ಜಲಧಾರೆ ಯೋಜನೆಯಡಿಯ ಸ್ಕೀಮ್- 1 ಹಾಗೂ ಸ್ಕೀಮ್-2 ರ ಪ್ರಗತಿ ಪರಿಶೀಲನಾ ಸಭೆ
ವಿಜಯಪುರ, ಮೇ.೨೮ : ಕೇಂದ್ರ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಅಲೋಕ ತಿವಾರಿ ಇವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಧಾರೆ ಯೋಜನೆಯಡಿಯ ಸ್ಕೀಮ್-೧ ಹಾಗೂ ಸ್ಕೀಮ್-೨ರ ಪ್ರಗತಿ ಪರಿಶೀಲನಾ ಸಭೆಯು ಬುಧವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಜಲಧಾರೆ ಯೋಜನೆಯಡಿಯ ಸ್ಕೀಮ್-೧ರಡಿ ಬರುವ ವಿಜಯಪುರ,ಇಂಡಿ ಹಾಗೂ ಬಸವನ ಬಾಗೇವಾಡಿ ತಾಲೂಕಿನ ೭೦೨ ಜನ ವಸತಿಗಳು ಹಾಗೂ ೫ ಪುರಸಭೆಗಳಿಗೆ ಕುಡಿಯುವ ನೀರೋದಗಿಸುವ ಯೋಜನೆ ಹಾಗೂ ಜಲಧಾರೆ ಯೋಜನೆಯಡಿಯ ಸ್ಕೀಮ್-೨ರ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ ೩೪೩ ಜನವಸತಿಗಳ ಹಾಗೂ ೬ ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳ ಪ್ರಗತಿ ಕುರಿತು ಪಿಪಿಟಿ ಮೂಲಕ ಪ್ರಸ್ತುತಪಡಿಸಲಾಯಿತು.
ಈ ಯೋಜನೆಯ ಘಟಕಗಳಾದ ಜಾಕ್ವೆಲ್, ಡಬ್ಲ್ಯೂ.ಟಿ.ಪಿ, ಜಡ್.ಬಿ.ಆರ್ ಹಾಗೂ ಇತರೆ ಅಂಶಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ವಿವರಿಸಲಾಯಿತು. ಹೆಚ್ಚುವರಿ ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಜಲಧಾರೆ ಯೋಜನೆಯ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಸಭೆಯಲ್ಲ್ಲಿ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಕೇಂದ್ರದ ಅಧಿಕಾರಿಗಳಾದ ರಾಜೇಶ ಕುಮಾರ ಲುಹಾದಿಯಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ ಕುಂಬಾರ, ಜಿಲ್ಲೆಯ ಎಲ್ಲ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಜಲಧಾರೆ ಯೋಜನೆಯ ಕಾಮಗಾರಿ ಗುತ್ತಿಗೆದಾರರು, ಯೋಜನಾ ನಿರ್ವಹಣೆ ಸಮಾಲೋಚಕರು ಹಾಗೂ ಇತರರು ಉಪಸ್ಥಿತರಿದ್ದರು.