ಅಫಜಲಪುರ: ಗ್ರಾಮೀಣ ಪ್ರದೇಶಗಳು ಸರ್ವಾಂಗೀಣವಾಗಿ ಅಭಿವೃದ್ದಿಯಾಗಬೇಕಾದರೆ ಜನಪ್ರತಿನಿಧಿಗಳಂತೆ ಅಧಿಕಾರಿಗಳು ಕೂಡ ಅಷ್ಟೇ ಪ್ರಮಾಣದ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಸರ್ಕಾರದ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಮುಖಂಡ ಚಂದ್ರಕಾಂತ ಸಿಂಗೆ ಆರೋಪಿಸಿದರು.
ಅಫಜಲಪುರ ತಾಲೂಕಿನ ಆನೂರ ಗ್ರಾಮದ ದಲಿತ ಕಾಲೋನಿಯಲ್ಲಿ ಸಿಸಿ ರಸ್ತೆ, ಸುಸಜ್ಜಿತ ಚರಂಡಿ ಇಲ್ಲದ್ದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ತಾ.ಪಂ ಇಒ ರಮೇಶ ಸುಲ್ಪಿ, ಎಡಿ ರಮೇಶ ಪಾಟೀಲ್ ಅವರಿಗೆ ತೋರಿಸಿ ಮಾತನಾಡಿದ ಅವರು ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಲೇ ಇದೆ. ಆದರೆ ಅಧಿಕಾರಿಗಳ ನಿಷ್ಕಾಳಜಿಯಿಂದ ಅನುದಾನ ದುರ್ಬಳಕೆ ಆಗುತ್ತಿದೆ. ಅಲ್ಲದೆ ದಲಿತ ಕಾಲೋನಿಗಳು ಇನ್ನೂ ಓಬಿರಾಯನ ಕಾಲದಂತೆ ಸೌಕರ್ಯ ವಂಚಿತವಾಗಿವೆ. ಚರಂಡಿ ನೀರು ರಸ್ತೆ ಮೇಲೆ ನಿಂತು ಸಾಂಕ್ರಾಮಿಕ ರೋಗದ ತಾಣವಾಗಿ ಮಾರ್ಪಟ್ಟಿದೆ. ಇದು ಸರಿಯಲ್ಲ ಆದಷ್ಟು ಬೇಗ ಸಂಬಂಧ ಪಟ್ಟವರು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.
ಪಂಚಾಯಿತಿಯವರು ಎಸ್ಸಿಪಿ ಅನುದಾನದಿಂದ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ನಮ್ಮ ವಾರ್ಡನಲ್ಲಿ ೨ ರಸ್ತೆಗಳಿವೆ, ಅವು ಸಮಾರು ವರ್ಷಗಳಿಂದ ಚರಂಡಿ ನೀರು ಹೋಗಲು ವ್ಯವಸ್ಥೆ ಮಾಡಿಸಿಲ್ಲ. ಈ ಕುರಿತು ಸಾಕಷ್ಟು ಬಾರಿ ಪಂಚಾಯಿತಿಯವರಿಗೆ ಮೌಖಿಕವಾಗಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಬಂದ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಅಲ್ಲದೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ತಾ.ಪಂ ಇಒ ರಮೇಶ ಸುಲ್ಪಿ ಮಾತನಾಡಿ ಗ್ರಾಮದಲ್ಲಿ ಇಷ್ಟು ವರ್ಷಗಳಿಂದ ಅಭಿವೃದ್ದಿ ಕೆಲಸವಾಗಿಲ್ಲವೆಂದು ಕೇಳಿ ನಮಗೂ ಬೇಸರವಾಗುತ್ತಿದೆ. ಕೂಡಲೇ ಚರಂಡಿ ನೀರು ರಸ್ತೆ ಮೇಲೆ ಹರಿಯದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ದಲಿತ ಕಾಲೋನಿಯಲ್ಲಿನ ಚರಂಡಿಯನ್ನು ಯಾಕೆ ಸರಿಯಾಗಿ ಮಾಡಿಲ್ಲ? ಅನುದಾನ ಏನು ಮಾಡಿದ್ದೀರಿ ಅದರ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಎಸ್ಸಿಪಿ ಅನುದಾನದ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ರೇಣುಕಾ ಹಿರಗಪ್ಪ, ಸದಸ್ಯರಾದ ನಿಂಗಣ್ಣ ಕಲಶೆಟ್ಟಿ, ಮುಖಂಡರಾದ ಈರಣ್ಣ ದೇವರಮನಿ, ಡಾ. ಸಂಗಣ್ಣ ಸಿಂಗೆ, ಮಹಾಂತೇಶ ಸಿಂಗೆ, ಪ್ರೇಮ್ ದೊಡ್ಮನಿ, ಪಿಡಿಒ ಪ್ರಶಾಂತ ನಂದಿ, ಕಾರ್ಯದರ್ಶಿ ಸೋಮಲಿಂಗ ಸೋಲಾಪುರ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.