ನಿಧಿಗಾಗಿ ಭೂಮಿ ತೋಡುತ್ತಿದ್ದ ತಂಡದ ಮೇಲೆ ಗ್ರಾಮಸ್ಥರು ದಾಳಿ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ತಾಲ್ಲೂಕಿನ ಮದರಿ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿರುವ ಹಳೇಯ ಮದರಿ ಮುಳುಗಡೆ ಗ್ರಾಮದ ದೇವಸ್ಥಾನವೊಂದರ ಹಿಂಭಾಗ ನಿಧಿಗಾಗಿ ಭೂಮಿ ತೋಡುತ್ತಿದ್ದ ತಂಡದ ಮೇಲೆ ಗ್ರಾಮಸ್ಥರು ದಾಳಿ ನಡೆಸಿ, ಕೆಲವರನ್ನು ಬಂಧಿಸಿ ಊರಿಗೆ ಕರೆತಂದು ನಂತರ ಪೊಲೀಸರ ವಶಕ್ಕೆ ನೀಡಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ. ರಾತ್ರಿ 8 ಗಂಟೆ ಸುಮಾರಿಗೆ ಅಂದಾಜು 20-25 ಜನರ ತಂಡ ಜನಸಂಚಾರ ಇಲ್ಲದ, ಮುಳ್ಳುಕಂಟಿ ಬೆಳೆದ ಹಳೇಯ ನಾಶವಾದ ಕಟ್ಟಡದಲ್ಲಿ ಜೆಸಿಬಿ ಯಂತ್ರ ಬಳಸಿ ಅಗೆಯುತ್ತಿರುವುದನ್ನು ಕಂಡ ಶಿವರಾಯ ಕನ್ನೊಳ್ಳಿ ಮತ್ತು ಗ್ರಾಮದ ಯುವಕರು ಸ್ಥಳಕ್ಕೆ ಧಾವಿಸಿ ವಿಚಾರಿಸಿದ್ದಾರೆ. ಹಾಳುಮಣ್ಣಿಗಾಗಿ ಅಗೆಯುತ್ತಿದ್ದೇವೆ ಎಂದು ತಂಡದವರು ಸುಳ್ಳು ಹೇಳಿದ್ದಾರೆ. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿ ನೆಲದ ಆಳದಲ್ಲಿರುವ ಖನಿಜ ಅಥವಾ ನಿಕ್ಷೇಪ ಪತ್ತೇ ಹಚ್ಚುವ ಯಂತ್ರ ಇರುವುದು ಗೊತ್ತಾಗಿ ತೀವ್ರವಾಗಿ ವಿಚಾರಣೆ ನಡೆಸಿದಾಗ ನಿಧಿ ಶೋಧಿಸಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ದಾಳಿ ನಡೆದ ಕೂಡಲೇ ನಿಧಿಗಾಗಿ ಅಗೆಯುತ್ತಿದ್ದವರು ಓಡಿ ಹೋಗಿದ್ದರಿಂದ 6 ಜನರ ಯುವಕರ ತಂಡದ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಎಲ್ಲರನ್ನೂ ಗ್ರಾಮದೇವತೆ ದೇವಸ್ಥಾನಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯಿ ಬಿಟ್ಟಿದ್ದಾರೆ. ನಿಧಿ ಶೋಧಿಸುವ ತಂಡದ ನಾಯಕ ಹಡಲಗೇರಿ ಗ್ರಾಮದ ವಿಠ್ಠಲ ಇಂಡಿ ಎಂಬಾತ ಊರಿನ ಧಣಿಗಳು ಸ್ಥಳಕ್ಕೆ ಬಂದು ಜಾಗ ತೋರಿಸಿದ್ದರಿಂದ ಅಲ್ಲಿ ಅಗೆಯಲು ಮುಂದಾಗಿದ್ದೆವು ಎಂದು ಹೇಳಿದ್ದು ಮತ್ತು ಯಂತ್ರವನ್ನು ಹೊಂದಿದ್ದ ವ್ಯಕ್ತಿ ತನ್ನದು ತಪ್ಪಾಯಿತು. ನನಗೆ ಇವರೇ ಫೋನ್ ಮಾಡಿ ಬಾ ಎಂದು ಕರೆಸಿದ್ದರು. ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚುತ್ತಿರುವುದು ಗ್ರಾಮಸ್ಥರು ಘಟನೆ ನಡೆದ ಕೂಡಲೇ ಮಾಡಿಕೊಂಡ ವಿಡಿಯೋದಲ್ಲಿ ದಾಖಲಾಗಿದೆ. ತಡರಾತ್ರಿಯೇ ಮುದ್ದೇಬಿಹಾಳ ಪೊಲೀಸ್ ಠಾಣೆಯಿಂದ ಪೊಲೀಸರು ಸ್ಥಳಕ್ಕೆ ಬಂದು ಎಲ್ಲ ಆರು ಆರೋಪಿಗಳನ್ನು, ಆಲೂರ ಆ್ಯಂಡ್ ಕಂಪನಿ ಹೆಸರಿನಲ್ಲಿದ್ದ ಜೆಸಿಬಿ ಯಂತ್ರವನ್ನು, 3-4 ಬೈಕ್ಗಳನ್ನು ವಶಪಡಿಸಿಕೊಂಡು ಠಾಣೆಗೆ ಒಯ್ದರು. ನಿಧಿ ಶೋಧನಾ ತಂಡದ ನಾಯಕ ವೃತ್ತಿಯಲ್ಲಿ ಸೆಂಟ್ರಿAಗ್ ಕೆಲಸ ಮಾಡುತ್ತಿರುವ ಹಡಲಗೇರಿ ಗ್ರಾಮದ ವಿಠ್ಠಲ ನಿಂಗಪ್ಪ ಇಂಡಿ, ಜೆಸಿಬಿ ಚಾಲಕ ಮುದ್ದೇಬಿಹಾಳದ ಶಾರೂಖ ದಸ್ತಗೀರ ಮುಲ್ಲಾ, ಇವರಿಗೆ ಸಹಾಯಕರಾಗಿದ್ದ ಬಾಗಲಕೋಟ ಜಿಲ್ಲೆ ಕಮತಗಿಯ ನಿಂಗಯ್ಯ ಗಂಗಾಧರಯ್ಯ ಪಾಪನಾರಮಠ (ನಿಧಿ ಶೋಧಿಸುವ ಯಂತ್ರ ಹೊಂದಿದ್ದ ವ್ಯಕ್ತಿ), ಕೃಷ್ಣಪ್ಪ ಭೀಮರಾಯಪ್ಪ ಹುಗ್ಗಿ, ಮುದ್ದೇಬಿಹಾಳದಲ್ಲಿ ಗೌಂಡಿ ಕೆಲಸ ಮಾಡುವ ರಮೇಶ ಶಾಂತಪ್ಪ ವಡ್ಡರ, ಕುಂಟೋಜಿ ಗ್ರಾಮದ ಯಲ್ಲಪ್ಪ ಲಕ್ಷೀಬಾಯಿ ಚಲವಾದಿ ಇವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. ನದಿಯ ಆಚೆ ದಡದಿಂದ (ಹುನಗುಂದ ತಾಲೂಕು) ತೆಪ್ಪದಲ್ಲಿ ಬಂದಿದ್ದ ಕೆಲವರು ಗ್ರಾಮಸ್ಥರು ದಾಳಿ ನಡೆಸುತ್ತಿದ್ದಂತೆಯೇ ಮುಳ್ಳುಕಂಟಿಗಳಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ರಾಮಸ್ಥರ ಆರೋಪ: ನಿಧಿ ಶೋಧಿಸಲು ನಮ್ಮನ್ನು ಕರೆಸಿದ್ದು ಊರಿನ ಧಣಿಗಳಾದ ಮಲಕೇಂದ್ರರಾವ್ ಮಲ್ಲನಗೌಡ ನಾಡಗೌಡರ ಎನ್ನುವುದನ್ನು ಆರೋಪಿಗಳೇ ತಿಳಿಸಿದ್ದಾರೆ. ನಿಧಿ ಶೋಧಿಸಿದ ಜಾಗ ರಕ್ಕಸ ತಂಗಡಗಿ ಯುದ್ಧ ನಡೆದ ಸ್ಥಳವಾಗಿದೆ. ಅಲ್ಲಿ ಊರಿನ ಹಿರಿಯರೆನ್ನಿಸಿಕೊಂಡವರು ಮುಳುಗಡೆ ಆಗುವುದಕ್ಕೂ ಮೊದಲು ವಾಸವಾಗಿದ್ದರು. ಆದರೆ ಮುದ್ದೇಬಿಹಾಳ ಠಾಣೆಯ ಪಿಎಸೈ ಸಂಜಯ್ ತಿಪ್ಪರಡ್ಡಿ ಅವರು ಯಾರದೋ ಒತ್ತಡಕ್ಕೆ ಮಣಿದು ಪ್ರಮುಖ ಆರೋಪಿಯ ಮೇಲೆ ಪ್ರಕರಣ ದಾಖಲಿಸುವ ಬದಲು ಅವರನ್ನೇ ಸಂಪರ್ಕಿಸಿ ಅವರ ಕಡೆಯ ಜನರಿಂದಲೇ ಸ್ಥಳ ಪಂಚನಾಮೆ ನಡೆಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನ್ನ ಮೇಲೆಯೇ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಾರೆ. ಪ್ರತ್ಯಕ್ಷದರ್ಶಿಗಳಿಂದ ಸ್ಥಳ ಪಂಚನಾಮೆ ನಡೆಸುವ ಬದಲು ಧಣಿಗಳ ಕಡೆಯವರನ್ನು ಕರೆಸಿ ಪಂಚನಾಮೆ ನಡೆಸಿದ್ದಾರೆ. ಈ ಕುರಿತು ಬೆಳಗಾವಿ ವಲಯ ಐಜಿಪಿಯವರಿಗೆ ನಾವೆಲ್ಲ ಗ್ರಾಮಸ್ಥರು ಮಾಹಿತಿ ನೀಡಿದ್ದೇವೆ. ಇದಲ್ಲದೆ ನಿಧಿ ಶೋಧಿಸುವಲ್ಲಿ ದೊಡ್ಡವರ ಕೈವಾಡ ಇದ್ದು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದೇವೆ ಎಂದು ನಿಧಿ ಶೋಧಿಸುವ ತಂಡವನ್ನು ಹಿಡಿದು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವ ಗ್ರಾಮದ ಯುವ ಮುಖಂಡ ಶಿವರಾಯ ಕನ್ನೊಳ್ಳಿ ಮಾದ್ಯಮದವರಿಗೆ ತಿಳಿಸಿದ್ದಾರೆ.