ಅಫಜಲಪುರ: ಯುವ ಜನತೆ ರಾಷ್ಟ್ರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಚೌಕಟ್ಟಾಗಿದ್ದು, ಪ್ರತಿ ರಾಷ್ಟ್ರದ ಯಶಸ್ಸಿನ ಆಧಾರವೇ ಯುವ ಪೀಳಿಗೆಯಾಗಿದ್ದು, ಅವರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ದೇಶದ ಭವಿಷ್ಯವಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡೆ ಹೇಳಿದರು. ಅವರು ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಸ್ವಾಮಿ ವಿವೇಕಾನಂದರು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಕರ ಶಕ್ತಿಯಾಗಿದ್ದಾರೆ. ವಿವೇಕಾನಂದರ ಜೀವನ ಮತ್ತು ಬೋಧನೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುವ ಉತ್ತಮ ಮೂಲವಾಗಿವೆ. ಜಗತ್ತನ್ನು ಗೆಲ್ಲುವ ಅತ್ಯುತ್ತಮ ಅಸ್ತ್ರ ಶಾಂತಿ ಮತ್ತು ಶಿಕ್ಷಣ ಎಂದು ನಂಬಿದ್ದ ಅವರ ವಿಚಾರಗಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಸುರೇಶ ಕೋರಚಗಾಂವ ಮಾತನಾಡಿ ಸದಾ ಸಕಾರಾತ್ಮಕ ಚಿಂತನೆಗಳಿಂದ ಯುವಕರನ್ನು ಪ್ರೇರೇಪಿಸುತ್ತಿದ್ದ ಸ್ವಾಮಿ ವಿವೇಕಾನಂದ ಅವರು ತಾವು ಹೋದ ಕಡೆಗೆ ಶಿಕ್ಷಣದ ಬಗ್ಗೆ ಒತ್ತಿ ಹೇಳುತ್ತಿದ್ದರು. ದೈಹಿಕ , ಮಾನಸಿಕ ಧಾರ್ಮಿಕ ,ಮಹಿಳಾ ಹಾಗೂ, ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಹಾಲಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು . ಶಿಕ್ಷಕರಾದ ವಿಜಯಲಕ್ಷ್ಮಿ ಬಂಡೆಪ್ಪ, ಭಾಗೀರಥಿ ಬಿರಾದಾರ ಕಲಾವತಿ ಕೊಳಲಗಿ ಚನ್ನನಗೌಡ ಮಾಲಿಪಾಟೀಲ, ಶ್ರೀಶೈಲ ಸನದಿ, ಮರೆಪ್ಪ ಸಿಂದೆ ಅಲ್ಲಾಭಕ್ಷ ಚೌಧರಿ, ಸಲೀಮ ಜಮಾದಾರ ಶೈಲಾ ಹೆಚ್,ಸುಮಲತಾ ಕುಂಬಾರ,ದತ್ತಪ್ಪ ಡೊಂಬಾಳೆ, ವಿಜಯಲಕ್ಷ್ಮಿ ಭಾವಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಅಫಜಲಪುರ.