ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ, ಪ್ರತಿಭೆ ಅನಾವರಣಕ್ಕೆ ಈ ಶಿಬಿರ ವೇದಿಕೆ : ರಿಷಿ
ವಿಜಯಪುರ, ಮೇ.೦೬ : ಮಕ್ಕಳ ಜ್ಞಾನ ಮತ್ತು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಬೇಸಿಗೆ ಶಿಬಿರಗಳು ಸಹಾಕಾರಿಯಾಗಿವೆ ಎಂದು ಜಿಲ್ಲಾ ಬಾಲ ಭವನ ಅಧ್ಯಕ್ಷರಾದ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಹೇಳಿದರು.
ಅವರು, ನಗರದ ಜಿಲ್ಲಾ ಪಂಚಾಯತಿಯ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾ ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ಶಿಬಿರವು ಬಹಳ ತೃಪ್ತಿದಾಯಕವಾಗಿ ಜರುಗಿದ್ದು, ಅತ್ಯಲ್ಪ ಸಮಯದಲ್ಲಿಯೇ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಕರಾಟೆ, ನೃತ್ಯ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ ಸೇರಿದಂತೆ ಅಗತ್ಯ ಕೌಶಲ್ಯಗಳನ್ನು ತಿಳಿದುಕೊಂಡಿದ್ದಾರೆ. ನಾಲ್ಕು ಗೋಡೆಗಳ ಮಧ್ಯ ಸದಾ ಪುಸ್ತಕ, ಓದು-ಬರಹ ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಆಟವಾಡಿಕೊಂಡು ಸಂತೋಷದಿಂದ ಮುಕ್ತವಾದ ವಾತಾವರಣದಲ್ಲಿ ಕಲಿಕೆಯಲು ಬೇಸಿಗೆ ಶಿಬಿರವು ಸಹಕಾರಿಯಾಗಿದೆೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ, ಪ್ರತಿಭೆ ಅನಾವರಣಕ್ಕೆ ಈ ಶಿಬಿರ ವೇದಿಕೆಯಾಗಿದೆ. ಮಕ್ಕಳ ಮನಸ್ಸು ಹೂವಿನಂತೆ ಅರಳಲು ಬೇಸಿಗೆ ಶಿಬಿರವು ನೆರವಾಗಲಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ನೀಡುವ ಸಲಹೆ ಹಾಗೂ ಸೂಕ್ತ ಮಾರ್ಗದರ್ಶನವು ಮಕ್ಕಳು ಕಲಿಕೆಯತ್ತ ಆಸಕ್ತಿ ತಾಳಿ ಅವರಲ್ಲಿನ ಸೃಜನಾತ್ಮಕ ಕಲೆಯ ರೂಢಿಸಿಕೊಳ್ಳಲು ಶಿಬಿರದ ಉಪಯುಕ್ತತೆ ಸಾಕಾರಗೊಳ್ಳುತ್ತದೆ. ಮಕ್ಕಳು ಹೊಸ-ಹೊಸ ವಿಷಯಗಳನ್ನು ಕಲಿಯುವುದರಿಂದ ಅವರ ಕಲಿಕಾ ಕಾರ್ಯಕ್ಷಮತೆ ದ್ವಿಗುಣವಾಗುವುದಷ್ಟೇ ಅಲ್ಲದೇ ಆತ್ಮ ವಿಶ್ವಾಸದ ದೃಢತೆ ಹೆಚ್ಚಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸುವುದು, ನೈತಿಕತೆ, ನಾಯಕತ್ವ ಗುಣ, ವಿಜ್ಞಾನ, ಗಣಿತ ಚಟುವಟಿಕೆ, ಕರಾಟೆ, ನೃತ್ಯ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ ಕೌಶಲ್ಯ ಹಾಗೂ ಇನ್ನಿತರ ಆಸಕ್ತಿದಾಯಕ ಚಟುವಟಿಕೆಗಳೂ ಸೇರಿದಂತೆ ಹಲ ಉಪಯುಕ್ತ ವಿಷಯಗಳನ್ನು ಶಿಬಿರದಲ್ಲಿ ಕಲಿಸಿಕೊಡಲಾಗಿದೆ.
ಮುಂಬರುವ ದಿನಗಳಲ್ಲಿ ಬಾಲ ಭವನದ ಹೊರಾಂಗಣ ಆವರಣವನ್ನು ನವೀಕರಣಗೊಳಿಸಿ ಮಕ್ಕಳ ಸ್ನೇಹಿ ಉದ್ಯಾನವನವನ್ನಾಗಿ ಮಾಡಲಾಗುವುದು. ಈ ಶಿಬಿರವನ್ನು ಬೇಸಿಗೆಗೆ ಮಾತ್ರ ಸೀಮಿತಗೊಳಿಸದೇ ವರ್ಷವಿಡೀ ಮಕ್ಕಳ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪಾಠದೊಂದಿಗೆ ಆಟ ಎಂಬುದರೆಡೆಗೆ ಪಾಲಕರು ಒತ್ತು ನೀಡಬೇಕು. ಮಕ್ಕಳು ಹೊಂದಿರುವ ಅವರ ಆಸಕ್ತಿ ಕ್ಷೇತ್ರ ಮತ್ತು ವಿವಿಧ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹ ನೀಡಿ ಅವರಲ್ಲಿನ ಸೃಜನಾತ್ಮಕ ಪ್ರತಿಭೆಯ ಅನಾವರಣಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಜಿಲ್ಲಾ ಬಾಲಭವನದ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ. ಚವ್ಹಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ದೀಪಾ ಕಾಳೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ದೀಪಾಕ್ಷಿ ಜಾನಕಿ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅನೀಲ್ ಹಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಪನ್ಮೂಲ ವ್ಯಕ್ತಿಗಳಾದ ಭಾರತಿ ಕುಂದನಗಾರ, ಸವಿತಾ ಬಿರಾದಾರ, ಜಗದೀಶ ಗುಳೇದಗುಡ್ಡ, ವಾಸು ಕುಲಕರ್ಣಿ, ಸುಮೀತ ಅಕ್ಕಿ ಸೇರಿದಂತೆ ಜಿಲ್ಲಾ ಬಾಲ ಭವನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.


















