ಅಫಜಲಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೧ ನೇ ಜಯಂತಿ ಹಾಗೂ ವಿಶ್ವ ಪರಿಸರ ದಿನವನ್ನು ಒಂದೇ ದಿನ ವಿನೂತನ ಕಾರ್ಯಕ್ರಮವನ್ನು ತಾಲೂಕಿನ ಬಡದಾಳ ಗ್ರಾಮದ ಬುದ್ದ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ತಾಲೂಕಿನ ಬಡದಾಳ ಗ್ರಾಮದ ಬುದ್ದ ನಗರದಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಪರಿಸರ ದಿನಾಚರಣೆ ಕುರಿತು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮುಖಂಡರಾದ ಮಹಾಂತೇಶ ಬಡದಾಳ, ಶರಣು ರುದ್ದೇವಾಡಿ, ಸಿದ್ದರಾಮ ವಾಘ್ಮೋರೆ ಮಾತನಾಡುತ್ತಾ ಪ್ರತಿ ವರ್ಷದ ಪದ್ದತಿಯಂತೆ ನಾವು ಊರಲ್ಲಿ ಎಲ್ಲರೂ ಕೂಡಿಕೊಂಡು ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ನಿರ್ಧರಿಸಿದ್ದೇವೆ.
ಕೊವಿಡ್ನಿಂದಾಗಿ ಮೂರು ವರ್ಷ ಜಯಂತಿ ಆಚರಣೆ ಮಾಡಿರಲಿಲ್ಲ. ಈಗ ಕೊವಿಡ್ ಮಹಾಮಾರಿ ಭೀತಿ ಇಲ್ಲ. ಹೀಗಾಗಿ ಜಯಂತಿ ಆಚರಣೆಗೆ ನಿರ್ಧರಿಸಿ ಎಲ್ಲರ ಅಭಿಪ್ರಾಯ ಪಡೆದುಕೊಂಡಿದ್ದೇವೆ ಎಂದರು.
ಗ್ರಾ.ಪಂ. ಸದಸ್ಯರಾದ ರೂಪವಾನ್ ಪ್ಯಾಟಿ, ಮರೇಪ್ಪ ಸಿಂಗೆ ಮಾತನಾಡುತ್ತಾ ಜಯಂತಿ ಕಾರ್ಯಕ್ರಮ ಹಾಗೂ ಪರಿಸರ ದಿನದ ಪ್ರಯುಕ್ತ ಕಾರ್ಯಕ್ರಮದ ಮುನ್ನಾದಿನ ಗ್ರಾಮದ ಬೀದಿಗಳೆಲ್ಲ ಸ್ವಚ್ಚಗೊಳಿಸಿ ಬ್ಲಿಚಿಂಗ್ ಪೌಡರ್ ಸಿಂಪಡಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಗ್ರಾ.ಪಂನಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಯುವಕ ಮಂಡಳಿಯ ಸದಸ್ಯರಾದ ಶೆಟ್ಟೆಪ್ಪ ಇಮ್ಮನ್, ಚನ್ನಬಸು ಶಿರೂರ, ಶಿವು ಸಿಂಗೆ, ಶಂಕರ ಕಮಸಿ ಮಾತನಾಡುತ್ತಾ ಪ್ರತಿ ಬಾರಿಯಂತೆ ಈ ಬಾರಿಯ ಜಯಂತಿಯನ್ನು ಸಹ ಎಲ್ಲರೂ ಕೂಡಿಕೊಂಡು ಅಚ್ಚುಕಟ್ಟಾಗಿ ಆಚರಿಸೋಣ. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದವರು ಗ್ರಾಮದ ಎಲ್ಲಾ ಸಮುದಾಯದ ಜನರು ಭಾಗಿಯಾಗುವುದರಿಂದ ನಾವು ಜವಾಬ್ದಾರಿಯಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಸಹಕರಿಸುತ್ತೇವೆ ಎಂದರು.
ಪ್ರತಿಬಾರಿ ಅಂಬೇಡ್ಕರ್ ಜಯಂತಿಯನ್ನು ಜುಲೈ ಅಂತ್ಯದ ಒಳಗೆ ಮಾಡಲಾಗುತ್ತಿತ್ತು. ಈಗ ಜೂನ್ 5 ರಂದು ಆಯೋಜಿಸಲು ನಿರ್ಧರಿಸಿದ್ದರಿಂದ ವಿಶ್ವ ಪರಿಸರ ದಿನವಾಗಿದ್ದು ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಜಯಂತಿಯ ಜೊತೆಗೆ ಪರಿಸರ ದಿನಾಚರಣೆಯನ್ನು ಸಹ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿ ಕಾರ್ಯಕ್ರಮದ ದಿನದಂದು100 ಗಿಡಗಳನ್ನು ನೆಟ್ಟು ನಂತರ ಹಂತ ಹಂತವಾಗಿ ಒಂದು ಸಾವಿರ ಗಿಡಗಳನ್ನು ನೆಡುವ ಸಂಕಲ್ಪವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಸಂಗಪ್ಪ ಕಮಸಿ, ಶರಣಪ್ಪ ಅತನೂರ, ನಾಗಣ್ಣ ಮಾತಾರಿ, ಚಿದಾನಂದ ಮೂಗಾ, ಗಜಾನಂದ ನಿಂಬಾಳ, ಮಲ್ಲಪ್ಪ ಕಮಸಿ, ತಿಪ್ಪಣ್ಣ ಸಿಂಗೆ, ದಿಲೀಪ್ ಕಾಂಬಳೆ, ಚನ್ನಬಸು ದೊಡ್ಮನಿ, ಮಹೇಶ, ಮಲ್ಲು ಸಿಂಗೆ, ವಿನೋದ ಅತನೂರ, ಗುಂಡಪ್ಪ, ಮಿಥುನ್, ಅಂಕುಶ, ಶಂಕರ, ಈರಪ್ಪ, ಮುತ್ತು, ಬಸು ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ