ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ
-ಸಂತೋಷ ಬಂಡೆ
ವಿಜಯಪುರ: ಬದುಕೆಂಬ ಆಟದಲ್ಲಿ ಹಲವು ತಿರುವುಗಳಿದ್ದು, ಒಂದು ಕೆಟ್ಟ ಘಳಿಗೆಯಲ್ಲಿ ಅಂಟಿಕೊಂಡ ದುಶ್ಚಟ ಕ್ಷಣಿಕ ತೃಪ್ತಿ ನೀಡುತ್ತೆ ವಿನಃ ನಮ್ಮ ಬದುಕಿಗೆ ಸ್ಫೂರ್ತಿ ನೀಡಲ್ಲ. ಮಾದಕ ವ್ಯಸನಗಳಿಗೆ ಬಲಿಯಾಗದೇ ಇಂದಿನ ಯುವಕರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ನಾಗಠಾಣದ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶುಕ್ರವಾರ ತಾಲೂಕಿನ ಜುಮನಾಳ ಗ್ರಾಮದ ಜಟ್ಟಿಂಗೇಶ್ವರ ಗುಡಿಯಲ್ಲಿ ವಿಜಯಪುರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್ ಎಸ್ ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಜರುಗಿದ 2025-26 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ‘ಮಾದಕ ವ್ಯಸನಗಳ ನಿರ್ಮೂಲನೆಯಲ್ಲಿ ಯುವಕರ ಪಾತ್ರ’ ಕುರಿತು ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
ಯುವಕರು ದೇಶದ ಆಸ್ತಿ. ಯುವಪೀಳಿಗೆ ಸಾಮಾಜಿಕ ಮತ್ತು ವೈಯಕ್ತಿಕ ಜವಾಬ್ದಾರಿಯ ಪ್ರಜ್ಞೆ ಬೆಳೆಸಿಕೊಂಡು ವ್ಯಸನಮುಕ್ತ ಸಮಾಜಕ್ಕೆ ಕೊಡುಗೆ ನೀಡಬೇಕು. ಮಾದಕ ದ್ರವ್ಯ ಸೇವನೆಯ ಚಟಕ್ಕೆ ಒಳಗಾಗುವುದಿಲ್ಲ ಎಂಬ ಧೃಢ ನಿಲುವು ಹೊಂದಿ, ಭವಿಷ್ಯದ ಹಿತದೃಷ್ಠಿಯಿಂದ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.
‘ಇಲ್ಲ ಸಲ್ಲದ ಚಟಗಳಿಗೆ ಬಲಿಯಾಗುವ ಮುಂಚೆ ನಮ್ಮ ಯುವಜನತೆ ತಮ್ಮ ತಂದೆತಾಯಿಯ ನಿರೀಕ್ಷೆ, ಭವಿಷ್ಯದ
ಕನಸು, ತಮ್ಮ ಕೆಲಸಗಳ ಬಗ್ಗೆ ಆಲೋಚಿಸಬೇಕು. ದೇಶದ ಅಭಿವೃದ್ಧಿಗೆ ಮಾರಕವಾದ ಮಾದಕ ವಸ್ತುಗಳನ್ನು ತ್ಯಜಿಸಿ, ಸದೃಢ ಸಮೃದ್ಧ ಭಾರತವನ್ನು ಕಟ್ಟಬೇಕಾಗಿದೆ.ಅದರ ಕುರಿತು ಇಂದಿನ ಯುವಜನತೆ ಸದಾ ಎಚ್ಚರಿಕೆಯಿಂದ ಇದ್ದು, ಬೇರೆಯವರನ್ನು ಎಚ್ಚರಿಸಿ, ಆರೋಗ್ಯಯುತ ಜೀವನ ನಡೆಸಬೇಕು’ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಪಿ ಆರ್ ಡೋಣುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವಸ್ತುವಿನ ಸೇವನೆ ಸುಲಭ ಆದರೆ ಅದನ್ನು ಬಿಡುವುದು ಕಷ್ಟ. ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ಮಾದಕ ವಸ್ತು ಸೇವನೆಯ ಚಟ ದೂರ ಮಾಡಬಹುದು. ಮನಸ್ಸಿನ ಶಕ್ತಿಗಿಂತ ಯಾವುದು ದೊಡ್ಡದಿಲ್ಲ ಎಂದರು.
ಸಹಾಯಕ ಪ್ರಾಧ್ಯಾಪಕ ವ್ಹಿ ಎಂ ಸಜ್ಜನ, ಡಾ ಎಸ್ ಡಿ ಮನಮಿ,ನಂದಶ್ರೀ ಜೆ, ಡಾ ಆರ್ ಟಿ ನಾಯರ ಸೇರಿದಂತೆ ಬಿಎಡ್ ಪ್ರಶಿಕ್ಷಣಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
‘ಮಾದಕ ವಸ್ತಗಳ ಸೇವನೆ ಯುವಕರ ಅಮೂಲ್ಯ ಜೀವನ ಹಾಳುಗೆಡವುತ್ತಿದೆ. ಇದು ಸಮಾಜಕ್ಕೆ, ದೇಶದ ಒಳಿತಿಗೆ ಮಾರಕ’.


















