ಸರ್ವ ಪಕ್ಷಗಳ ಸಭೆ : ಸಿಂದಗಿ ಜಿಲ್ಲೆಯಾಗಿಸಲ್ಲು ಜ. ೧೧ ಕ್ಕೆ ಸಿಮ್. ಡಿಸಿಎಮ್ ಬಳಿ ನಿಯೋಗ..
ಸಿಂದಗಿ : ಸಿಂದಗಿಯನ್ನು ಜಿಲ್ಲೆ ಮಾಡಲು ಸರ್ವ ಪಕ್ಷಗಳ ಮತ್ತು ಸಂಘಟನೆಗಳು ಒತ್ತಾಯಿಸಿ ಆರಂಭಗೊಂಡ ಹೋರಾಟದ ಹಿನ್ನೆಲೆಯಲ್ಲಿ ಜ.11 ರ ನಂತರ ಬೆಂಗಳೂರಿಗೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬಸವಮಂಟಪದಲ್ಲಿ ಭಾನುವಾರ ಸಂಜೆ ನಡೆದ ಸಿಂದಗಿ ಜಿಲ್ಲೆ ಬೇಡಿಕೆ ಪೂರ್ವಭಾವಿ ಸಭೆಯ “ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು. ಮಾಜಿ ಶಾಸಕರಾದ ಶರಣಪ್ಪಣ್ಣ ಸುಣಗಾರ, ರಮೇಶ ಭೂಸನೂರ, ವಿಧಾನಪರಿಷತ್ ಮಾಜಿ ಸದಸ್ಯ ‘ಅರುಣ ಶಹಾಪೂರ, ಸಾಹಿತಿಗಳು, ಸಂಘಟನೆ ಪ್ರಮುಖರನ್ನೊಳಗೊಂಡ 10 ಜನರ ನಿಯೋಗವೊಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವ, ಸರ್ಕಾರದ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಿಂದಗಿ ಜಿಲ್ಲೆಯನ್ನಾಗಿ ರಚನೆ ಮಾಡುವಂತೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಂದಗಿ “ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಸಿಂದಗಿಯನ್ನು ನಗರಸಭೆಯನ್ನಾಗಿ ಮಾರ್ಪಾಡು ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ಸಮೀಕ್ಷೆ ಮಾಡಲಾಗಿದ್ದ ಶೇಡಬಾಳ ಸಿಂದಗಿ ಶಹಾಬಾದ ರೇಲ್ವೆ ಮಾರ್ಗ ಆರಂಭಗೊಳ್ಳುವ ದಿಸೆಯಲ್ಲಿ ಹೋರಾಟ ಕೈಗೊಳ್ಳುವ ಕುರಿತು ಮಾತನಾಡಿದರು.
ಮಕ್ಕಳ ಸಾಹಿತಿ ಹ.ಮ.ಪೂಜಾರ ಮಾತನಾಡಿ, ರೇಲ್ವೆ ಮಾರ್ಗ ತೀರ ಅಗತ್ಯವಾಗಿದ್ದು ಈ ಬಗ್ಗೆ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ ಸಿಂದಗಿ ಜಿಲ್ಲೆ ರಚನೆ ಕುರಿತು ಪಕ್ಷಾತೀತವಾಗಿ ಮತಕ್ಷೇತ್ರದ ಶಾಸಕರು, ಮಾಜಿ ಶಾಸಕರು ಒಂದುಗೂಡಿ ಹೋರಾಟಕ್ಕೆ ಸಜ್ಜಾಗಿರುವುದು ವಿಶೇಷವಾಗಿದೆ. ಜಿಲ್ಲೆಯಾಗುವ ಕಾಲ ಸನ್ನಿಹಿತವಾಗಿದೆ. ಹೋರಾಟ ನಿರಂತರವಾಗಿರಬೇಕು’ ಎಂದು ವಿವಿಧ ಸಂಘಟನೆಗಳಿಗೆ ಮನವಿ ಮಾಡಿದರು.
ನಗರ ಸುಧಾರಣಾ ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಬಿಎಸ್ಪಿ ಪಕ್ಷದ ರಾಜ್ಯ ಘಟಕದ ಪ್ರಮುಖರಾದ ದಸ್ತಗೀರ ಮುಲ್ಲಾ, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಜೆಡಿಎಸ್ ಪ್ರಮುಖ ಪ್ರಕಾಶ ಹಿರೇಕುರುಬರ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಹರ್ಷವರ್ಧನ ಪೂಜಾರಿ ಅಶೋಕ ಸುಲ್ಪಿ ಯಶ್ವಂತ್ರಾಯಗೌಡ ರೂಗಿ ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ ಕ.ಆ.ಜಾ.ಉ.ಕ.ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಜನ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷೆ ನೀಲಮ್ಮ ಯಡ್ರಾಮಿ ಶೈಲಜಾ ಸ್ಥಾವರಮಠ ಶಿಲ್ಪಾ ಕುದರಗೊಂಡ ಸೇರಿದಂತೆ ಅನೇಕರು ಇದರು.