ಆಧುನಿಕಅಭಿಲೇಖಾಲಯಕ್ಕೆ ಚಾಲನೆ ನೀಡಿ
ಸಾಂಕೇತಿಕವಾಗಿ ಗಣಕೀಕೃತ ದಾಖಲೆ ವಿತರಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್
ವಿಜಯಪುರ ಜೂ.02 : ಭೂ ಸುರಕ್ಷಾ ಯೋಜನೆ ದಾಖಲೆಗಳ ಡಿಜಿಟಲೀಕರಣ ಜಿಲ್ಲೆಯಲ್ಲಿ ಕಾರ್ಯ ಆರಂಭಗೊಂಡಿದ್ದು ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಸೋಮವಾರ ಆಧುನಿಕ ಅಭಿಲೇಖಾಲಯ ಕೊಠಡಿಗೆ ಚಾಲನೆ ನೀಡಿ, ಸಾಂಕೇತಿಕವಾಗಿ ಗಣಕೀಕೃತ ಪ್ರತಿಗಳನ್ನು ರೈತರಿಗೆ ನೀಡಿದರು.
ಈ ಸಂದರ್ಭಧಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯ ಈಗಾಗಲೇ ಆರಂಭಿಸಲಾಗಿದ್ದು, ಜಿಲ್ಲೆಯಲ್ಲಿ ವಿಜಯಪುರ ತಾಲೂಕನ್ನು ಪೈಲಟ್ ತಾಲೂಕನ್ನಾಗಿ ಕೈಗೆತ್ತಿಕೊಂಡು 1,52,000 ಕಡತಗಳ ಪೈಕಿ ಈಗಾಗಲೇ 1,22,000 ಕಡತಗಳನ್ನು ಗಣಕೀಕರಣ ಮಾಡಲಾಗಿದೆ. ದಾಖಲಾತಿಗಳ ಗಣಕೀಕರಣದಿಂದ ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಸುಲಭವಾಗಿ ದಾಖಲಾತಿಗಳು ದೊರಕಲಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದಾಖಲಿಕರಣ ಕಾರ್ಯದಲ್ಲಿ ವಿಜಯಪುರ ತಾಲೂಕು ಮೊದಲ ತಾಲೂಕುವಾಗಲಿದೆ. ಉಳಿದ ತಾಲೂಕುಗಳಲ್ಲಿಯೂ ಸಹ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಗಣಕೀಕೃತ ದಾಖಲೆಗಳನ್ನು ಮಾತ್ರ ನೀಡಲಾಗುವುದು. ಯಾವುದೇ ದಾಖಲೆಗಳು ಬೇಕಾಗಿದ್ದಲ್ಲಿ ಆನ್ಲೈನ್ ಮೂಲಕವೇ ಪಡೆದುಕೊಳ್ಳಬಹುದಾಗಿದ್ದು, ಯಾವುದೇ ದಾಖಲೆಗಳನ್ನು ಪಡೆದುಕೊಳ್ಳಲು ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಿ ಸ್ಥಳದಲ್ಲಿಯೇ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲು ಡಿಜಿಟಲೀಕರಣ ಕಾರ್ಯದಿಂದ ಅನುಕೂಲವಾಗಲಿದೆ. ಸಾರ್ವಜನಿಕರು ಸೇರಿದಂತೆ ಭೂ ಸುರಕ್ಷಾ ಯೋಜನೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ತಹಶೀಲ್ದಾರ ಪ್ರಶಾಂತ ಚನಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.