ವಿವಿಧ ಅಭಿವೃದ್ದಿ ಕಾಮಗಾರಿಗಳು-ಇಂದಿರಾ ಕ್ಯಾಂಟೀನ್ ಉದ್ಘಾಟನೆ
ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಗ್ಯಾರಂಟಿ ಯೋಜನೆಗಳು ಸಹಕಾರಿ -ಸಚಿವ ಡಾ.ಎಂ.ಬಿ.ಪಾಟೀಲ
ವಿಜಯಪುರ ಜೂ.28 :ಸರ್ಕಾರ ಜಾರಿಗೆ ತಂದಿರುವ ಐದು ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜನರಿಗೆ ಬಹುಪಯೋಗಿಯಾಗಿದ್ದು, ಅವರ ಆರ್ಥಿಕ ಜೀವನ ಮಟ್ಟ ಹೆಚ್ಚಾಗುವುದರ ಜೊತೆಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಈ ಯೋಜನೆಗಳು ಸಹಕಾರಿಯಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.
ಶನಿವಾರ 2023-24ನೇ ಸಾಲಿನ ಹಾಗೂ 2024-25ನೇ ಸಾಲಿನ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲೂಕಿನಲ್ಲಿ ನಿರ್ಮಿಸಲಾದ ಕಟ್ಟಡ ಕಾಮಗಾರಿಗಳು ಹಾಗೂ ಭೂಮಿ ಪೂಜಾ ಸಮಾರಂಭ ವಿವಿಧ ಕಾಮಗಾರಿಗಳಾದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಸಂಖ್ಯೆ-4ರ ಉದ್ಘಾಟನೆ, 25 ಲಕ್ಷ ರೂ ವೆಚ್ಚದ ರೈತ ಸಂಪರ್ಕ ಕೇಂದ್ರ ಗೋದಾಮು ಉದ್ಘಾಟನೆ, 15 ಲಕ್ಷ ರೂ. ವೆಚ್ಚದಡಿಯ ಅಂಗನವಾಡಿ ಕಟ್ಟಡ ಸಂಖ್ಯೆ 04ರ ಭೂಮಿ ಪೂಜೆ ಹಾಗೂ ತಿಕೋಟಾದ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ನೆರವೇರಿಸಿ ಅವರು ಮಾತಾನಾಡಿದರು.
ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತಿಕೋಟಾ ತಾಲೂಕಾಗಿ ಹಾಗೂ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ಸ್ಪಂದಿಸಿ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳಿಂದ ಈ ಭಾಗದಲ್ಲಿ ಸಮೃದ್ಧಿ ನೆಲೆಸಿದೆ. ನೀರಾವರಿ ಯೋಜನೆಗಳಿಂದ ಈ ಭಾಗದ ರೈತರು ತಮ್ಮ ಬದುಕು ಹಸನ ಮಾಡಿಕೊಂಡು, ಆರ್ಥಿಕ ಮಟ್ಟ ಉತ್ತಮಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಂದ ಹಳ್ಳ, ಕೆರೆ, ಇತ್ಯಾದಿ ಜಲಮೂಲಗಳು ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಈ ಭಾಗದ ತಿಕೋಟಾ ಹೋಬಳಿಯೊಂದಕ್ಕೆ 3600 ಕೋಟಿ ರೂ. ವೆಚ್ಚ ಮಾಡಿ, ಅತಿ ಎತ್ತರದ ಪ್ರದೇಶವಾದ ಬರಡು ಭೂಮಿಗೆ ನಿರೋದಗಿಸಿ ಈ ಭಾಗವು ಹಸಿರಿನಿಂದ ಕಂಗೊಳಿಸಿ ಜನರು ಸಮೃದ್ಧಿಯಿಂದ ಜೀವನ ನಡೆಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಕಟಿಬದ್ಧನಾಗಿ ಕಾರ್ಯ ನಿರ್ವಹಿಸಿದ ಆತ್ಮತೃಪ್ತಿ ಹಾಗೂ ಆ ಅಭಿಮಾನ ನನಗಿದೆ ಎಂದರು.
ಬಬಲೇಶ್ವರ ತಿಕೋಟಾವನ್ನು ರಾಜ್ಯದಲ್ಲಿಯೇ ಮಾದರಿಯಾಗಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳು, ಈ ಭಾಗದ ರಸ್ತೆ ಅಭಿವೃದ್ಧಿ, ವಿದ್ಯುತ್ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಅವಶ್ಯಕತೆಗಳಿಗೆ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ತೃಪ್ತಿ ಇದೆ ಎಂದು ಹೇಳಿದರು.
ತಿಕೋಟಾ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದ್ದು, 87 ಲಕ್ಷ ರೂ. ಕಟ್ಟಡ ಕಾಮಗಾರಿ, 43.67 ಲಕ್ಷ ರೂ.ಅಡುಗೆ ಸಲಕರಣೆಗಳ ಬಾಬ್ತು ಒಳಗೊಂಡಂತೆ 1.30 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಇಂದಿರಾ ಕ್ಯಾಂಟಿನ್ನಲ್ಲಿ ಉತ್ತಮ ರುಚಿ-ಶುಚಿಯಾದ ಗುಣಮಟ್ಟದ ಆಹಾರ ದೊರೆಯಲಿದ್ದು, ಇದರಿಂದ ಪ್ರತಿನಿತ್ಯ ಬೇರೆ-ಬೇರೆ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ಸಾರ್ವಜನಿಕರಿಗೆ, ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಅನುಕೂಲವಾಗಲಿದೆ. ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಸರ್ಕಾರದ ಮಹತ್ವಕಾಂಕ್ಷಿ ಹಾಗೂ ಅತ್ಯಂತ ಜನಪ್ರಿಯ ಯೋಜನೆಗಳಲ್ಲೊಂದಾಗಿದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅಗತ್ಯ ಪೂರಕ ಪೀಠೋಪಕರಣ, ಪಾಠೋಪಕರಣ, ಸುಂದರ ಆಟದ ಮೈದಾನ, ಆಟದ ಮೈದಾನಕ್ಕೆ ಬೇಕಾಗುವ ಆಟದ ಸಾಮಗ್ರಿಗಳು, ಸುಸಜ್ಜಿತ ಹಾಗೂ ಸುಂದರ ಶಾಲಾ ಕೊಠಡಿಗಳ ನಿರ್ಮಾಣ, ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟಕ್ಲಾಸ್ಗಳನ್ನು ಉತ್ತಮ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆತು, ಅವರ ಭವಿಷ್ಯ ಉಜ್ವಲವಾಗಲಿ ಎಂಬ ಸದಾಶಯದಿಂದ ಸಿಎಸ್ ಆರ್ ಅನುದಾನ ಬಳಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ.
ಈಗಾಗಲೇ ಸಿಎಸ್ ಆರ್ ಅನುದಾನದಡಿ ಶಿಕ್ಷಣ ಹಾಗೂ ಕೆರೆ ಅಭಿವೃದ್ಧಿ ಪುನಶ್ಚೇತನ ಕಾರ್ಯ ಸಹ ಮಾಡಲಾಗುತ್ತಿದೆ. ಯುವಕರಿಗೆ ಒಪನ್ ಜಿಮ್ ಸ್ಥಾಪಿಸಲು ಕ್ರಮವಹಿಸಲಾಗಿದೆ.ವಿವಿಧ ಕಂಪನಿಗಳಿಂದ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ 10 ಸಾವಿರ ಉದ್ಯೋಗ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರ ಗೋದಾಮು ಉದ್ಘಾಟನೆ:
ತಿಕೋಟಾ ತಾಲೂಕಿನ ರೈತರ ಪಾಲಿಗೆ ಇಂದು ಮತ್ತೊಂದು ಮಹತ್ವದ ದಿನ. ನೂತನ ರೈತ ಸಂಪರ್ಕ, ಗೋದಾಮು ಕೇಂದ್ರವನ್ನು ಲೋಕಾರ್ಪಣೆ ಗೊಳಿಸಿರುವೆ. ರೈತರು ತಾವು ಬೆಳೆಯುವ ಬೆಳೆಗಳಾದ ಹಣ್ಣು, ತರಕಾರಿ, ಧಾನ್ಯ ಇತ್ಯಾದಿಗಳನ್ನು ಈ ಗೋದಾಮಿನಲ್ಲಿ ಭದ್ರವಾಗಿ ಸಂಗ್ರಹಿಸಿಕೊಳ್ಳಬಹುದಾಗಿದೆ. ಇದೇ ಸಂದರ್ಭದಲ್ಲಿ ಫಲಾನುಭವಿ ರೈತರಿಗೆ ಕೃಷಿ ಸಲಕರಣೆಗಳನ್ನು ನೀಡಿ, ಅವರ ಕೃಷಿ ಚಟುವಟಿಕೆಗಳಿಗೆ ಪೆÇ್ರೀತ್ಸಾಹ ನೀಡಲಾಯಿತು. ಇಂತಹ ಉತ್ತಮ ಯೋಜನೆಗಳು ರೈತರ ಆರ್ಥಿಕ ಶಕ್ತಿಗೆ ಮತ್ತಷ್ಟು ಬಲ ತುಂಬಲಿದೆ.
ಅಂಗನವಾಡಿ ಕಟ್ಟಡ, ಕುಡಿಯುವ ನೀರಿನ ಘಟಕ ಉದ್ಘಾಟನೆ: ತಿಕೋಟಾ ಟೌನ್ ಪೆÇಲೀಸ್ ಸ್ಟೇಷನ್ ಹಿಂಭಾಗ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಹಾಗೂ ಕುಡಿಯುವ ನೀರಿನ ಘಟಕ ಉದ್ಘಾಟನೆ, ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ಒದಗಿಸುವ ಈ ಕಟ್ಟಡವು, ಸ್ಥಳೀಯ ಕುಟುಂಬಗಳಿಗೆ ಆಶಾಕಿರಣವಾಗಲಿದೆ. ಜೊತೆಗೆ ಉದ್ಘಾಟನೆಗೊಂಡ ಕುಡಿಯುವ ನೀರಿನ ಘಟಕವು ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರಿನ ಭದ್ರತೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಈ ಹೊಸ ಸೌಲಭ್ಯಗಳ ಉದ್ಘಾಟನೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಉತ್ತೇಜನ ನೀಡಿದ್ದು, ಸ್ಥಳೀಯ ಜನರ ಜೀವನ ಮಟ್ಟ ಉತ್ತಮಗೊಳಿಸಲು ಸಹಾಯ ಮಾಡಲಿದೆ.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ರೈತರ ಉಪಯೋಗಕ್ಕಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ಉದ್ಘಾಟಿಸಿದ್ದು, ಇದರಿಂದ ರೈತರಿಗೆ ಅನುಕೂಲ ದೊರೆಯಲಿದೆ. ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ವಿತರಣೆ, ಆರೋಗ್ಯ ತಪಾಸಣೆ ಸಹ ಕೈಗೊಳ್ಳಲಾಗುತ್ತಿದ್ದು, ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಗುರು ದಾಸ್ಯಾಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ತಿಕೋಟಾದ ತಹಶೀಲ್ದಾರ ಸುರೇಶ ಚವಲರ್, ತಾಲೂಕು ಪಂಚಾಯತಿಯ ಕಾರ್ಯ ನಿರ್ವಹಣಾಧಿಕಾರಿ ಬಸವಂತರಾಯಗೌಡ ಬಿರಾದರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಘು ನಡುವಿನಮನಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು ಹಾಗೂ ಮುಖಂಡರು ,ಸಾರ್ವಜನಿಕರು ಉಪಸ್ಥಿತರಿದ್ದರು.