ಮಾಚ್ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ
ಮುದ್ದೇಬಿಹಾಳ: ದಶಕಗಳ ಕನಸಾದ ರಂಭಾಪುರಿ ಶಾಖಾಮಠದ ಸ್ಥಾಪನೆಗೆ ಕಾಲ ಕೂಡಿ ಬಂದಿದ್ದು, ಮಾಚ್ 14 ರಂದು ವಿಜಯಪುರದಲ್ಲಿ ಶಾಖಾಮಠದ ಭೂಮಿ ಪೂಜೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸೋಮಯ್ಯ ಗಣಾಚಾರಿ ತಿಳಿಸಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “2008 ರಿಂದಲೇ ರಂಭಾಪುರಿ ಶಾಖಾಮಠ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಜಿಲ್ಲೆಗೆ ಆಗಮಿಸುವ ಪಂಚಪೀಠಗಳ ಜಗದ್ಗುರುಗಳಿಗೆ ತಂಗಲು ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಮಠ ನಿರ್ಮಾಣವಾಗುತ್ತಿದೆ,” ಎಂದರು. ಕಾರ್ಯಕ್ರಮದ ನಡೆಯುವ ದಿನಾಂಕ: 14-03-2026, ಶನಿವಾರ ಸಮಯ: ಸಂಜೆ 4:00 ಗಂಟೆಗೆ ಸುರಭಿ ಸಿದ್ದೇಶ್ವರ ಲೇಔಟ್, ನವರಸಪುರ, ವಿಜಯಪುರದಲ್ಲಿ ನಡೆಯಲಿದೆ.
ಸನ್ನಿಧಾನ: ರಂಭಾಪುರಿ ಜಗದ್ಗುರುಗಳಾದ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಚಿವ ಎಂ.ಬಿ. ಪಾಟೀಲರು ಈ ಕಾರ್ಯಕ್ರಮದ ಕುರಿತು ವಿಶೇಷ ಕಾಳಜಿ ವಹಿಸಿ ಆಯೋಜನೆ ಮಾಡಿದ್ದು, ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷರಾದ ದಾನಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, “ಪಂಚಪೀಠಗಳಲ್ಲಿ ಪ್ರಮುಖವಾದ ರಂಭಾಪುರಿ ಪೀಠದ ಶಾಖಾಮಠ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಎಂ.ಬಿ. ಪಾಟೀಲರ ನೇತೃತ್ವದಲ್ಲಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು,” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಶೋಕ ನಾಡಗೌಡ, ಸಿದ್ದಯ್ಯ ಕಲ್ಯಾಣಮಠ, ಸಿದ್ದಯ್ಯ ಸರಗಣಾಚಾರಿ, ಅರವಿಂದ ಅದ್ದಿಮಠ, ಮಹಾಂತೇಶ ಬೂದಿಹಾಳಮಠ, ಸದಾಶಿವ ಮಠ, ಶಿವಾನಂದ ಹಿರೇಮಠ, ಗೌರಿಶಂಕರ ಪುರಾಣಿಕಮಠ, ಚಂದ್ರಶೇಖರ ಶಿವಯೋಗಿಮಠ, ಮಹಾಂತೇಶ ಮಠಪತಿ, ಗುರಯ್ಯ ಮುನ್ನೂರಮಠ, ಸಿ.ಎನ್. ಹಿರೇಮಠ, ಶ್ರೀಕಾಂತ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.