ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ’ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧನೆ
ವಿಜಯಪುರ: ಭಯೋತ್ಪಾದನೆ ಎಂಬ ಜಾಗತಿಕ ಪಿಡುಗನ್ನು ಸಾಮೂಹಿಕವಾಗಿ ಎದುರಿಸಲು ನಾಗರಿಕರಲ್ಲಿ ಏಕತೆ, ಶಾಂತಿ ಮತ್ತು ದೇಶಪ್ರೇಮದ ಪ್ರಜ್ಞೆಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಬುಧವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ’ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆಗೆ ದೇಶದ ಸಂಸ್ಕೃತಿ, ಸಂಸ್ಕಾರ, ಶಾಂತಿಯ ಮೌಲ್ಯವನ್ನು ಕಲಿಸಬೇಕು. ನಾವು ಭಾರತವನ್ನು ಭರವಸೆ, ಶಕ್ತಿ ಮತ್ತು ಒಗ್ಗಟ್ಟಿನ ಸಂಕೇತವನ್ನಾಗಿಸಿ, ಶಾಂತಿ, ಸಹಬಾಳ್ವೆಯ ತೋಟವನ್ನಾಗಿ ಮಾಡಿ, ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಗೆ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ವಿಶ್ವನಾಥ ಕಲಗೊಂಡ ಮಾತನಾಡಿ,ಭಯೋತ್ಪಾದನೆಯ ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅಗತ್ಯತೆ ಇದೆ. ಭಯೋತ್ಪಾದನೆಯನ್ನು ಬೇರು ಸಮೇತ ನಿರ್ಮೂಲನೆ ಮಾಡುವತ್ತ ನಾವೆಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ,
ರಾಷ್ಟ್ರದ ಶಾಂತಿ, ಅಭಿವೃದ್ಧಿಗೆ ಭಯೋತ್ಪಾದನೆಯು ತೊಡಕಾಗಿದ್ದು, ಅದರ ನಿರ್ಮೂಲನೆಗೆ ಎಲ್ಲರೂ ಜೊತೆಗೂಡಿ ಬೇರು ಸಹಿತ ಸರ್ವನಾಶ ಮಾಡುವ ದೃಢ ಸಂಕಲ್ಪದೊಂದಿಗೆ ಮುನ್ನುಗ್ಗಬೇಕಾಗಿದೆ ಎಂದು ಹೇಳಿದರು.
ಗ್ರಾಮದ ವಿಶ್ವನಾಥ ಹಂಡಿ, ಬಸವರಾಜ ಸಾರವಾಡ, ಸುರೇಶ ಕತ್ನಳ್ಳಿ, ಪ್ರವೀಣ ಅರಕೇರಿ, ಶಂಕರ ಲೋಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.