ರಾಯಚೂರು: ಜಿಲ್ಲೆಯಾದ್ಯಂತ ರೈತರು ಹಿಂಗಾರಿನಲ್ಲಿ ಬೆಳೆದಿರುವ ಜೋಳ, ಸಜ್ಜೆ ಹಾಗೂ ಕಡಲೆ ಫಸಲು ಉತ್ತಮವಾಗಿ ಬಂದಿದೆ. ಸಂತಸದಿಂದಲೇ ಬೆಳೆ ಕಟಾವು ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಆದರೆ ರೈತರಲ್ಲಿ ಮಾತ್ರ ಯಾವುದೇ ಉತ್ಸಾಹ ಹುಮ್ಮಸ್ಸು ಕಾಣುತ್ತಿಲ್ಲ.
ಹೌದು ರಾಯಚೂರು ಜಿಲ್ಲೆಯಾದ್ಯಂತ ಹಿಂಗಾರು ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಕೆಲವರು ಜೋಳ, ಸಜ್ಜೆ ಕಟಾವು ಮಾಡಿದ್ದು, ಉತ್ತಮ ಫಸಲು ಕೈ ಸೇರಿದೆ. ಆದರೆ ಮಾರಾಟ ಮಾಡಲು ನಿರೀಕ್ಷಿತ ಪ್ರಮಾಣದಲ್ಲಿ ದರವಿಲ್ಲದೆ ನಿರಾಸೆ ಅನುಭವಿಸುವಂತಾಗಿದೆ. ಕನಿಷ್ಠ ಬೆಂಬಲ ಬೆಲೆ ಎಂಎಸ್ಪಿಗೆ ಮಾರಾಟ ಮಾಡುವುದಕ್ಕೆ ರೈತರು ನೋಂದಣಿ ಮಾಡಿಕೊಂಡಿದ್ದರೂ ಖರೀದಿ ಇನ್ನೂ ಆರಂಭವಾಗಿಲ್ಲ. ಈಗಾಗಲೆ ಸರಕಾರ ಖರೀದಿಯನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ಖರೀದಿಸಲಾಗುವುದು ಎಂದು ತಿಳಿಸಿದೆ. ಹಿಗಾಗಿ ರೈತರಿಗೆ ಕೈಸೇರಿದ ಬೆಳೆ ಉತ್ತಮ ಬೆಲೆಗೆ ಮಾರಾಟವಾಗದ ಬೇಸರ ಮುಖದಲ್ಲಿ ಎದ್ದು ಕಾಣುತ್ತಿದ್ದು, ಕಟಾವು ಮಾಡದ ರೈತರ ಮುಖದಲ್ಲಿ ಕಳೆ ಗುಂದಲು ಇದೆ ಕಾರಣವಾಗಿದೆ.
ಹೀಗಾಗಿ ಕಟಾವು ಮಾಡದ ರೈತರು ಮುಂದಿನ ದಿನಗಳಲ್ಲಿಯಾದರೂ ದರ ಏರಿಕೆಯಾಗಬಹುದು ಎಂದು ಕಾಯುತ್ತಿದ್ದಾರೆ. ಇನ್ನೂ ಖರೀದಿ ಕೇಂದ್ರಗಳಲ್ಲಿ ಒಬ್ಬ ರೈತರಿಂದ ಜೋಳ ಗರಿಷ್ಠ 20 ಕ್ವಿಂಟಲ್ ಖರೀದಿಸಲಾಗುತ್ತಿದ್ದು, ಬಿಳಿಜೋಳ-ಹೈಬ್ರೀಡ್ಗೆ ಜೋಳಕ್ಕೆ ಪ್ರತಿ ಕ್ವಿಂಟಲ್ಗೆ ₹2,738 ಹಾಗೂ ಬಿಳಿಜೋಳ-ಮಾಲ್ದಂಡಿಗೆ ಪ್ರತಿ ಕ್ವಿಂಟಲ್ಗೆ ₹2,758 ಗಳಂತೆ ದರ ನಿಗದಿ ಮಾಡಲಾಗಿದೆ. ಕೆಲವೆಡೆ ಜೋಳ ಖರೀದಿ ಆರಂಭಿಸಲಾಗಿದೆ ಎಂದು ಹೇಳಿದ್ದರೂ, ಅಧಿಕೃತವಾಗಿ ಇನ್ನೂ ಖರೀದಿ ಆರಂಭವಾಗಿಲ್ಲ. ಫೆಬ್ರವರಿ ಆರಂಭವಾಗುತ್ತಿದ್ದಂತೆ ಜೋಳ ಮತ್ತು ಕಡಲೆ ಕೊಯ್ಲು ವ್ಯಾಪಕವಾಗಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಹಾಗಾಗಿ ಸರಕಾರ ಇತ್ತ ಗಮನ ಹರಿಸಿ ಖರೀದಿಯಲ್ಲಿ ಒಂದಷ್ಟು ಬದಲಾವಣೆ ಮಾಡುವ ಮೂಲಕ ಹೆಚ್ಚಿನ ಜೋಳ ಖರೀದಿಗೆ ಮುಂದಾಗಬೇಕಿದೆ.
ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 91 ಸಾವಿರ ಹೆಕ್ಟೇರ್ ಜೋಳ ಬಿತ್ತನೆ ಗುರಿ ಹೊಂದಿದ್ದರೂ 71,019 ಹೆಕ್ಟೇರ್ನಲ್ಲಿ ಬಿತ್ತನೆ ಸಾಧನೆಯಾಗಿದೆ. ಕಡಲೆ ಬಿತ್ತನೆ ಗುರಿ 1,12,037 ಹೆಕ್ಟೇರ್ ಬಿತ್ತನೆ ಇದ್ದರೂ, ಗುರಿ ಮೀರಿ 2,16,690 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಒಣ ಬೇಸಾಯ ಹೆಚ್ಚಿನ ಪ್ರಮಾಣದಲ್ಲಿರುವ ಲಿಂಗಸುಗೂರು ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ಈ ಸಲ ವ್ಯಾಪಕವಾಗಿ ಕಡಲೆ ಬಿತ್ತನೆಯಾಗಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ 50,400 ಕಡಲೆ ಬಿತ್ತನೆ ಗುರಿ ಇತ್ತು, 46,204 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಾದ ಬೆಳೆಗಳು ಉತ್ತಮ ಫಸಲನ್ನು ನೀಡಿವೆ. ಮಸ್ಕಿ ತಾಲ್ಲೂಕಿನಲ್ಲಿ 20,487 ಹೆಕ್ಟೇರ್ ಕಡಲೆ ಬಿತ್ತನೆಯಾಗುವ ಗುರಿ ಇತ್ತು. ಆದರೆ, 34,196 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಕಾಲುವೆ ನೀರು ಸಮರ್ಪಕವಾಗಿ ದೊರೆಯದ ಭಾಗದಲ್ಲಿರುವ ಬಹುತೇಕ ರೈತರು ಕಡಲೆ ಬೆಳೆದಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಹತ್ತಿ ಬೆಳೆದಿದ್ದ ರೈತರ ಪೈಕಿ ಕೆಲವರು ಇನ್ನೂ ಜಮೀನು ಖಾಲಿ ಮಾಡಿಕೊಂಡಿಲ್ಲ. ಭತ್ತ ಬೆಳೆದು ಕಟಾವು ಮಾಡಿಕೊಂಡಿದ್ದವರು ಹಾಗೂ ನಷ್ಟ ಅನುಭವಿಸಿದ ರೈತರು ಎರಡನೇ ಬೆಳೆಗೆ ಭತ್ತವನ್ನೇ ಬೆಳೆಯುತ್ತಿದ್ದಾರೆ.
ಕಾಲುವೆ ನೀರು ಸಮರ್ಪಕವಾಗಿ ಲಭ್ಯವಿರುವ ರೈತರು ಮಾತ್ರ ಭತ್ತದ ಮೊರೆ ಹೋಗಿದ್ದಾರೆ. ಇನ್ನುಳಿದಂತೆ ಹತ್ತಿ ಬೆಳೆದಿರುವ ರೈತರು ಈ ವರ್ಷ ಉತ್ತಮ ಲಾಭ ಪಡೆದುಕೊಂಡು ಸಂತುಷ್ಟವಾಗಿದ್ದಾರೆ. ಆದರೆ ಹಿಂಗಾರು ರೈತರು ಮತ್ತು ಬೆಲೆ ಸಿಗದೆ ನಷ್ಟ ಅನುಭವಿಸುವ ಭಯ ಕಾಡುತ್ತಿದೆ.
ಅದೇನೆ ಇದ್ದರೂ ಸರ್ಕಾರ ಇತ್ತು ಗಮನ ಹರಿಸುವ ಮೂಲಕ ರೈತರಿಗೆ ಮುಂದಿನ ದಿನಗಳಲ್ಲಿ ಆರಂಭವಾಗಲಿರುವ ಖರೀದಿ ಕೇಂದ್ರಗಳಲ್ಲಿ ಕೊಂಚ ಬದಲಾವಣೆ ಮಾಡುವ ಮೂಲಕ ಹೆಚ್ಚಿನ ಜೋಳ ಕಡಲೆ ಖರೀದಿ ಮಾಡಿ ಉತ್ತಮ ಬೆಲೆ ನೀಡುವ ಮೂಲಕ ರೈತರಿಗೆ ಧೈರ್ಯ ತುಂಬುವ ಕೆಲಸದ ಜೊತೆ ಪ್ರೋತ್ಸಾಹ ನೀಡಬೇಕಿದೆ.