ಲಿಂಗಸೂಗೂರು: ಜೆಡಿಎಸ್ನ ಪಂಚರತ್ನ ರಥಯಾತ್ರೆ ಹಿನ್ನಲೆಯಲ್ಲಿ ಬದಾಮಿಯಿಂದ ಇಂದು ಮುದಗಲ್ ಪಟ್ಟಣಕ್ಕೆ ಆಗಮಿಸಿದ ಮಾಜಿ ಸಿ.ಎಂ. ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕ್ರೇನ್ ಮೂಲಕ 22 ಡೊಳ್ಳುಗಳುಳ್ಳ ಬೃಹತ್ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಲಾಯಿತು.
ಪಟ್ಟಣದ ಪುರಸಭೆ ರಂಗಮಂದಿರದ ಆವರಣದಲ್ಲಿ ಪಂಚರತ್ನ ರಥಯಾತ್ರೆಗೆ ಮಾಜಿ ಸಿ.ಎಂ. ಹೆ.ಡಿ. ಕುಮಾರಸ್ವಾಮಿರವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ರೈತ ಬಂಧುಗಳು ತಾಯಂದಿರು ನಿರುದ್ಯೋಗಿ ಯುವಕರು ಸಂಕಷ್ಟದಲ್ಲಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿ ಎಂದರು. ಕಳೆದ 52 ದಿನಗಳಿಂದ ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಸಿದ್ದು ಬಂಡಿ ಕಡಿಮೆ ಮತಗಳಿಂದ ಸೋಲನ್ನು ಅನುಭವಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಿದ್ದು ಬಂಡಿಯನ್ನು ಗೆಲ್ಲಿಸಬೇಕಾಗಿದೆ. ಮುದಗಲ್ ಪಟ್ಟಣದ ಜನರು ರಥಯಾತ್ರೆಗೆ ಬೆಂಬಲವನ್ನು ಸೂಚಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
2006 ರಲ್ಲಿ ಲಿಂಗಸೂಗೂರು ಕ್ಷೇತ್ರದ ಜನತೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ರಿ ಆಗ ನಾನು ಮುಖ್ಯಮಂತ್ರಿಯಾಗಿದ್ದೆ. ಹಳ್ಳಿಗಳ ಸಮಸ್ಯೆಗಳನ್ನು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡುವ ಮೂಲಕ ಅಲ್ಲಿನ ಜನರ ಪರಿಸ್ಥಿತಿಗಳನ್ನು ಮನಗಂಡಿದ್ದೇನೆ. ಸುವರ್ಣ ಗ್ರಾಮ ಯೋಜನೆಯನ್ನು ಜಾರಿಗೆ ತಂದು ಜನರು ಸ್ವಾವಲಂಬಿಯಾಗಿ ಬದಕಲು ಅಂದು ಅವಕಾಶ ಮಾಡಿಕೊಡಲಾಗಿದೆ. ಆದರೆ ಬಿಜೆಪಿಯವರು ಆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಬಿಜೆಪಿಯವರು ಕಲ್ಯಾಣ ಕರ್ನಾಟಕ ಅಂತಾ ನಾಮಕರಣ ಮಾಡಿದ್ದಾರೆ. ಆದರೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸರಿಯಾದ ರಸ್ತೆಗಳಿಲ್ಲ. ಈ ಭಾಗದ ಜನರಿಗೆ ಸರಿಯಾಗಿ ಜೀವನ ನಡೆಸುವದಕ್ಕೆ ಸೂರುಗಳಿಲ್ಲ. ರಾಜ್ಯವನ್ನು ಲೂಟಿ ಮಾಡುವವರನ್ನು ಆಯ್ಕೆ ಮಾಡುತ್ತೀರಿ ಎಂದು ಬಿಜೆಪಿಯವರಿಗೆ ಕುಟುಕಿದರು.
ಪ್ರಧಾನಿ ಮೋದಿಯವರು ಸ್ವಚ್ಚ ಭಾರತ ಮಾಡಿದ್ದೇವೆ ಎಂದು ಹೇಳುತ್ತಾರೆ. ಅದರೆ ಹೈದ್ರಾಬಾದ್ ಕರ್ನಾಟಕ ಸ್ವಚ್ಚವಾಗಿಲ್ಲ. ಬಡವರ ಮನೆಗಳು ಧೂಳಿನಿಂದ ತುಂಬಿವೆ. ಅವರು ಅಂತಹ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ. ಇಲ್ಲಿಯವರೆಗೆ ಇದನ್ನೆಲ್ಲ ಸಹಿಸಿಕೊಂಡ ನಿಮಗೆ ನಮಸ್ಕಾರಗಳು ಎಂದು ನೆರದ ಜನರಿಗೆ ಹೇಳಿದರು.
24 ಗಂಟೆ ಜಮೀನಿನಲ್ಲಿ ದುಡಿಯುವ ರೈತನಿಗೆ ಯಾವುದೇ ರೀತಿಯ ಬೇನಾಮಿ ಹಣ ಬರುವುದಿಲ್ಲ. ಅದಕ್ಕಾಗಿಯೆ ಪಂಚರತ್ನ ರಥಯಾತ್ರೆ ಮೂಲಕ ನಿಮ್ಮನ್ನು ಜಾಗೃತಗಿಳಿಸಲು ಬಂದಿದ್ದೆನೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡುವದು ಬಿಡುವುದು ನಿಮಗೆ ಬಿಟ್ಟಿದ್ದು ಎಂದರು.
ಇನ್ನು ಅನೇಕ ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾದ ಜನರು ಯಾವ ಮುಖ್ಯಮಂತ್ರಿ ಮನೆಗೆ ಹೋಗುವದಿಲ್ಲ. ಪ್ರತಿ ದಿನ ನನ್ನ ಹತ್ತಿರ ಸಾವಿರಾರು ನೊಂದ ಜನರು ಬರುತ್ತಾರೆ. ಅವರಿಗೆ ನಾನು ಕೈಲಾದಷ್ಟು ಸಹಾಯ ಮಾಡಿದ್ದೇನೆ. ಇಂದಿನ ದುಬಾರಿ ದುನಿಯಾದಲ್ಲಿ ಬದುಕುವದು ಕಷ್ಟವಾಗಿದೆ. 5 ವರ್ಷಗಳ ಕಾಲ ಸರ್ಕಾವನ್ನು ನನ್ನ ಕೈಗೆ ಕೊಡಿ ಆಗ ನಾನು ಏನು ಮಾಡುತ್ತೇನೆ ಎಂದು ತಿಳಿಯುತ್ತದೆ.
ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರುವ ಮೂಲಕ ಬಡವರು ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗುವದು. ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗಾಗಿ ಸರ್ಕಾರದಿಂದ ನಿಮ್ಮನ್ನು ಸಾಲಗಾರರನ್ನಾಗಿ ಮಾಡದೇ ಸರ್ಕಾರವೆ ನಿಮಗೆ ನೆರವು ಕೊಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದೇನೆ.
ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಎಲ್ಲರೂ ನನ್ನ ಮನೆ ಬಾಗಿಲಿಗೆ ಬಂದಿದ್ದಾರೆ. ಕಾಂಗ್ರೆಸ್ನವರ ಜೊತೆ ಸೇರಿ ರಾಜ್ಯದ ಮುಖ್ಯಮಂತ್ರಿಯಾದಾಗ ಕಾಂಗ್ರೆಸ್ನವರು ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಡೇ ವನ್ನಿಂದ ನನ್ನನ್ನ ಕೆಳಿಗಿಸಲು ಕುಂತಂತ್ರಗಳನ್ನು ಮಾಡುತ್ತಿದ್ದರು. ಅದಕ್ಕಾಗಿ ನಮ್ಮ ಪಕ್ಷಕ್ಕೆ ಪೂರ್ಣ ಬೆಂಬಲ ಕೊಡಿ. ನೊಂದವರ ಪಾಲಿನ ಆಶಾಕಿರಣವಾಗಿ ನಾನು ಪ್ರಾಮಾಣಿಕವಾಗಿ ಕೆಲಸಮಾಡಿ ತೋರಿಸುವೆ. ಒಂದೇ ಒಂದು ಬಾರಿ ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಕುಮಾರಸ್ವಾಮಿ ಹೇಳಿದರು.