ಲಿಂಗಸುಗೂರು: ಬಯಲಾಟ ಉತ್ತರ ಕರ್ನಾಟದ ಪ್ರಸಿದ್ಧ ಜಾನಪದ ಕಲೆ. ಅದು ನಮ್ಮ ಸಂಸ್ಕೃತಿಯ ಜೀವಾಳವಾಗಿದೆ ಪುರಾಣ ಮತ್ತು ಚರಿತ್ರಾತ್ಮಕ ವಸ್ತು ಕಥೆಗಳನ್ನು ನಿರೂಪಿಸುವ ಗಂಡು ಕಲೆಯಾಗಿದೆ ಸಾಂಸ್ಕೃತಿಕ ಆಯಾಮಗಳೊಂದಿಗೆ ಮನುಷ್ಯ ಬದುಕಿನೊಂದಿಗೆ ಮುಖಾಮುಖಿಯಾಗುವ ಇದು ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ ಎಂದು ಸಂತೆಕೆಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರೇಂದ್ರ ಪಾಟೀಲ ಹೇಳಿದರು.
ಕುಣಿಕೆಲ್ಲೂರು ಮತ್ತು ಮಿಟ್ಟಿಕೆಲ್ಲೂರು ಅವಳಿ ಗ್ರಾಮಗಳ ಅಧಿದೈವ ಶ್ರೀ ಹಳ್ಳಿ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ರಾಜರಾಜೇಶ್ವರಿ ನವತರುಣ ನಾಟ್ಯ ಸಂಘದವರು ಗ್ರಾಮದ ಹೊರವಲಯದ ಭವ್ಯ ರಂಗಸಜ್ಜಿಕೆಯಲ್ಲಿ ಆಯೋಜಿಸಿದ್ದ ಶ್ರೀ ರಾಜರಾಜೇಶ್ವರಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಟಕಗಳು ಮನೋರಂಜನೆಯ ಜೊತೆಗೆ ಪರಸ್ಪರ ಅನ್ಯೋನ್ಯತೆ, ಸಮಾನತೆ, ಸಹೋದರತೆ, ಸಹಬಾಳ್ವೆಯೊಂದಿಗೆ ಬದುಕಲು ಉತ್ತೇಜಿಸುತ್ತವೆ. ಧಾರ್ಮಿಕ, ಪೌರಾಣಿಕ, ಹಾಸ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಪ್ರದರ್ಶನಗೊಂಡು ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ.
ನಮ್ಮೂರಿನ ಜಾನಪದ ಕಲಾವಿದರು ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ ಪ್ರದರ್ಶಿಸಿ ಈ ಕಲೆಯನ್ನು ಜೀವಂತವಾಗಿರಿಸಿರುವುದು ನಮ್ಮೂರಿನ ಜನರ ಹೆಗ್ಗಳಿಕೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ರಡ್ಡೆಪ್ಪಗೌಡ, ಎಸ್ ಡಿಎಮ್ ಸಿ ಅಧ್ಯಕ ಬಸನಗೌಡ ನಂದಿಹಾಳ, ಡಾ.ವಿರುಪಾಕ್ಷಯ್ಯ ಗುರುವಿನ ಮಠ, ವಿರಭದ್ರಯ್ಯ, ಶೇಖರಗೌಡ ಕಾಟಗಲ್ ಬಸವರಾಜ ನಾಯಕ, ದಸಂಸ ಮುಖಂಡ ಬಸವರಾಜ ಕುಣೆಕೆಲ್ಲೂರು, ವಿಎಸ್ಎಸ್ಎನ್ ನಿರ್ದೇಶಕ ಹುಲುಗಪ್ಪ, ನಿರುಪಾದೆಪ್ಪ ಭೋವಿ, ಇದ್ದರು.