ಕಾಲಜ್ಞಾನಿಯ ಅಚ್ಚರಿಯ ಆಚರಣೆ ಗೊತ್ತಾ.?
ಈ ದೇವರ ನೈವೇದ್ಯ ಎಷ್ಟು ವಿಚಿತ್ರ ಗೊತ್ತಾ..!
ಇಂಡಿ : ಈ ಜಗತ್ತು ಚಿತ್ರ-ವಿಚಿತ್ರ-ವೈಚಿತ್ರ್ಯೆ – ಸಚಿತ್ರಗಳ ಸಂಗಮವಾಗಿದೆ.ಇಂತಹ ಉದಾಹರಣೆಗಳಿಗೆ ದೈವ-ದೇವರುಗಳು ಹೊರತಾಗಿಲ್ಲ.ಇದಕ್ಕೆ ಪೂರಕವಾಗಿ ಬಲು ವಿಚಿತ್ರವೆಂದರೂ ಸತ್ಯವಾಗಿರುವ ಅಚ್ಚರಿಯ ವಿಷಯನಂದರೇ ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಕಾಲಜ್ಞಾನಿ ಯುಗ ಪುರುಷ ದೇವರಾಗಿರುವ ಧರ್ಮರ ದೇವರಿಗೆ(ಮರುಳಸಿದ್ದೇಶ್ವರ) ಮತ್ತು ನಿಜಲಿಂಗ ತಾಯಿ ಮತ್ತು ಇತರೆ ದೇವರುಗಳಿಗೆ ಮಧ್ಯ (ಸಾರಾಯಿ ) ಅಭೀಷೇಕ ಮಾಡಲಾಗುತ್ತದೆ ಎಂಬುದು ವಿಚಿತ್ರ ಎನಿಸಿದರೂ ಕಟು ಸತ್ಯ.
ಹೌದು ದೇವಾನು ದೇವತೆಗಳಿಗೆ ಕ್ಷೀರಾಭಿಷೇಕ, ನೀರಾಭಿಶೇಕ, ಹಾಲು-ತುಪ್ಪ ಹಣ್ಣುಗಳ ಅಭಿಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದೇವರಿಗೆ ಮಧ್ಯವನ್ನೇ (ಸಾರಾಯಿ) ಅಭಿಷೇಕ ಮಾಡಲಾಗುತ್ತದೆ. ಇದು ವಿಚಿತ್ರ ಎನಿಸಿದರೂ ಕಟು ಸತ್ಯ.
ಹೀಗೆ ಸಾರಾಯಿಯಿಂದ ನೈವೆದ್ಯ ಮಾಡಿಸಿಕೊಳ್ಳುವ ದೇವರು ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಧರ್ಮರ ದೇವರು (ಮರುಳಸಿಧ್ಧೇಶ್ವರ). ಇಂಡಿ ನಗರದಿಂದ ಸುಮಾರು ೬ ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಮರುಳಸಿಧ್ಧೇಶ್ವರ ಹಾಗೂ ನಿಜಲಿಂಗ ತಾಯಿ ಎಂಬ ದೇವತೆಗಳಿವೆ. ಈ ದೇವತೆಗಳ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಾದ ಮೊದಲ ಸೋಮವಾರ ಧರ್ಮರ ದೇವರ ಜಾತ್ರೆ, ಅಮವಾಸ್ಯೆಯಾದ ಮೊದಲ ಗುರುವಾರರಂದು ನಿಜಲಿಂಗತಾಯಿ (ಸೀತಮ್ಮ) ದೇವರ ಜಾತ್ರೆ ನಡೆಯುತ್ತದೆ.
ಈ ಬಾರಿ ಮಾರ್ಚ ೩ ರಂದು ಸೋಮವಾರ ಧರ್ಮರ ದೇವರ (ಮರುಳಸಿಧ್ಧೇಶ್ವರ) ಜಾತ್ರಾ ಮಹೋತ್ಸವವಿದೆ. ಮಾರ್ಚ ೬ ರಂದು ಗುರುವಾರ ನಿಜಲಿಂಗತಾಯಿ ದೇವತೆಯ ಜಾತ್ರಾ ಮಹೋತ್ಸವವಿದೆ.
ಧರ್ಮರ ದೇವರ (ಶ್ರೀ ಮರುಳಸಿದ್ದೇಶ್ವರ) ಜಾತ್ರಾ ಮಹೋತ್ಸವ ಮಾರ್ಚ ೩ ಸೋಮವಾರರಂದು ನಡೆಯಲಿದ್ದು, ಅಂದು ಬೆಳಿಗ್ಗೆ ಶ್ರೀ ಮರುಳಸಿದ್ದೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ಸಾಯಂಕಾಲ ೬:೦೦ ಘಂಟೆಗೆ ಗಂಗೆ ಸೀತಾಳ, ರಾತ್ರಿ ೮:೦೦ ಘಂಟೆಗೆ ದೇವರಿಗೆ ವಿಶೇಷ ಅಭಿಷೇಕ ನಡೆಯಲಿದೆ. ತದನಂತರ ನುಡಿಮುತ್ತು (ದೇವರ ಹೇಳಿಕೆ) ಕಾರ್ಯಕ್ರಮವಿದ್ದು ರಾತ್ರಿ ೯:೦೦ ಘಂಟೆಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ.
ಅಂದು ರಾತ್ರಿ ೭:೦೦ ಯಿಂದ ೯:೦೦ ವರೆಗೆ ಹಂತಿ ಪದ ಗಳು ಜರುಗಲಿದ್ದು, ರಾತ್ರಿ ೯:೦೦ ನಂತರ ಅಥಣ ತಾಲೂಕಿನ ಬಳ್ಳಿಗೇರಿಯ ಬಸವೇಶ್ವರ ಹರದೇಶಿ ಗೀಗಿ ಮೇಳದ ಗಾಯಕರಾದ ಚಂದ್ರಕಾಂತ ಗುರಪ್ಪ ನಾಟಿಕಾರ ಸಂಗಡಿಗರಿಂದ ಹರದೇಶಿ ಗೀಗಿ ಪದಗಳು, ದೇವರಗೆಣ್ಣೂರ ಮಹಾಲಕ್ಷ್ಮಿ ನಾಗೇಶಿ ಮೇಳದ ಗಾಯಕರಾದ ಸುಜಾತ ಹಂಗರಗಿ ಹಾಗೂ ಸಂಗಡಿಗರಿಂದ ನಾಗೇಶಿ ಗೀಗೀ ಪದಗಳು ಜರುಗಲಿವೆ.
ವಿಶೇಷ ಮಧ್ಯಾಭಿಷೇಕ: ಈ ದೇವತೆಗಳ ವಿಶೇಷತೆಯೆಂದರೆ ಜಾತ್ರಾ ಮಹೋತ್ಸವದ ದಿನ ರಾತ್ರಿ ೦೮ ಘಂಟೆಗೆ ಈ ದೇವತೆಗಳಿಗೆ ಭಕ್ತರು ನೈವೇದ್ಯ ರೂಪದಲ್ಲಿ ಸಾರಾಯಿಯನ್ನು ನೀಡುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸರಾಗವಾಗಿ ಆಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಇನ್ನೊಂದು ವಿಶೇಷ ಅಂದರೆ ಈ ನೈವೇದ್ಯ ಆದ ಮೇಲೆ ಸಾರಾಯಿಯನ್ನು ಎಲ್ಲ ಭಕ್ತಾದಿಗಳು (ಗಂಡಸರು ಮಾತ್ರ) ತೀರ್ಥ ಎಂದು ಸ್ವೀಕರಿಸುತ್ತಾರೆ.
ಪ್ರಸಾದ ವ್ಯವಸ್ಥೆ: ಜಾತ್ರಾದಿನ ಪೂಜಾ ನಂತರ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದರಲ್ಲಿ ವಿಶೇಷವಾಗಿ ಕಿಚಡಿ ಹಾಗೂ ಅಂಬಲಿ, ಅಮ್ಮ ಹಾಗೂ ಸಾಂಬರ್ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಹೀಗಾಗಿ ಈ ಜಾತ್ರೆಯನ್ನು ಅಂಬಲಿ ಜಾತ್ರೆ ಎಂದೂ ಕರೆಯುತ್ತಾರೆ.
ಭಕ್ತರ ದಂಡು: ಈ ದೇವತೆಗಳ ದರ್ಶನಕ್ಕೆ ತಾಲೂಕು ಅಲ್ಲದೆ ಗಡಿ ಭಾಗದ ಮಹಾರಾಷ್ಟçದಿಂದಲೂ ಆಗಮಿಸುತ್ತಾರೆ ಈ ದೇವತೆಗಳ ದರ್ಶನ ಪಡೆದು ಮಧ್ಯದ ತೀರ್ಥ ಸ್ವೀಕರಿಸಿ ನುಡಿಮುತ್ತು (ಹೇಳಿಕೆ) ಕೇಳಿಕೊಂಡು ಹೋಗುವುದು ವಾಡಿಕೆಯಾಗಿದೆ.
ಏನೀ ಹೇಳಿಕೆ ಅಂದ್ರೆ? ದೇವತೆಗಳ ಪೂಜಾ ಕಾರ್ಯಕ್ರಮ ಮುಗಿದ ಮೇಲೆ ತೆಂಗಿನ ಕಾಯಿಗಳ ಮುಖಾಂತರ ಹೇಳಿಕೆಗಳು ನಡೆಯುತ್ತವೆ. ತೆಂಗಿನಕಾಯಿ ಒಡೆದಾಗ ಅದರ ಮುಂಭಾಗದ ಹೊಳಿಕೆ ಆಕಾಶದ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ವಿಘ್ನವಿಲ್ಲ ವರ್ಷವಿಡೀ ಉತ್ತಮವಾದ ಜೀವನ ಸಾಗಿಸುತ್ತಾನೆ ಎಂದರ್ಥ. ಅದು ಆಕಸ್ಮಾತ್ ಭೂಮಿ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ತೊಂದರೆಯಂತೆ ವರ್ಷವಿಡೀ ವಿಘ್ನಗಳು ಬರುತ್ತವೆ ಎಂಬುದು ಭಕ್ತರ ನಂಬಿಕೆ.
ಆ ದೇವತೆಗಳನ್ನು ನಂಬಿದ ಭಕ್ತ ವರ್ಗ ಅವರು ಬೇಡಿಕೊಂಡ ಹರಕೆಗಳು ಕೈಗೊಂಡಾಗ ಪ್ರತಿ ವರ್ಷ ಜಾತ್ರಾ ಮಹೋತ್ಸವದಂದು ಸಾಯಂಕಾಲ ದೀರ್ಘದಂಡ ನಮಸ್ಕಾರ ಹಾಕುವ ಪಧ್ಧತಿ ಇದೆ. ವಿಶೇಷವೆಂದರೆ ಈ ದೇವತೆಗಳಿಗೆ ಹಿಂದೂ-ಮುಸ್ಲಿಂ ಎರಡು ಜನಾಂಗದವರು ಸಾಮರಸ್ಯದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆಯುತ್ತ ಅದ್ದೂರಿಯಾಗಿ ಜಾತ್ರೆ ಮಾಡುವ ಸಂಪ್ರದಾಯವಿದೆ.
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ (ಧರ್ಮರ ದೇವರ) ದೇವಾಲಯದ ಹೊರನೋಟ.
