ವರದಿ :ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಮೇ ೨೯ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿಶೇಷವಾಗಿ ನಡೆಸಲು ನಿರ್ಧರಿಸಲಾಗಿದೆ. ಆಯಾ ಮತಕ್ಷೇತ್ರದಲ್ಲಿ ಶಾಸಕರು, ತಹಶೀಲ್ದಾರರು, ಪಿಡಿಓಗಳು, ಇತರೆ ಇಲಾಖೆಗಳ ಅಧಿಕಾರಿಗಳು ತಮಗೆ ಸೂಚಿಸುವ ಶಾಲೆಗಳಿಗೆ ಹೋಗಿ ಅರ್ಧ ಗಂಟೆ ಕಾರ್ಯಕ್ರಮ ನಡೆಸಿ ಮಕ್ಕಳನ್ನು ಸ್ವಾಗತಿಸಿಕೊಳ್ಳುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಬಜೆಟ್ಟಿನಲ್ಲಿ ಕಲಿಕೆಯ ಮೂಲಸೌಕರ್ಯ ಬಲವರ್ಧನೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಎಲ್ಕೆಜಿ, ಯುಕೆಜಿ, ಪ್ರೆಂಮರಿ, ಹೈಯರ್ ಪ್ರೆಂಮರಿ, ಹೈಸ್ಕೂಲ್, ಪಿಯು ಶಿಕ್ಷಣದಲ್ಲಿ ಕಲಿಕೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಹಿಂದಿದ್ದ ಕಲಿಕೆಯಲ್ಲಿನ ನ್ಯೂನ್ಯತೆಗಳನ್ನು ಕಂಡು ಹಿಡಿದು ಸರಿಪಡಿಸಲು ಕ್ರಮ ಕೈಕೊಳ್ಳಲಾಗಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು ಅನ್ನೋದು ನಮ್ಮ ನಿರೀಕ್ಷೆಯಾಗಿದ್ದು ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆಗೆ ಅನುದಾನದ ಕೊರತೆ ಮಾಡಿಲ್ಲ ಎಂದರು.
ಖಾಸಗಿ ಶಾಲೆಗಳ ಶಿಕ್ಷಣ ಪದ್ಧತಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಸಗಿ ಶಾಲೆಯವರು ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದವರನ್ನು ಪ್ರವೇಶ ಮಾಡಿಕೊಳ್ಳುತ್ತಾರೆ. ಇದರಿಂದ ಸಹಜವಾಗಿ ಅಲ್ಲಿ ಕಲಿಕೆ ಹೆಚ್ಚಾಗಿರುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಝೀರೋ ಇದ್ದವರು ಕಲಿಕೆಯಲ್ಲಿ ಚಾಲೆಂಜಿಂಗ್ ಆಗಿ ಹೊರಹೊಮ್ಮುತ್ತಾರೆ. ಇಲ್ಲಿ ಪ್ರತಿಭಾವಂತ ಶಿಕ್ಷಕರು, ಮದ್ಯಾಹ್ನದ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಸಮವಸ್ತ್ರ, ರಾಗಿ ಮಾಲ್ಟ್, ಪಠ್ಯಪುಸ್ತಕ ಇವೆಲ್ಲವನ್ನೂ ಉಚಿತವಾಗಿ ಕೊಡಲಾಗುತ್ತದೆ. ಆದರೆ ಖಾಸಗಿಯಲ್ಲಿ ಇವೆಲ್ಲ ಇಲ್ಲ. ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುತ್ತಿದೆ. ಶಿಕ್ಷಕರ ಕೊರತೆ ನೀಗಿಸಲು ಯೋಜನೆ ರೂಪಿಸಿದ್ದೇವೆ ಎಂದರು.
೨೦೨೩ರಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಣಾಳಿಕೆಯ ಉಪಾಧ್ಯಕ್ಷ ನಾನೇ ಆಗಿದ್ದೆ. ಪ್ರಾಣಾಳಿಕೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಟೀಕೆ ಮಾಡುವವರೇ ನಮ್ಮ ಗ್ಯಾರಂಟಿ ಕಾಪಿ ಮಾಡುವ ಪರಿಸ್ಥಿತಿ ಬಂದಿದೆ. ಬಿಜೆಪಿಯವರಿಗೆ ಪಾಕಿಸ್ತಾನ, ದೇವಸ್ಥಾನ, ಹಿಂದು ಬಿಟ್ಟರೆ ಬೇರೆ ಯಾವುದೇ ವಿಷಯಗಳಿಲ್ಲ. ಬಿಜೆಪಿಯವರು ಹಿಂದುತ್ವ ಎಂದು ನಾಮ ಹಾಕಿ ಹೋಗ್ತಾರೆ. ಭೂ ಒಡೆತನ, ಬಗರ್ಹುಕುಂ ಮುಂತಾದ ಯೋಜನೆ ತಂದದ್ದು ನಮ್ಮ ಪಕ್ಷದ ಸರ್ಕಾರ. ನಮ್ಮ ದೇಶದಲ್ಲಿ ಬ್ಲಡ್ಡು, ದುಡ್ಡು ಬಡವರ ಕೈಯಲ್ಲಿರೋದು ಮಹತ್ವದ್ದು. ಸಾಹುಕಾರನ ಕೈಗೆ ದುಡ್ಡು ಸಿಕ್ಕರೆ ಆತ ಬ್ಯಾಂಕಲ್ಲಿಟ್ಟು ಬಡ್ಡಿ ತಗೋತಾನೆ. ಅದೇ ಬಡವರಿಗೆ ಕೊಟ್ಟರೆ ಖರ್ಚು ಮಾಡ್ತಾರೆ, ದೇಶ ಸುತ್ತುತ್ತಾರೆ. ಆಗ ಮಾರುಕಟ್ಟೆ ಸರಳವಾಗಿ ಮೇಲೇರುತ್ತದೆ. ಜಿಡಿಪಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವವರೇ ನಮ್ಮ ರೈತರು ಎಂದರು.
ಬಿಜೆಪಿಯವರು ದೇವರು, ದಿಂಡರು ಅಂತ ಹೇಳಕೊಳ್ತಾ ದೇವಸ್ಥಾನಗಳ ಗಂಟೆ ಹೊಡೀತಾರೆ. ನಾನು ಶಾಲೆ ಗಂಟೆ ಹೊಡೀತೇನೆ. ಈ ದೇಶದ ಉದ್ದಾರ ದೇವಸ್ಥಾನದ ಗಂಟೆಯಿಂದ ಸಾಧ್ಯವಿಲ್ಲ. ಶಾಲೆ ಗಂಟೆಯಿಂದ ಮಾತ್ರ ದೇಶ ಉದ್ದಾರ ಆಗುತ್ತದೆ ಅನ್ನೋದನ್ನು ಎಲ್ಲರೂ ಅರಿತುಕೊಳ್ಳಬೇಕು. ಶಾಲೆಯ ಗಂಟೆ ಹೊಡೆಯುವ ಪುಣ್ಯದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ನನಗೆ ಕೊಟ್ಟಿದೆ. ಜಾತ್ಯಾತೀತ, ಧರ್ಮಾತೀತ ಕೆಲಸ ಮಹತ್ವದ್ದು. ಇರುವಷ್ಟು ದಿನ ಒಳ್ಳೇ ಕೆಲಸ ಮಾಡಬೇಕು ಅನ್ನೋದು ನನ್ನ ನಂಬಿಕೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿದ್ದ ಡಿಡಿಪಿಐ ತಸ್ಲೀಮಾಬಾನು ಕೊಲ್ಹಾರ ಅವರು ವಿಜಯಪುರ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಕಳೆದ ವರ್ಷ ಶೇ.೮೦ರಷ್ಟಿದ್ದದ್ದು ಈ ವರ್ಷ ಶೇ.೪೯ಕ್ಕಿಳಿದಿದೆ ಎಂದಾಗ ಮಾತನಾಡಿದ ಸಚಿವರು, ಯಾಕೆ ಕೇಳಕ್ಕಿಳಿದಿದ್ದೀರಿ ಎಂದು ಪ್ರಶ್ನಿಸಿ ರಾಜ್ಯದಲ್ಲೆಲ್ಲ ಪ್ಲಸ್ ಇದೆ ನಿಮ್ಮಲ್ಯಾಕೆ ಮೈನಸ್. ಎಲ್ಲ ಜಿಲ್ಲೆಗಳಲ್ಲೂ ಪ್ರಗತಿ ತೋರಿಸಿದ್ದಾರೆ. ನಿಮ್ಮ ಜಿಲ್ಲೆಯಲ್ಲೂ ಆಗಬೇಕು ಕಲಿಕೆಗೆ ಒತ್ತು ಕೊಡದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದಾಗ ಶಾಸಕ ಸಿ.ಎಸ್.ನಾಡಗೌಡರು ಮಧ್ಯಪ್ರವೇಶಿಸಿ ಈ ಬಾರಿ ಪರೀಕ್ಷೆ ಸ್ಟಿಕ್ಟ್ ಆಗಿ ನಡೆದದ್ದರಿಂದ ಫಲಿತಾಂಶ ಇಳಿಕೆ ಕಂಡಿದೆ ಎಂದು ಡಿಡಿಪಿಐ ಅವರನ್ನು ಬಚಾವ್ ಮಾಡಿದರು.
ಬಂಗಾರಪ್ಪನವರ ಸ್ಮರಣೆ
ಈ ಸಂದರ್ಭ ನಮ್ಮ ತಂದೆ ಬಂಗಾರಪ್ಪನವರನ್ನು ಸ್ಮರಿಸಬೇಕು. ಅವರು ಶಾಲೆಯನ್ನು ಊರಿಗೆ ತಂದಂಥವರು. ಗ್ರಾಮೀಣ ಭಾಗದ ಮಕ್ಕಳಿಗೆ ಹೊಲದಲ್ಲಿ ಕೆಲಸ ಬಿಡಿಸಲು ಶಾಲೆಗೆ ಬರುವವರಿಗೆ ಒಂದು ರೂ ಪ್ರೋತ್ಸಾಹಧನ ಪರಿಚಯಿಸಿದ್ದರಿಂದ ಆಗ ಮಕ್ಕಳ ಪ್ರವೇಶಾತಿ ಸಂಖ್ಯೆ ಹೆಚ್ಚಾಯಿತು. ಅವರು ಎಲ್ಲ ಧರ್ಮದವರಿಗೂ ಮಹತ್ವ ಕೊಟ್ಟಂಥವರು. ಆರಾಧನಾ, ಆಶ್ರಯ ಯೋಜನೆ ಅವರದ್ದೇ. ಅವರ ಮಗನಾಗಿ ನಾನು ಅವರ ಹಾದಿಯಲ್ಲೇ ಸಾಗಲು ಯತ್ನಿಸುತ್ತಿರುವೆ. ೨೦೦೧ರಲ್ಲಿ ಎಸ್.ಎಂ.ಕೃಷ್ಣ ಅವರು ಬಿಸಿಯೂಟ ಜಾರಿಗೊಳಿಸಿದರು. ೨೦೧೩-೧೪ರಲ್ಲಿ ಸಿದ್ದರಾಮಯ್ಯನವರು ಕ್ಷೀರಭಾಗ್ಯ, ಮೊಟ್ಟೆ, ಬಾಳೆಹಣ್ಣು ಜಾರಿಗೊಳಿಸಿದರು. ನನ್ನ ಅವಧಿಯಲ್ಲಿ ವಾರಕ್ಕೆ ಮೂರು ದಿವಸ ರಾಗಿ ಭಾಗ್ಯ ಕೊಡಲಾಗುತ್ತಿದೆ. ಅಜೀಂ ಪ್ರೇಮ್ಜಿಯಂತ ಪುಣ್ಯಾತ್ಮ ೧೫೯೧ ಕೋಟಿ ಅನುದಾನ ನೀಡಿದ್ದಾರೆ. ನಮ್ಮ ತಂದೆಯವರನ್ನು ಮುಖ್ಯಮಂತ್ರಿ ಮಾಡಿದ್ದರ ಋಣ ತೀರಿಸಲು ನಾನು ಕಾಂಗ್ರೆಸ್ ಪಕ್ಷದಲ್ಲಿರುವೆ ಎಂದು ಸಚಿವರು ಹೇಳಿದರು.
ಈ ವೇಳೆ ತಹಶಿಲ್ದಾರರ ಬಲರಾಮ ಕಟ್ಟಿಮನಿ,ತಾಪಂ ಇಒ ನಿಂಗಪ್ಪ ಮಸಳಿ,ಡಾ ಎಸ್ ಬಿ ತಿವಾರಿ,ಬಿಇಓ ಎಸ್ ಬಿ ಸಾವಳಗಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಎಂ ಎಂ ಬೆಲಗಲ್ಲ, ಶಿವಾನಂದ ಮೇಟಿ,ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇದ್ದರು.
ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಶಾಲೆ ಶಿಕ್ಷಕರ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಕಲಿಯಬೇಕು ಎನ್ನುವ ಕಾನೂನು ಇಲ್ಲ. ಅಂಥ ಕಾನೂನು ಬಂದರೆ ಆ ಬಗ್ಗೆ ಚರ್ಚಿಸುತ್ತೇನೆ. ಶಿಕ್ಷಣಕ್ಕೆ ಯಾವುದೇ ಲಿಮಿಟೇಶನ್ ಇಲ್ಲ. ಖಾಸಗಿಯವರ ವಿರುದ್ದವಾಗಿ ಶಿಕ್ಷಣ ಇಲಾಖೆ ನಡೆಸಲಾಗುವುದಿಲ್ಲ. ನಮ್ಮ ಗುಣಮಟ್ಟ ತಿಳಿಸಿಕೊಟ್ಟು ಮಕ್ಕಳು, ಪಾಲಕರನ್ನು ನಮ್ಮಲ್ಲಿ ಬರುವಂತೆ ಪ್ರೋತ್ಸಾಹಿಸುವ ಕೆಲಸ ಮಾತ್ರ ನಾವು ಮಾಡಬಲ್ಲೆವು. ಮಾಧ್ಯಮದವರು ಸರ್ಕಾರಿ ಶಾಲೆಗಳ ಬಗ್ಗೆ ಬರೆಯಬೇಕು ಎಂದು ಸಚಿವರು ತಿಳಿಸಿದರು.
ನ್ಯಾ.ನಾಗಮೋಹನದಾಸ್ ಆಯೋಗದ ಪರಿಶಿಷ್ಟ ಜಾತಿ ಸಮೀಕ್ಷಾ ವರದಿ ಬಂದ ಮರುದಿನವೇ ಶಿಕ್ಷಕರ ನೇಮಕಕ್ಕೆ ನೋಟಿಫಿಕೇಶನ್ ಹೊರಡಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ೫೬೦೦, ಇನ್ನುಳಿದೆಡೆ ೫೦೦ ಹಾಗೂ ೨೦೧೬-೨೦೨೦ವರೆಗೆ ಅನುದಾನಿತ ಶಾಲೆಗಳ ಶಿಕ್ಷಕರ ಭರ್ತಿಗೆ ಅವಕಾಶ ಕೊಡಲಾಗುತ್ತದೆ. ಶಿಕ್ಷಕರು ರಾಜಕೀಯ ಮಾಡುವುದನ್ನು ಸಾಕ್ಷಿ ಸಮೇತ ಕೊಟ್ಟರೆ ಕೂಡಲೇ ಕ್ರಮ ಜರುಗಿಸುತ್ತೇನೆ.
–ಮಧು ಬಂಗಾರಪ್ಪ, ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ