ಅಫಜಲಪುರ: ಸಾಹೇಬ್ರ ನಾವು ದಿನಾಲು ಕೂಲಿ-ನಾಲಿ ಮಾಡಿ ನಮ್ಮ ಜೀವನಾ ಸಾಗಿಸಬೇಕ್ರಿ. ನಮ್ಮ ಕುಟುಂಬದಾಗ ಶಾಲೆ ಕಲಿತು ಹೆಚ್ಚಿನ ಸಾಧನೆ ಮಾಡಿದವರು ಯಾರೂ ಇಲ್ರೀ. ಈಗ ನಮ್ಮ ಮಗಾ ಸಾಧನೆ ಮಾಡಿರುವುದು ನಮ್ಗ ಬಾಳ ಖುಷಿ ಕೊಟ್ಟೈತ್ರೀ…’
ಹೌದು ಇದು ಮತ್ತೊಬ್ಬರ ಜಮೀನಿನಲ್ಲಿ ನಿತ್ಯ ದುಡಿದು ಜೀವನ ಸಾಗಿಸುವ ತಾಲೂಕಿನ ಹೊಸೂರ ಗ್ರಾಮದ ಸಿದ್ದಾರಾಮ ಅಂದೇವಾಡಿ ಅವರ ಮಾತುಗಳು. ಮಗ ಬೀರಪ್ಪ ಅಂದೇವಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 616 ಅಂಕ (ಶೇ 98.56).ಗಳಿಸಿರುವ ಬಗ್ಗೆ ತಂದೆ ಸಿದ್ದರಾಮ ಅವರ ಪ್ರತಿಕ್ರಿಯೆ.
ಬೀರಪ್ಪ ಅಂದೇವಾಡಿ ತಾಲೂಕಿನ ಹೊಸೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಂದೆ, ತಾಯಿ ಬಡತನದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಅಂಥವರ ಮಗನಾಗಿ ಹುಟ್ಟಿದ ಬೀರಪ್ಪ ಯಾವುದೇ ಟ್ಯೂಶನ್ ತರಬೇತಿಯ ಬೆನ್ನು ಬೀಳದೆ ಮನೆಯಲ್ಲಿಯೇ ಕುಳಿತು ಸತತ ಅಧ್ಯಯನ ಮಾಡಿದ್ದಾರೆ. ವಿದ್ಯಾಭ್ಯಾಸದ ಮಧ್ಯೆ ಪಾಲಕರ ಕೆಲಸ ಕಾರ್ಯಗಳಿಗೂ ನೆರವಾಗಿದ್ದಾರೆ. ಅವರ ಸಾಧನೆಯಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜೀವನದಲ್ಲಿ ಮುಂದೆ ಎಂ ಬಿ ಬಿ ಎಸ್ ಪದವಿ ಮುಗಿಸಿ ವೈದ್ಯನಾಗ ಬೇಕು ಎಂದು ಆಸೆ ಹೊಂದಿದ್ದಾನೆ.
ದುಡಿಮೆ ನಂಬಿ ಬದುಕಿರುವೆ:
ಹೊಲಕ್ಕೆ ಕೆಲಸಕ್ಕೆ ಹೋಗಿದ್ದಾಗ ಮಗ ಶೇ 98 ರಷ್ಟು ಅಂಕಗಳನ್ನು ಗಳಿಸಿ ಪಾಸಾಗಿದ್ದಾನೆಂದು ಜಮೀನಿಗೆ ಬಂದು ಗ್ರಾಮಸ್ಥರೊಬ್ಬರು ಹೇಳಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ಮಗ ಹೆಚ್ಚು ಓದಲು ಆಸಕ್ತಿ ವ್ಯಕ್ತಪಡಿಸಿದ್ದಾನೆ. ದುಡಿಮೆಯೇ ನಂಬಿ ಬದುಕಿರುವರು ನಾವು. ಮಗ ಎಲ್ಲಿಯವರೆಗೂ ಕಲಿಯುತ್ತಾನೆ ಅಲ್ಲಿಯವರೆಗೆ ಕಲಿಸುತ್ತೇನೆ ಎಂದು ತಂದೆ ಸಿದ್ದರಾಮ ಅಂದೇವಾಡಿ ಹೇಳಿದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.