ತೊಗರಿ ಬೆಳೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಸಲಹೆ
ಇಂಡಿ : ತೊಗರಿ ಬಿತ್ತನೆ ಮಾಡುವ ಪೂರ್ವಭೂಮಿಯನ್ನು ಚೆನ್ನಾಗಿ ಉಳಿಮೆ ಮಾಡಿ ಬಿತ್ತನೆಯ ಮುಂಚಿತವಾಗಿ ಬೀಜಗಳಲ್ಲಿ ಬರ ನಿರೋಧಕ ಹೆಚ್ಚಿಸಲು ಬೀಜಗಳನ್ನು ಶೇ ೨ ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಒಂದು ತಾಸು ನೆನೆಸಿ ನಂತರ ನೆರಳಿನಲ್ಲಿ ಕನಿಷ್ಠ ೭ ತಾಸು ಒಣಗಿಸಬೇಕು ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.
ಪಟ್ಟಣದ ಕೃಷಿ ಉಪನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ಎಕರೆಗೆ ಶಿಫಾರಸು ಮಾಡಿದ ರಸಗೊಬ್ಬರಗಳನ್ನು ಬಳಸಬೇಕು.
ಪ್ರತಿ ಎಕರೆಗೆ ಯೂರಿಯಾ ೫ ಕೆಜಿ ಮತ್ತು ಡಿಎಪಿ ೪೪ ಕೆಜಿ ಅಥವಾ ೨೦:೨೦: ೦:೧೩ ಎಕರೆಗೆ ೧೦೦ ಕೆಜಿ ಅಥವಾ ಯೂರಿಯಾ ೨೨ ಕೆಜಿ ಹಾಗೂ ಎಸ್.ಎಸ್.ಪಿ ೧೨೬ ಕೆಜಿ ಅಥವಾ ಸಿಎಎನ್ ೩೯ ಕೆಜಿ ಹಾಗೂ ಎಸ್.ಎಸ್.ಪಿ ೧೨೫ ಕೆಜಿ ಅಥವಾ ಅಮೋನಿಯಂ ಸಲ್ಪೇಟ ೪೮ ಕೆಜಿ ಹಾಗೂ ಎಸ್.ಎಸ್.ಪಿ ೧೨೫ ಕೆಜಿ ಪ್ರತಿ ಎಕರೆಗೆ ಬಳಸಬೇಕು ಎಂದರು.
ಮಳೆ ಕೊರತೆಯಾದಾಗ ಎಡೆಕುಂಟೆ ಮೂಲಕ ತೇವಾಂಶ ಕಾಪಾಡುವದು ಮತ್ತು ಸಂದಿಗ್ದ ಹಂತಗಳಲ್ಲಿ ನೀರು ಹಾಯಿಸುವದು ಹೂ ಹಾಗು ಕಾಳು ಕಟ್ಟುವ ಸಮಯದಲ್ಲಿ ಎರಡು ಬಾರಿ ನೀರು ಕೊಡುವದರಿಂದ ಅಧಿಕ ಇಳುವರಿ ಪಡೆಯಬಹುದು.
ತೊಗರಿಯಲ್ಲಿ ಮೊಗ್ಗು ಮತ್ತು ಹೂ ಉದುರುವದನ್ನು ತಡೆಯಲು ನ್ಯಾಪ್ತಲೀನ್ ಆಸಿಟಿಕ ಆಸಿಡ್ ೪.೫ ಶೇ ಎಸ್.ಎಲ್ ಸಸ್ಯಪ್ರಚೋದಕ ಮತ್ತು ಕಾರ್ಬನ್ ಡೈಜಿಮ ಶಿಲೀಂಧ್ರನಾಶಕವನ್ನು ೧ ಗ್ರಾಂ ಪ್ರತಿ ಲೀಟರ ನೀರಿಗೆ ಸಿಂಪಡಿಸಬೇಕು.
ನೆಟೆ ರೋಗವು ಹೆಚ್ಚಿನ ಹಾನಿಯನ್ನುಂಟು ಮಾಡುವ ಮಣ್ಣು ಜನ್ಯ ರೋಗವಾಗಿದ್ದು ಹೆಚ್ಚಿನ ಮಳೆಯಾದಾಗ ತೇವಾಂಶ ಆದ್ರತೆ ಹಾಗೂ ತಾಪಮಾನಗಳನ್ನು ವೈಪರಿತ್ಯದಿಂದ ಉಲ್ಬಣಗೊಳ್ಳುತ್ತದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಉಪ ಕೃಷಿ ನಿರ್ದೇಶಕರ ಇಲ್ಲವೆ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಇಲ್ಲವೆ ರೈತ ಸಂಪರ್ಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಚಂದ್ರಕಾಂತ ಪವಾರ ತಿಳಿಸಿದ್ದಾರೆ.