ಉತ್ತಮ ಕೈಬರಹದಿಂದ ಜ್ಞಾಪಕಶಕ್ತಿ ಹೆಚ್ಚಳ-ಸಂತೋಷ ಬಂಡೆ
ಇಂಡಿ: ಸುಂದರ ಕೈಬರಹವು ಅಂಕ ಗಳಿಕೆಗೆ ಸಹಾಯ ಮಾಡುವದಲ್ಲದೇ ಕಲಿಕೆ ಮತ್ತು ಮಿದುಳಿನ ಅಭಿವೃದ್ಧಿಗೆ ನೆರವಾಗುವ ಒಂದು ಕೌಶಲವಾಗಿದ್ದು, ಅದು ವ್ಯಕ್ತಿಯ ತಿಳುವಳಿಕೆಯನ್ನು ಸುಧಾರಿಸುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಗುರುವಾರದಂದು ವಿಶ್ವ ಕೈಬರಹ ದಿನವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಕೈಬರಹ ಕೌಶಲ್ಯದಿಂದ ಸಂತೋಷ, ಆತ್ಮವಿಶ್ವಾಸ ಮತ್ತು ಸ್ಫೂರ್ತಿಯನ್ನು ಪಡೆಯುತ್ತಾರೆ. ಉತ್ತಮ ಕೈಬರಹವು ಮಕ್ಕಳ ಜೀವನದಲ್ಲಿ ಆತ್ಮ ವಿಶ್ವಾಸ, ಸೃಜನಶೀಲತೆ, ಕಲಿಕೆ ಮತ್ತು ಜ್ಞಾಪಕಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಮಕ್ಕಳು ಸುಂದರವಾಗಿ ಬರೆಯುವ ರೂಢಿ ಮಾಡಬೇಕು ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,ಕೈಬರಹವು ಭಾಷೆ, ಚಲನೆ, ಸ್ಮರಣೆ ಹಾಗೂ ಓದುವಿಕೆಗೆ ಸಂಬಂಧಿಸಿದ ಮಿದುಳಿನ ನರಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ನಾವು ಬರೆದ ಅಕ್ಷರದ ಗಾತ್ರಗಳು, ಪದಗಳ ಅಂತರ, ಅಕ್ಷರ ರೂಪಗಳು ನಮ್ಮ ಪ್ರಾಮಾಣಿಕತೆ, ಏಕಾಗ್ರತೆ, ಭಾವನಾತ್ಮಕ ಸ್ಥಿರತೆ, ಕೆಲಸ ನಿರ್ವಹಿಸುವ ಪರಿ, ಸಂಘಟನಾ ಸಾಮರ್ಥ್ಯದಂತಹ ಅನೇಕ ಗುಣಲಕ್ಷಣಗಳನ್ನು ಸೂಚಿಸುತ್ತದೆ ಎಂದು ಹೇಳಿದರು.
ಹಿರಿಯ ಶಿಕ್ಷಕಿ ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೈಬರಹ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


















