ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಡಾ. ಪ್ರಕಾಶ ನರಗುಂದ
ಮುದ್ದೇಬಿಹಾಳ: “ಪ್ರಾಚೀನ ಗುರುಕುಲ ಪದ್ಧತಿಯಿಂದ ಇಂದಿನವರೆಗೂ ಶಿಕ್ಷಕರಿಗೆ ಸಮಾಜದಲ್ಲಿ ಅತ್ಯುನ್ನತ ಗೌರವವಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಎಂದಿಗೂ ರೋಲ್ ಮಾಡೆಲ್ ಆಗಿರುತ್ತಾರೆ,” ಎಂದು ಸ್ಥಳೀಯ ಎಂ.ಜಿ.ವಿ.ಸಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ ನರಗುಂದ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರೇರಣಾ ಕಿಂಡರ್ ಗಾರ್ಟನ್ ಶಾಲೆಯ 11ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಿಂಡರ್ ಗಾರ್ಟನ್ ಎಂದರೆ ಮಕ್ಕಳ ಉದ್ಯಾನ’ ಎಂದರ್ಥ. ಜರ್ಮನಿಯ ಫ್ರೆಡ್ರಿಕ್ ಪ್ರೋಬೆಲ್ ಅವರು ಈ ಪರಿಕಲ್ಪನೆಯನ್ನು ಸ್ಥಾಪಿಸಿದ್ದು, ಮಕ್ಕಳು ಆಟದ ಮೂಲಕ ಸೃಜನಶೀಲತೆ ಮತ್ತು ಕಲ್ಪನಾ ಶಕ್ತಿಯನ್ನು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಿದೆ ಎಂದು ಡಾ. ನರಗುಂದ ವಿವರಿಸಿದರು.
ಸಂಸ್ಕಾರದ ಅನಿವಾರ್ಯತೆ: ಪೋಷಕರು ಎಷ್ಟೇ ಉನ್ನತ ಮಟ್ಟಕ್ಕೆ ಹೋದರೂ ಮಕ್ಕಳಿಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ನೀಡದಿದ್ದರೆ ಅವರು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಶಿಕ್ಷಕರು ಶಿಸ್ತು, ಸಮಯ ಪ್ರಜ್ಞೆ ಹಾಗೂ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಗಳನ್ನು ಬಾಲ್ಯದಲ್ಲೇ ಬಿತ್ತಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ನರಗುಂದ ಅವರು ವಚನ ಹಾಗೂ ಜಾನಪದ ಹಾಡುಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್. ಬಿ. ಚಲವಾದಿ ಮಾತನಾಡಿ, “ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಸಾಮರ್ಥ್ಯವಿರುತ್ತದೆ. ಶಿಕ್ಷಕರು ಅದನ್ನು ಗ್ರಹಿಸಿ, ಮಗುವಿನ ಕಲಿಕೆಯ ವೇಗಕ್ಕೆ ಅನುಗುಣವಾಗಿ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು,” ಎಂದರು.
ಪತ್ರಕರ್ತ ಶಂಕರ ಹೆಬ್ಬಾಳ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರು ತಂದೆ-ತಾಯಿ ಹಾಗೂ ಗುರುಗಳ ಋಣ ತೀರಿಸುವಂತೆ ಬೆಳೆಸಬೇಕು ಎಂದು ತಿಳಿಸಿದರು.
ಘಟಿಕೋತ್ಸವ ಮತ್ತು ಸನ್ಮಾನ
ಇದೇ ಸಂದರ್ಭದಲ್ಲಿ ಯುಕೆಜಿ ಮಕ್ಕಳ ಘಟಿಕೋತ್ಸವ ನೆರವೇರಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋತಿಲಾಲ್ ಕಲಾಲ್ ವಹಿಸಿದ್ದರು. ವೇದಿಕೆಯ ಮೇಲೆ ತುಕಾರಾಂ ಕಲಾಲ, ಮಲಕಾರಿ ನದಾಫ್, ಮಹಮ್ಮದ್ ರಫೀಕ್, ವೀರೇಶ ಹಡಲಗೇರಿ, ಶಿವು ಶಿವಪೂರಿ, ಸುರೇಶ ಕಲಾಲ್, ಶ್ರೀಕಾಂತ್ ಹಿರೇಮಠ, ರಾಜಶೇಖರ್ ಹೊಳಿ, ಗುಲಾಂ ಅಹಮದ್, ಗಂಗಾಧರ್ ಕಲಾಲ್, ಕಾಶಿನಾಥ್ ಹುಗ್ಗಿ ಉಪಸ್ಥಿತರಿದ್ದರು.
ಕುಮಾರಿ ವಿಜಯಲಕ್ಷ್ಮಿ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಚಂದ್ರು ಕಲಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಮಧುಮತಿ ಕಲಾಲ ವಂದನಾರ್ಪಣೆ ಮಾಡಿದರು.