ಜಾನಪದ ನಮ್ಮ ಪರಂಪರೆಯ ಪ್ರತೀಕ-ಅನುರಾಧಾ ವಸ್ತ್ರದ
ಇಂಡಿ: ಜಾನಪದ ಕಲೆಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅದು ನಮ್ಮ ಪರಂಪರೆಯ ಪ್ರತೀಕವಾಗಿದ್ದು, ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸುವುದು ಬಹಳ ಮುಖ್ಯವಾಗಿದೆ ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಗುರುವಾರದಂದು ಪಟ್ಟಣದ ಕರ್ನಾಟಕ ಬಿಎಡ್ ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ, ಭೀಮಾoತರಂಗ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಕೇಂದ್ರ ಇಂಡಿ, ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ ಇಂಡಿ ಅವರ ಸಹಯೋಗದಲ್ಲಿ ಹಮ್ಮಿಕೊಂಡ ಗೀಗಿ ಸಂಭ್ರಮ, ಸನ್ಮಾನ ಸಮಾರಂಭ, ಹರದೇಶಿ-ನಾಗೇಶಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳು ಕಲಾವಿದರಿಗೆ ಸ್ಫೂರ್ತಿ ನೀಡಿ, ಸೃಜನಶೀಲತೆಯನ್ನು ಉತ್ತೇಜಿಸುತ್ತವೆ. ಜತೆಗೆ ಜಾನಪದ ಕಲೆಗಳು ಸಮುದಾಯಗಳನ್ನು ಒಂದುಗೂಡಿಸಿ ಪರಸ್ಪರ ಸಂಬಂಧಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ ಎಂ ಎಂ ಪಡಶೆಟ್ಟಿ ಮಾತನಾಡಿ, ಜಾನಪದ ಕಲೆಗಳು ಇತಿಹಾಸ, ನಂಬಿಕೆಗಳು ಮತ್ತು ಮೌಲ್ಯಗಳನ್ನು ಕಲಿಸುವ ಮಾರ್ಗವಾಗಿದ್ದು, ಈ ಜಾನಪದ ಕಲೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಬಾಗಲಕೋಟದ ಗೊಂದಲಿ ಪದ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ವೆಂಕಪ್ಪ ಅಂಬಾಜಿ ಸುಗತೇಕರ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ಗುಳೇದಗುಡ್ಡದ ವಿಶ್ರಾಂತ ಪ್ರಾಚಾರ್ಯ ಸಿ ಎಂ ಜೋಶಿ ಡಾ ವೆಂಕಪ್ಪ ಅವರ ಕುರಿತು ಅಭಿನಂದನಾ ನುಡಿಗಳನ್ನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಇಂಡಿ ತಾಲೂಕಾಧ್ಯಕ್ಷ ರಾಘವೇಂದ್ರ ಕುಲಕರ್ಣಿ ದೈನಂದಿನ ಜೀವನದಲ್ಲಿ ಜಾನಪದ ಕಲೆ,ಸಾಹಿತ್ಯದ ಮಹತ್ವದ ಕುರಿತು ಮಾತನಾಡಿದರು. ಸಂಘದ ಕಾರ್ಯದರ್ಶಿ ಪಿ ಬಿ ಕತ್ತಿ ಮಾತನಾಡಿದರು. ಸಾಹಿತಿ ಸಿ ಎಂ ಬಂಡಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಎಡ್ ಕಾಲೇಜಿನ ಪ್ರಾಚಾರ್ಯೆ ಸುಧಾ ಸುಣಗಾರ ಉಪಸ್ಥಿತರಿದ್ದರು. ಶಿಕ್ಷಕ ವೈ ಜಿ ಬಿರಾದಾರ ಸ್ವಾಗತಿಸಿದರು. ಶಿಕ್ಷಕ ಸಂತೋಷ ಬಂಡೆ ನಿರೂಪಿಸಿದರು. ದೈಹಿಕ ಶಿಕ್ಷಕ ಸಂಗನಗೌಡ ಹಚಡದ ವಂದಿಸಿದರು. ಕಾರ್ಯಕ್ರಮದಲ್ಲಿ ಎ ಎಸ್ ಗಾಣಿಗೇರ, ನಿಂಗನಗೌಡ ಬಿರಾದಾರ, ಆರ್ ವ್ಹಿ ಪಾಟೀಲ, ಸರೋಜಿನಿ ಮಾವಿನಮರ, ಬಿ ಸಿ ಭಗವಂತಗೌಡರ,ಸದಾನಂದ ಈರಣಕೇರಿ, ಎಂ ಎಸ್ ಹಯಾಳಕರ, ಬಿ ಎಸ್ ಹಣಮಶೆಟ್ಟಿ, ಎಸ್ ಆರ್ ಗವಸಾಣಿ, ಶಿವಲಿಂಗ ಕಲಬುರ್ಗಿ,ಗೀತಯೋಗಿ, ಎಸ್ ಎಂ ಕಡಕೋಳ, ಆಯ್ ಬಿ ಸುರಪುರ, ಎಂ ಜೆ ಪಾಟೀಲ ಸೇರಿದಂತೆ ಕಾಲೇಜಿನ ಉಪನ್ಯಾಸಕ ಬಳಗ, ಪ್ರಶಿಕ್ಷಣಾರ್ಥಿ ಗಳು ಉಪಸ್ಥಿತರಿದ್ದರು.