ಮುದ್ದೇಬಿಹಾಳ:ಈ ಭೂಮಿಯ ಮೇಲೆ ಮನುಷ್ಯನಿಗೆ ಇರುವಷ್ಟೇ ಹಕ್ಕು ಪ್ರಾಣಿ, ಪಕ್ಷಿಗಳಿಗೂ ಇದೆ. ಅದನ್ನು ಅರಿತು ಮನುಷ್ಯ ಸ್ವಾರ್ಥವಿಲ್ಲದ ಜೀವನ ನಡೆಸಬೇಕು ಎಂದು ತಾಲ್ಲೂಕು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು. ಅವರು ಗುರುವಾರ, ಹಸಿರು ತೋರಣ ಉದ್ಯಾನವನದಲ್ಲಿ
ಹಸಿರು ತೋರಣ ಗೆಳೆಯರ ಬಳಗ, ಅರಣ್ಯ ಇಲಾಖೆ, ಪುರಸಭೆ ಮತ್ತು ತಾಲ್ಲೂಕು ಆಡಳಿತದ ಸಂಯುಕ್ತಾಶ್ರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡ ಘಟನೆ ಕಣ್ಣೆದುರಿಗೇ ಇದೆ. ದೊಡ್ಡ ನಗರಗಳಲ್ಲಿ ಆಮ್ಲಜನಕವನ್ನು ಹಣ ಕೊಟ್ಟು ಕೊಳ್ಳುವ ಪರಿಸ್ಥಿತಿ ಇದೆ ಎಂದು ನಾವು ಅರಿಯಬೇಕು. ಈ ಸುಂದರ ವಾತಾವರಣ ಉಳಿಸಿಕೊಳ್ಳಲು ನಾವೆಲ್ಲರೂ ಗಿಡಗಳನ್ನು ನೆಡಬೇಕಿದೆ. ಸರ್ಕಾರದ ಜಮೀನುಗಳಲ್ಲಿ ಅತಿಕ್ರಮಣವಾಗಿದ್ದರೆ ಅವುಗಳನ್ನು ತೆರವುಗೊಳಿಸುವ ಮತ್ತು ಪ್ರತಿ ಗ್ರಾಮಗಳಲ್ಲಿ ಇರುವ ಸ್ಮಶಾನ ಭೂಮಿಗಳಲ್ಲಿ ಗಿಡಗಳನ್ನು ನೆಡುವ ಕೆಲಸಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಬಹಳಷ್ಟು ಸಂಘಟಿತರಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಇದು ಜಿಲ್ಲೆಗೇ ಮಾದರಿಯಾಗಿದೆ ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಿರೀಶ್ ಆಲಕುಡೆ ಮಾತನಾಡಿ, ಪರಿಸರ ಸಂರಕ್ಷಣೆ ಕೆಲಸದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು, ಪಟಾಕಿ ಬೇಡ ಅಭಿಯಾನ, ಹಕ್ಕಿಗಳಿಗೆ ನೀರು ಕುಡಿಯುವ ಮಣ್ಣಿನ ಪಾತ್ರೆಗಳ ವಿತರಣೆ, ನೀರು ಸಂರಕ್ಷಣೆ ಸೇರಿದಂತೆ ಎಲ್ಲರೂ ಅನುಕರಣೆ ಮಾಡಬಹುದಾದ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಮಾತನಾಡಿ, ಪಟ್ಟಣದಲ್ಲಿರುವ 64 ಉದ್ಯಾನವನಗಳಲ್ಲಿ ಗಿಡಗಳನ್ನು ನೆಡಲು ಎಲ್ಲ ರೀತಿಯ ಕೆಲಸ ಮಾಡುವುದಾಗಿ ಹೇಳಿದರಲ್ಲದೇ, ಹಸಿರು ತೋರಣ ಬಳಗದವರು ಪ್ರತಿ ವರ್ಷ ನೀಡುತ್ತಿರುವ ” ಪರಿಸರ ರಕ್ಷಕ” ಪ್ರಶಸ್ತಿ ನೀಡಲು ರೂ.25 ಸಾವಿರ ದೇಣಿಗೆ ನೀಡಿದರು. ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಸಭೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಕೆಬಿಜೆನ್ನೆಲ್ ವಿಭಾಗದ ಉಪ ಅರಣ್ಯಾಧಿಕಾರಿ ಶ್ರೀಕಾಂತ ಘೋರ್ಪಡೆ ವೇದಿಕೆಯಲ್ಲಿದ್ದರು. ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ” ಪರಿಸರ ರಕ್ಷಕ” ಪ್ರಶಸ್ತಿ ಗೆ ಆಯ್ಕೆಯಾದ ಶರಣಪ್ಪ ಸಾಯಬಣ್ಣ ನಾಗಾವಿ, ಅನಿಲಕುಮಾರ ಶಂಕ್ರಪ್ಪ ಚಲವಾದಿ, ಶರಣಬಸಪ್ಪ ಹಣಮಪ್ಪ ನೆಲವಾಸಿ, ಸಿದ್ದನಗೌಡ ಲಿಂಗದಳ್ಳಿ ಬಿದರಕುಂದಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಯೋಜನೆ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ಲ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಕಾರ್ಯದರ್ಶಿ ನಾಗಪ್ಪ ತುರಡಗಿ, ಮನೆಯಲ್ಲಿ ಮಹಾಮನೆಯ ಬಿ.ವಿ.ಕೋರಿ, ರುದ್ರೇಶ ಕಿತ್ತೂರ, ಚಂದ್ರಶೇಖರ ನಾಗರಾಳ, ಬಿ.ಎಸ್.ಮೇಟಿ, ಸಿದ್ದನಗೌಡ ಬಿಜ್ಜೂರ, ಎಂ.ಬಿ.ಪಾಟೀಲ, ಕಾಶಿಬಾಯಿ ರಾಂಪೂರ, ಪುರಸಭೆ ಸದಸ್ಯೆ ಭಾರತಿ ಪಾಟೀಲ, ಸಿದ್ದರಾಜ ಹೊಳಿ, ಡಾ.ಶಶಿಧರ ಜುಲ್ಪೆ, ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ಡಾ.ವೀರೇಶ ಇಟಗಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ರಾಜೇಂದ್ರ ಹುನ್ನೂರ, ಸಂತೋಷ ಭಜಂತ್ರಿ, ಅನಿಲ ಚವ್ಹಾಣ, ಅಶೋಕ ಚವ್ಹಾಣ, ಶೆಟ್ಟೆಪ್ಪ ಹರಿಜನ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಪ್ರೇರಣಾ ಬೆಳಗಲ್ಲ ಪರಿಸರ ಗೀತೆ ಹಾಡಿದಳು. ಅಮರೇಶ ಗೂಳಿ ಸ್ವಾಗತಿಸಿದರು. ವೀರೇಶ ಢವಳಗಿ ಸನ್ಮಾನಿತರನ್ನು ಪರಿಚಯಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ರವಿ ಗೂಳಿ ವಂದಿಸಿದರು.