ರಾತ್ರಿ ಹಗಲು ಅಕ್ರಮ ಮರಳುಗಾರಿಕೆ..ಎಲ್ಲಿ ಗೊತ್ತಾ..?
ಬಾಗಲಕೋಟ : ಘಟಪ್ರಭಾ ನದಿಯಲ್ಲಿ ನಿರಂತರವಾಗಿ ಯಾರ ಭಯವೂ ಇಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ದೋಚಣೆ ರಾಜ್ಯದ ಗಮನ ಸೆಳೆದಿದೆ. ರಾತ್ರಿ ಹಗಲು ಭೇದವಿಲ್ಲದೆ ನಡೆಯುತ್ತಿರುವ ಈ ಅಕ್ರಮದಿಂದ ನದಿ ಬರಡಾಗುವ ಭೀತಿ ಎದುರಾಗಿದೆ.
ಇದೇ ರೀತಿ ಮುಂದುವರೆದರೆ ಕೇವಲ ಒಂದೇ ತಿಂಗಳಲ್ಲಿ ನದಿಯ ಸಂಪೂರ್ಣ ಮರಳು ಬರಿದಾಗುವ ಸಾಧ್ಯತೆ ಇದೆ. ಇದರಿಂದ ನಗರದ ಜನತೆಗೆ, ತಾಲೂಕಿನ ರೈತಾಪಿ ವರ್ಗಕ್ಕೆ ತುಂಬಾ ಸಂಕಷ್ಟ ಎದುರಾಗಲಿದೆ. ಅಲ್ಲದೆ ಪರಿಸರಕ್ಕೆ ಕೂಡಾ ಭಾರೀ ಹಾನಿಯಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು ಸಾಗಾಣಿಕೆಯಿಂದ ನದಿಯ ಆರೋಗ್ಯ ಹದಗೆಡುವುದರ ಜೊತೆಗೆ, ಜಲಚರಗಳಿಗೆ, ಪ್ರಾಣಿಪಕ್ಷಿಗಳಿಗೆ, ಜನ-ಜಾನುವಾರಗಳಿಗೆ ದೊಡ್ಡ ಅಪಾಯ ಎದುರಾಗಿದೆ.
ಈ ಸಂಬಂಧ ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ರೈತ ಸಂಘದ ಪ್ರಮುಖರಾದ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಮಹೇಶಗೌಡ ಪಾಟೀಲ, ಸುರೇಶ್ ಚಿಂಚಲಿ, ಸುಭಾಷ ಶಿರಭೂರ, ಹನುಮಂತ ನಬಾಬ, ನ್ಯಾಯವಾದಿ ಲಕ್ಕಪ್ಪ ಸುನಗದ, ಯಲಪ್ಪ ಹೆಗಡೆ ಸೇರಿದಂತೆ ಹಲವಾರು ರೈತ ಮುಖಂಡರು ತಹಶೀಲ್ದಾರ್ ಮಹದೇವ ಸನಮುರಿ ಮೂಲಕ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ. ಅಕ್ರಮ ಮರಳು ದೋಚಣೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಅಕ್ರಮ ಮರಳು ದೋಚಣೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಘಟಪ್ರಭಾ ನದಿ ಸಂಪೂರ್ಣವಾಗಿ ಮಾಯವಾಗಿ ಶೀಘ್ರದಲ್ಲೇ ಇತಿಹಾಸದ ಪುಟಗಳಲ್ಲಿ ಮಾತ್ರ ಸಿಗುವ ಸ್ಥಿತಿ ಬರಬಹುದು.
ಈ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ. ಘಟಪ್ರಭಾ ನದಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು ನಾಗರಿಕರೂ ಸಹ ಈ ನಿಟ್ಟಿನಲ್ಲಿ ಧ್ವನಿ ಎತ್ತುವ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ನಮ್ಮ ಜೀವನಾಡಿಯಾಗಿರುವ ನದಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋಮುಖರಾಬೇಕಾಗಿರುವುದು ಇಂದು ಅತ್ಯಂತ ಅವಶ್ಯಕವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.