ಮುದ್ದೇಬಿಹಾಳ:ಚಿಂತೆ ನಮ್ಮನ್ನು ಸುಡುತ್ತದೆಯೇ ಹೊರತು ಚಿಂತನೆಗೆ ಹಚ್ಚೊಲ್ಲ. ವೈಭವೀಕರಣದ ಚಿಂತೆಗಳು ನಮ್ಮನ್ನು ಹಾಳುಗೆಡವುತ್ತಿವೆ. ನಮ್ಮ ಇಂದ್ರಿಯಗಳೇ ನಮ್ಮ ಅವನತಿಗೆ ಕಾರಣವಾಗುತ್ತಿವೆ. ಬದುಕಿನ ಸಂಗ ವಿಶೇಷವಾಗಿರಬೇಕು. ಆ ಸಂಗವು ನಮ್ಮ ಜೀವನದ ಮೇಲೆ ಪ್ರಭಾವ ಬೀರುವಂತಿರಬೇಕು. ನಾವು ಮಾಡುವ ಕೆಲಸ ನಮಗೆ ತೃಪ್ತಿಕೊಡುವಂತಿರಬೇಕೆ ಹೊರತು ಸಮಾಜವನ್ನು ಮೆಚ್ಚಿಸುವುದಕ್ಕಾಗಿ ಇರಬಾರದು. ಪ್ರತಿಷ್ಠೆ ಅಹಂಕಾರವಾಗಬಾರದು ಎಂದು ಬಸವನ ಬಾಗೇವಾಡಿಯ ಶಿಕ್ಷಕಿ, ಸಾಹಿತಿ, ವಾಗ್ಮಿ ಗಿರಿಜಾ ಪಾಟೀಲ ಹೇಳಿದರು.
ಇಲ್ಲಿನ ಮಾರುತಿನಗರದಲ್ಲಿರುವ ನಿವೃತ್ತ ಶಿಕ್ಷಕ ಮಹಾಂತೇಶ ಧನ್ನೂರ ಅವರ ನಿವಾಸದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕದಳಿ ವೇದಿಕೆ ನೇತೃತ್ವದಲ್ಲಿ ಏರ್ಪಡಿಸಿದ್ದ ೩೯ನೇ ಸಂಚಿಕೆಯ ಶರಣ ಬೆಳಗು ಹುಣ್ಣಿಮೆಯ ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಅನುಭಾವ ನಡೆಸಿಕೊಡುತ್ತ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ಅವರಂತಹ ಶರಣರು ಸಮಾಜಕ್ಕೆ ಏನು ಕೊಟ್ಟಿದ್ದಾರೆ ಅನ್ನೋದು ಮಹತ್ವದ್ದು. ಚೌಡಯ್ಯನವರು ಶರಣರಲ್ಲಿ ವಿಭಿನ್ನರಾಗಿದ್ದರು. ಕಂಡದ್ದನ್ನು ಕಂಡಂತೆ ಹೇಳುವ ಸಾತ್ವಿಕ ರೊಚ್ಚು ಅವರಲ್ಲಿತ್ತು. ಶರಣರಿಗೆ ಲಿಂಗಭೇದವಿರಲಿಲ್ಲ. ಅಂಥ ಶರಣರನ್ನು, ಮಹಾತ್ಮರನ್ನು ಅಂಥವರ ಸಾಹಿತ್ಯವನ್ನು ಅರಿತುಕೊಳ್ಳುವುದೇ ಒಂದು ಸೌಭಾಗ್ಯ. ಒತ್ತಡದ ಬದುಕಿನಲ್ಲಿ ಶರಣರ ಜೀವನ ಸಾಹಿತ್ಯ ಮರೆಮಾಚಲಾಗುತ್ತಿದೆ. ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ತು ಒತ್ತಡದ ಬದುಕಿನಲ್ಲಿ ದಣಿದಿರುವ ನಮ್ಮ ದೇಹವನ್ನು ಶರಣರ ವಚನಗಳ ಮೂಲಕ ಸರ್ವಿಸ್ ಮಾಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಹಾದೇವಿ ನಾಲತವಾಡ ಅವರು ಮಾತನಾಡಿ ಕದಳಿ ವೇದಿಕೆಯು ಮಹಿಳಾ ಸಮಾವೇಶ, ಮಹಿಳಾ ದಿನಾಚರಣೆ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸಾಧಕ ಮಹಿಳೆಯರಿಗೆ ಸನ್ಮಾನ, ಕೊರೋನಾದಲ್ಲಿ ಆನಲೈನ್ ಕಾರ್ಯಕ್ರಮ ಹೀಗೆ ಹಲವು ಚಟುವಟಿಕೆಗಳಿಂದ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.
ಮನೆಯಲ್ಲಿ ಮಹಾಮನೆ ಬಳಗದ ಬಿ.ವಿ.ಕೋರಿ ಅವರು ಮಾತನಾಡಿ ಕಾರ್ಯಕ್ರಮ ಸ್ಥಳದಾನಿ ನಿವೃತ್ತ ಶಿಕ್ಷಕ ಮಹಾಂತೇಶ ಧನ್ನೂರ ಅವರು ಅಜಾತಶತೃವಾಗಿದ್ದಾರೆ. ಸೌಜನ್ಯತೆಗೆ, ಸಹೃದಯತೆಗೆ ಮತ್ತೊಂದು ಹೆಸರೇ ಧನ್ನೂರ ಅವರು. ನಲವತ್ತು ವರ್ಷ ಮೂರು ತಿಂಗಳು ಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯ ಮುಂದುವರಿಸಿಕೊಂಡು ಹೋಗುತ್ತಿರುವ ಅವರು ತಮ್ಮಂತಹ ಅನೇಕ ನಿವೃತ್ತರಿಗೆ ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ಅವರು ಮಾತನಾಡಿ, ಇಂಥ ವಿಶೇಷ ಕಾರ್ಯಕ್ರಮಗಳಿಗೆ ಬರುವ ಹಿರಿಯರು ತಮ್ಮ ಮಕ್ಕಳನ್ನು ಕರೆತಂದರೆ ಅವರಿಗೆ ಶರಣರ ಬದುಕಿನ, ಅವರ ವಚನಗಳ ಸಾರದ ಅರ್ಥವಾಗುತ್ತದೆ. ಭವಿಷ್ಯದ ನಾಗರಿಕರಾಗಿರುವ ಮಕ್ಕಳಿಗೆ ಇಂಥ ಸಾತ್ವಿಕ, ಬದುಕಿನ ನಿಜವಾದ ಅರ್ಥ ತಿಳಿಸಿಕೊಡುವ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗುತ್ತವೆ ಎಂದರು.
ಗೌರವ ಅತಿಥಿಯಾಗಿದ್ದ ನ್ಯಾಯವಾದಿ ನೇತ್ರಾವತಿ ವಡವಡಗಿ, ಸ್ಥಳದಾನಿ ಮಹಾಂತೇಶ ಧನ್ನೂರ ಮಾತನಾಡಿದರು. ವಿಶ್ರಾಂತ ಶಿಕ್ಷಕಿ ಲಕ್ಷ್ಮೀಬಾಯಿ ಗಣಾಚಾರಿ, ಹಿರಿಯ ವೈದ್ಯೆ ಡಾ|ಅರುಣಾ ಜುಲ್ಪೆ, ಶಿಕ್ಷಕಿ ರೋಹಿಣಿ ವಡವಡಗಿ ವೇದಿಕೆಯಲ್ಲಿದ್ದರು. ಎಲ್ಲ ಗಣ್ಯ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ನಿವೃತ್ತ ಶಿಕ್ಷಕ ಎಂ.ಎಂ.ಧನ್ನೂರ ಅವರನ್ನು ದಂಪತಿ ಸಮೇತ ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ತು ಸೇರಿ ಹಲವು ಅಭಿಮಾನಿಗಳು ಸನ್ಮಾನಿಸಿ ನಿವೃತ್ತಿ ಜೀವನಕ್ಕೆ ಶುಭ ಕೋರಿದರು.
ಗಣ್ಯರಾದ ಡಾಕ್ಟರ್ ಬೋರಮ್ಮ ಪೊಲೀಸ್ಪಾಟೀಲ (ರಾಂಪೂರ), ಲಲಿತಾ ಕಟಗೇರಿ, ನೀಲಮ್ಮ ನಾವದಗಿ, ಸುಲೋಚನಾ ಸಜ್ಜನ, ನಿರ್ಮಲಾ ರಾಂಪುರ, ದ್ರಾಕ್ಷಾಯಣಿ ಮೋಟಗಿ, ಸಾವಿತ್ರಿ ಧನ್ನೂರ, ಭಾರತಿ ಪಾಟೀಲ, ಶಕುಂತಲಾ ಲಿಂಗದಳ್ಳಿ, ವಿಜಯಲಕ್ಷ್ಮಿ ಗಡೇದ, ಲಿಂಬೆಕ್ಕ ಇಟಗಿ, ಬಸವರಾಜ್ ಲಿಂಗದಳ್ಳಿ, ಎಚ್.ಎಸ್.ಪಾಟೀಲ, ಸಿ.ಬಿ.ಇಟಗಿ, ಚಂದ್ರಶೇಖರ ನಾಗರಾಳ, ಸಂಗಣ್ಣ ಕಂಚ್ಯಾಣಿ, ಎಸ್.ಎಸ್.ಹುನಗುಂದ, ರುದ್ರೇಶ ಕಿತ್ತೂರ, ಬಸವರಾಜ ಸಾವಳಗಿ, ಎಂ.ಬಿ.ಪಾಟೀಲ, ಬಿ.ಎನ್.ಚೌಡಾಪುರ, ಧನ್ನೂರ ಕುಟುಂಬದ ಸದಸ್ಯರು, ಪರಿಷತ್ತು, ವೇದಿಕೆ ಪದಾಧಿಕಾರಿಗಳು, ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.
ಪಾರ್ವತಿ ಇಟಗಿ ಭಾವಪೂಜೆ ನೆರವೇರಿಸಿದರು. ಬಾಪುಗೌಡ ಪಾಟೀಲ, ಸಂಗಮೇಶ ಶಿವಣಗಿ, ಲಕ್ಷ್ಮೀ ಇಲಕಲ್ ಪ್ರಾರ್ಥಿಸಿದರು. ಶಿಕ್ಷಕಿ ಎಸ್.ಜಿ.ಕಿತ್ತೂರ ಸ್ವಾಗತಿಸಿದರು. ಶಿಕ್ಷಕಿ ಮಹಾದೇವಿ ವಾಲಿ(ಕಿಣಗಿ) ನಿರೂಪಿಸಿ ವಂದಿಸಿದರು.