ಹಿಂದೂಸ್ತಾನಿ ಸಂಗೀತ ಕಲಾವಿದ ಜಹಗೀರದಾರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ
ವಿಜಯಪುರ : ತಮ್ಮ ಬಾಲ್ಯದ ಗೆಳೆಯ, ಹಿಂದೂಸ್ತಾನಿ ಸಂಗೀತ ಕಲಾವಿದರಾಗಿದ್ದ ಸಂಜೀವ ಜಹಗೀರದಾರ ನಿಧನಕ್ಕೆ ಸಚಿವರಾದ ಶಿವಾನಂದ ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪುಣೆಯಲ್ಲಿ ನೆಲೆಸಿದ್ದ ಸಂಜೀವ ಜಹಗೀರದಾರ ಅವರು, ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ನಗರದ ಗೋಡಬೋಳೆ ಮಾಳದ 2 ನಂಬರ್ ಶಾಲೆಯಲ್ಲಿ ಸಹಪಾಟಡಿಯಾಗಿದ್ದ ಸಂಜೀವ ಅವರ ಒಡನಾಟವನ್ನು ಸಚಿವರು ಮೆಲುಕು ಹಾಕಿದ್ದು, ಬಾಲ್ಯದ ಗೆಳೆಯನ ಹಠಾತ್ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಸಂಜೀವ ಅವರ ಸಂಗೀತ ಕಛೇರಿಗಳು ಕರ್ನಾಟಕ, ಮಹಾರಾಷ್ಟ್ರ ಎಲ್ಲಿಯೇ ಇದ್ದರೂ ತಪ್ಪದೇ ಹಾಜರಾಗುತ್ತಿದ್ದೆ. ಅದ್ಭುತ ಕಂಠ ಸಿರಿಯ ಹಿಂದೂಸ್ತಾನಿ ಸಂಗೀತ ಕಲಾವಿದರಾಗಿದ್ದ ಸಂಜೀವ ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ ಎಂದಿದ್ದಾರೆ.
ಭಗವಂತ ಮೃತರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ಹಿರಿಯನನ್ನು ಕಳೆದುಕೊಂಡ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.