ಈಜಾಡಲು ಹೋಗಿ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲು
ಅಫಜಲಪುರ :ಸಂಬಂಧಿಕರು ದೇವರಿಗೆ ನೈವೇದ್ಯ ಮಾಡಿದ್ದಾರೆಂದು ಊಟ ಮಾಡಿಕೊಂಡು ಬರೋಣ ಎಂದು ಹೇಳಿ ಸ್ನೇಹಿತರಿಬ್ಬರು ಹೋಗಿ ಈಜಾಡಲು ಹೋದ ಸಂದರ್ಭದಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಭೀಕರ ದುರ್ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಗೌರ(ಕೆ) ಗ್ರಾಮಸ್ಥರು ಹರಿಕೆ ತೀರಿಸಲು ನೈವೇದ್ಯ ಮಾಡಿದ್ದರಿಂದ ಗ್ರಾಮದ ಪುಂಡಲೀಕ ಮುಲಿಮನಿ(17),ಮಹೇಶ್ ಹಿರೇಗೌರ(16) ಇಬ್ಬರೂ ವಿದ್ಯಾರ್ಥಿಗಳು ಊಟಕ್ಕೆ ಹೋದ ಸಂದರ್ಭದಲ್ಲಿ ಇನ್ನೂ ಅಡುಗೆ ಮಾಡಿಲ್ಲ ಎಂದು ತಿಳಿದುಕೊಂಡು ಅಡುಗೆ ಆಗುವರೆಗೂ ಈಜಾಡೋಣ ಎಂದು ಹೇಳಿ ಭೀಮಾ ನದಿಗೆ ಧುಮುಕಿತ್ತಾರೆ.
ಆದರೆ ದುರಾದೃಷ್ಟವಶಾತ್ ನದಿಯಲ್ಲಿ ನೀರಿನ ಒಳಹರಿವು ಹೆಚ್ಚು ಇರುವುದರಿಂದ ಈಜಾಡಲು ಸಾಧ್ಯವಾಗದ ಸಂದರ್ಭದಲ್ಲಿ ನದಿಯಲ್ಲೇ ಹರಿದುಕೊಂಡು ಹೋಗಿದ್ದಾರೆ.ಆದರೆ ಪಾಲಕರು ಇಬ್ಬರು ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆಂದು ಭಾವಿಸಿ ತಮಗೆ ಪರಿಚಯಸ್ಥರ ಮನೆಗಳಿಗೆ ಹೋಗಿ ವಿಚಾರಿಸಿದರು.
ಆದರೆ ಶನಿವಾರ ಬೆಳಿಗ್ಗೆ 9:30 ಗಂಟೆಗೆ ಮೃತ ದೇಹಗಳು ನೀರಿನಲ್ಲಿ ತೇಲಿಕೊಂಡು ಬರುತ್ತಿರುವುದನ್ನು ಸ್ಥಳೀಯರು ಗಮನಿಸಿ ಮೃತ ದೇಹಗಳನ್ನು ಹೊರಗಡೆ ತೆಗೆದಿದ್ದಾರೆ.
ಮೃತ ವಿದ್ಯಾರ್ಥಿಗಳ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ಈ ಬಗ್ಗೆ ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















