲಾ “ಮಕ್ಕಳ ಸಾಹಿತ್ಯ ಸಂಗಮ” ತಾಲೂಕ ಘಟಕ ಉದ್ಘಾಟಿಸಿ ಹಾಗೂ ಪದಗ್ರಹಣ ನೆರವೇರಿಸಿ ಮಾತನಾಡತ್ತಿದ್ದರು.
ಮೊಬೈಲ್ನ ಆವಿಷ್ಕಾರ ಒಂದು ಕುತಂತ್ರವಾಗಿದ್ದು, ಅದು ನೆನಪಿನ ಶಕ್ತಿಯನ್ನು ಕುಂದಿಸಲು ಬಂದಂತಿದೆ. ಆದರೆ ಇದನ್ನು ತಂತ್ರವನ್ನಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯದ ಪ್ರಸಾರ ಮಾಡಬೇಕು. ನಮ್ಮತನವನ್ನು ಪ್ರಕಟಿಸಬೇಕು. ಇದನ್ನು ದಾಖಲಿಸುವ ಕೆಲಸ ಈಗ ಆಗುತ್ತಿರುವುದು ಸ್ವಾಗತಾರ್ಹವಾಗಿದೆ. ಭಾಷಾ ಸೊಗಡನ್ನು ಬಿಂಬಿಸುವ ಚಟುವಟಿಕೆ ನಡೆಯುತ್ತಿದೆ. ಇಂತಹ ಕಾರ್ಯಗಳಿಂದ ಆತ್ಮಸ್ಥೈರ್ಯ ಮಕ್ಕಳಲ್ಲಿ ಮೂಡುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಜಿಲ್ಲಾಧ್ಯಕ್ಷ ಎ. ಆರ್ ಹೆಗ್ಗನದೊಡ್ಡಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಹಾಗೂ ಮಕ್ಕಳಿಗೆ ಒಳ್ಳೆಯ ರೀತಿಯಾದ ಶಿಕ್ಷಣ ಸಂಸ್ಕಾರವನ್ನು ಕೊಡಿಸುವುದು ಈ ಪರಿಷತ್ತಿನ ಕೆಲಸವಾಗಿರುತ್ತದೆ. ಮಕ್ಕಳೇ ದೇವರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವ ದ್ದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ಸದಾನಂದ ಈರನಕೇರಿ ಇವರನ್ನು ಮಕ್ಕಳ ಸಾಹಿತ್ಯ ತಾಲೂಕು ಘಟಕದ ಅಧ್ಯಕ್ಷರಾಗಿ, ಗೌರವಾಧ್ಯಕ್ಷ ಎನ್.ಎಮ್ ಕಾಳೆ, ಕೃಷ್ಣಾ ಎಚ್, ಜೆ.ಡಿ ಪುಜಾರಿ, ವ್ಹಿ. ಎಮ್ ಶಿಂದೆ, ಅಶೋಕ ಬಿರಾದಾರ, ಐ. ಎಸ್ ರೂಗಿ, ಎಸ್.ಐ ಹಿರೇಮಠ ರಮೇಶ್ ಪವಾರ, ಎಸ್.ಎಸ್ ಡಬ್ಬಿಗಾರ,ಬಿ. ಎಸ್ ಕುಂಬಾರ, ಬಿ.ಜಿ. ಹೆಗ್ಗೊಂಡೆ, ಅಂಬಿಕಾ ಈರನಕೇರಿ ಇನ್ನೂ ಅನೇಕರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಪ ಪೂ. ಸ್ವರೂಪಾನಂದ ಮಹಾ ಸ್ವಾಮಿಗಳು ಓಂಕಾರ ಆಶ್ರಮ ವಹಿಸಿಕೊಂಡು ಆಶೀರ್ವಚನ ನೀಡಿದರು. ನೂತನ ಅಧ್ಯಕ್ಷ ಸದಾನಂದ ಈರನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧ ಶಾಲೆ, ಕ್ರಿಯಾಶೀಲ ಉಪನ್ಯಾಸಕರಿಗೆ, ಶಿಕ್ಷಕರಿಗೆ, ಶಿಕ್ಷಕಿಯರಿಗೆ ಪದಗ್ರಹಣ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಎಚ್ ಬಿ ಸಾಹುಕಾರ್, ಸ್ವಾಗತ ಬಿ ಎಸ್ ಕಂಬಾರ, ವಂದನಾರ್ಪಣೆ ವಿ.ಎಮ್ ಸಿಂಧೆ ಮಾಡಿದರು.