ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು:ತಾಪಂ ಇಒ ವೆಂಕಟೇಶ್ ವಂದಾಲ
ಮುದ್ದೇಬಿಹಾಳ: “ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳು ಜ್ಞಾನದ ದೇಗುಲಗಳಿದ್ದಂತೆ. ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು,” ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ವೆಂಕಟೇಶ್ ವಂದಾಲ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲ್ಲೂಕಿನ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಜಿಟಲ್ ಕ್ರಾಂತಿ ಮತ್ತು ಗ್ರಂಥಾಲಯದ ಮಹತ್ವ
ಮುಂದುವರಿದು ಮಾತನಾಡಿದ ಅವರು, ಈ ಗ್ರಂಥಾಲಯ ಕಟ್ಟಡ ಸ್ಮಾರ್ಟ್ ಪೋನ್, ಕಂಪ್ಯೂಟರ್ ಸೇವೆ ಕಲ್ಲಿಪಿಸಲಾಗಿದೆ,
ಈಗಿನ ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್ ಯುಗದಲ್ಲಿ ಮಕ್ಕಳನ್ನು ಪುಸ್ತಕ ಓದುವತ್ತ ಸೆಳೆಯುವುದು ಮುಖ್ಯವಾಗಿದೆ. ಬೇಸಿಗೆ ರಜೆ ಹತ್ತಿರ ಬರುತ್ತಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಬರುವಂತೆ ಮೇಲ್ವಿಚಾರಕರು ಕ್ರಮ ವಹಿಸಬೇಕು. ಕವಡಿಮಟ್ಟಿ ಮತ್ತು ಹಿರೇಮುರಾಳ ಗ್ರಾಮಗಳ ಡಿಜಿಟಲ್ ಗ್ರಂಥಾಲಯಗಳು ಅತ್ಯಂತ ಸುಂದರವಾದ ಕಟ್ಟಡಗಳನ್ನು ಹೊಂದಿದ್ದು, ಮಾದರಿಯಾಗಿವೆ. ಗ್ರಂಥಾಲಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು,” ಎಂದರು. ಅಲ್ಲದೆ, ಗ್ರಂಥಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗುತ್ತಿಗೆದಾರ ಮಂಜುನಾಥ ಬೆಳ್ಳಿಕಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಈ ವೇಳೆ ಕವಡಿಮಟ್ಟಿ ಗ್ರಾಪಂ ಪಿಡಿಓ ಕೆ.ಎಚ್. ಕುಂಬಾರ ಮಾತನಾಡಿ, “ಹಿಂದಿನ ಪಿಡಿಓ ಕೆ.ಎಸ್. ಕಸನಕ್ಕಿ ಅವರ ಪರಿಶ್ರಮ ಹಾಗೂ ಹಿರೇಮುರಾಳ ಗ್ರಾಪಂ ಸಿಬ್ಬಂದಿಗಳ,ಪ್ರೋತ್ಸಾಹದಿಂದ ಲಭ್ಯವಿರುವ ಜಾಗದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಬಡವರ ಮಕ್ಕಳಿಗೆ ಓದಲು ಅನುಕೂಲವಾಗುವಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇವೆ,” ಎಂದು ತಿಳಿಸಿದರು.
ಗೌರವ ಸನ್ಮಾನ:
ಇದೇ ಸಂದರ್ಭದಲ್ಲಿ ತಾಪಂ ಇಒ ವೆಂಕಟೇಶ್ ವಂದಾಲ, ಪಿಡಿಓ ಕೆ.ಎಚ್. ಕುಂಬಾರ, ಹಿರೇಮುರಾಳ ಆರ್.ಎ. ಎಕ್ಸಂಬೆ, ಕಾರ್ಯದರ್ಶಿ ನಿಂಗಣ್ಣ ಬಿರಾದಾರ ಹಾಗೂ ಗುತ್ತಿಗೆದಾರ ಮಂಜುನಾಥ ಬೆಳ್ಳಿಕಟ್ಟಿ ಅವರಿಗೆ ಮುದ್ದೇಬಿಹಾಳ ತಾಲ್ಲೂಕಿನ ಅರಿವು ಕೇಂದ್ರದ ಎಲ್ಲಾ ಮೇಲ್ವಿಚಾರಕರು ಹಾಗೂ ಹಿರೇಮುರಾಳ ಗ್ರಂಥಾಲಯ ಮೇಲ್ವಿಚಾರಕ ವಿರೇಶ ಬಾಗೇವಾಡಿ ವತಿಯಿಂದ ಎಲ್ಲರಿಗೂ ಗೌರವ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತರಬೇತುದಾರ ಚಂದ್ರು ಕಲಾಲ, ಗ್ರಂಥಾಲಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಹಾಂತೇಶ ಕಾಶಿನಕುಂಟಿ, ತಾಲ್ಲೂಕು ಅಧ್ಯಕ್ಷ ಬಿ.ಕೆ. ಸಗರಿ, ಉಪಾಧ್ಯಕ್ಷೆ ಈರಮ್ಮ ಕೊಪ್ಪರ, ಕಾರ್ಯದರ್ಶಿ ಸುನಿಲ್ ದೊಡ್ಡಮನಿ, ನಾನಗೌಡ ಪಾಟೀಲ, ಬಸನಗೌಡ ಪಾಟೀಲ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.



















