ಮುದ್ದೇಬಿಹಾಳ ; ತಾಲ್ಲೂಕಿನ ನಾಗರಬೆಟ್ಟದ ಅಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಖೀಲ್ ಅಹ್ಮದ್ ನದಾಫ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಮಾದಿನಾಳ ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕ ನಾಸಿರ್ ಅಲಿ ಬಿ.ಪಿಂಜಾರ, ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ನಂ.2ರ ವಿಜ್ಞಾನ ಶಿಕ್ಷಕಿ ಶೈನಾಜ್ ಬೇಗಂ ಓಲೇಕಾರ ದಂಪತಿ ಪುತ್ರ ಅಖೀಲ್, ‘ತಂದೆ, ತಾಯಿ ಶಿಕ್ಷಕರಾಗಿರುವುದೇ ನನಗೆ ಈ ಸಾಧನೆ ಮಾಡಲು ಪ್ರೇರಣೆ. ನಾನು ನಿತ್ಯ 8-9 ಗಂಟೆ ಓದುತ್ತಿದ್ದೆ. ಶಿಕ್ಷಕರು ಹಗಲು, ರಾತ್ರಿ ಎನ್ನದೇ ನಮ್ಮ ಸಾಧನೆಗೆ ಮಾರ್ಗದರ್ಶನ ನೀಡುತ್ತಿದ್ದರು.
ಪಿಯುಸಿಯಲ್ಲಿ ವಿಜ್ಞಾನ ಓದಿ ಮುಂದೆ ಐ.ಐ.ಟಿ ಓದುವ ಆಸೆ ಇದೆ’ ಎಂದು ತಿಳಿಸಿದರು.
6 ರಿಂದ 8ನೇ ತರಗತಿ ವರೆಗೆ ಆಲಮಟ್ಟಿಯ ನವೋದಯ ಶಾಲೆ, 9 ಮತ್ತು 10ನೇ ತರಗತಿಯನ್ನು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಅಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಓದಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಖೀಲ್ಅಹ್ಮದ್ ನದಾಫ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ತಂದೆ, ತಾಯಿ ಸಿಹಿ ತಿನ್ನಿಸಿ ಸಂಭ್ರಮಿಸಿದರು
‘ಮಗನ ಈ ಸಾಧನೆ ಮುಂದೆ ಬೇರೆ ಯಾವ ಖುಷಿಯೂ ನಮಗೆ ದೊಡ್ಡದಾಗಿ ಕಾಣಿಸುತ್ತಿಲ್ಲ. ಆತ ಶೇ 100ರಷ್ಟು ಫಲಿತಾಂಶ ಪಡೆದುಕೊಳ್ಳುವುದಾಗಿ ಮನೆಯಲ್ಲಿ ಹೇಳುತ್ತಿದ್ದ. ಆತ ಹೇಳಿದಂತೆ ಮಾಡಿ ತೋರಿಸಿದ್ದಾನೆ. ಮಗನ ಸಾಧನೆ ಅತೀವ ಖುಷಿಯನ್ನುಂಟು ಮಾಡಿದೆ’ ಎಂದು ವಿದ್ಯಾರ್ಥಿ ತಂದೆ ಎನ್. ಬಿ.ಪಿಂಜಾರ ಹೇಳಿದರು.
‘ವಿದ್ಯಾರ್ಥಿ ಅಖೀಲ್ಅಹ್ಮದ್ ನದಾಫ್ ಜಾಣನಾಗಿದ್ದ. ಶಾಲೆಯಲ್ಲಿ ಏರ್ಪಡಿಸುತ್ತಿದ್ದ ಪರೀಕ್ಷೆಯಲ್ಲಿ ಈತನೆ ಮೊದಲಿಗನಾಗಿರುತ್ತಿದ್ದ. ನಮ್ಮ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಆತನಿಗೆ ಅಭಿನಂದಿಸುವವು’ ಎಂದು ನಾಗರಬೆಟ್ಟ ಆಕ್ಸಫರ್ಡ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎಸ್.ಪಾಟೀಲ್ ಹೇಳಿದರು.
'ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದೇವು. ನಮ್ಮ ಶಾಲೆಯ ವಿದ್ಯಾರ್ಥಿ ಅಖಿಲ್ ಅಹ್ಮದ್ ನದಾಫ್ ಅದನ್ನು ನಿಜವಾಗಿಸಿದ್ದಾನೆ. ಫಲಿತಾಂಶ ಖುಷಿ ಕೊಟ್ಟಿದೆ' ಎಂದು ಮುಖ್ಯಶಿಕ್ಷಕ ಇಸ್ಮಾಯಿಲ್ ಮನಿಯಾರ್ ತಿಳಿಸಿದ್ದಾರೆ.