ಪುಣ್ಯಸ್ಮರಣೆಯಲ್ಲಿ ಒಂದಾದ ಗುರುವಿನ ಗುರು ಶಿಷ್ಯನ ಶಿಷ್ಯ
ಲಚ್ಯಾಣದಲ್ಲಿ ನಡೆದ ಪ್ರವಚನಕ್ಕೆ ದೂರದಿಂದ ಹರಿದು ಬಂತು ಭಕ್ತ ಸಾಗರ
ಗುರುವಿನ ದರ್ಶನ ಮಾಡಿ ಆಶಿರ್ವಚನ ನೀಡಿದ ಮುಗಳಖೋಡದ ಮುರುಘೇಂದ್ರ ಮಹಾಸ್ವಾಮೀಜಿ.
ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಪವಾಡ ಪುರುಷ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ 96ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಶರಣರ ದರ್ಶನ ಕುರಿತ ಪ್ರವಚನ ಕಾರ್ಯಕ್ರಮ 16ನೇ ದಿನದಲ್ಲಿ ಮುಂದುವರೆದಿದೆ.
ಗುರುವಾರ ರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಶ್ರೀ ಡಾ. ಮುರುಘೇಂದ್ರ ಮಹಾಸ್ವಾಮೀಜಿ ಭಾಗವಹಿಸಿ ಗುರು ಸಿದ್ದಲಿಂಗ ಮಹಾರಾಜರ ದರ್ಶನ ಪಡೆದರು.

ಬಳಿಕ ನಡೆದ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ಎನ್ನ ಗುರು ಲಚ್ಯಾಣದ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ಶಕ್ತಿ ದೊಡ್ಡದು. ನಾನು ಎದೆ ತಟ್ಟಿ ಹೇಳುತ್ತೇನೆ. ಗುರುಗಳನ್ನು ಮನಸ್ಸು ಬಿಚ್ಚಿ ನೋಡಿರಿ, ಶುದ್ಧವಾದ ಭಾವನೆಯಿಂದ ನೋಡಿರಿ. ನೀವು ಭಕ್ತಿಯಿಂದ ಬೇಡಿ ನಿಮ್ಮ ಮನೆ ಮನೆ ತಲುಪುವುದರೋಳಗಾಗಿ ಆಶಿರ್ವಾದ ಮಾಡುವ ಶಕ್ತಿ ಆತನಲ್ಲಿದೆ ಎಂದು ಮನಮುಟ್ಟುವಂತೆ ನುಡಿದರು.
ಮುಗಳಖೋಡದ ಶ್ರೀ ಡಾ. ಮುರುಘೇಂದ್ರ ಮಹಾಸ್ವಾಮೀಜಿ.
ಬಳಿಕ ಬಂಥನಾಳದ ಶ್ರೀ ಶಂಕರಲಿಂಗ ಮಹಾಶಿವಯೋಗಿಗಳ ಶಿಷ್ಯನ ಶಿಷ್ಯ ಮುಗಳಖೋಡದ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಡಾ. ಮುರುಘೇಂದ್ರ ಮಹಾಸ್ವಾಮೀಜಿ ಗುರುವಿನ ಗುರು ಪೀಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳನ್ನು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಪ್ರವಚನಕಾರರಾದ ತುಂಗಳದ ಮಾತೋಶ್ರೀ ಅನುಸೂಯಾದೇವಿ, ಹೂವಿನ ಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು, ಅಗರಖೇಡದ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಸಂಗೀತ ಶಿಕ್ಷಕ ಮುರಳಿಧರ ಭಜಂತ್ರಿ ಹಾಗೂ ತಬಲಾ ಕಲಾವಿದ ಮಹಾದೇವ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೆ ಮಠದಲ್ಲಿ ಅನ್ನ ಪ್ರಸಾದ ವಿತರಿಸಲಾಯಿತು.