ಗುರುವಿನ ವ್ಯಕ್ತತ್ವೇ ಶಿಷ್ಯ ಬಳಗಕ್ಕೆ ದಾರಿದೀಪ
ವಿಜಯಪುರ: ತಿಕೋಟಾ ತಾಲೂಕಿನ ತೊರವಿ ಗ್ರಾಮದ ಮಹಿಳಾ ವಿವಿಯ ಸಮಾಜ ಕಾರ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಹಾಗೂ ಪಾವರ್ ಸಂಸ್ಥೆಯ ಜೈ ಗುರುದೇವ ಸಮಾಜ ಕಾರ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ದಿ.ಡಾ.ಎಚ್.ಆರ್.ನಧಾಪ್ ಅವರ 10 ಪುಣ್ಯಸ್ಮರಣೆ ಹಾಗೂ ಗುರು ನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ವಿವಿಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಧರ ಸೋನಾರ ಮಾತನಾಡಿ, ನದಾಫ ಅವರು ನಮ್ಮನ್ನು ಅಗಲಿ 10 ವರ್ಷ ಕಳೆದ ಬಳಿಕವೂ ಅವರ ವಿದ್ಯರ್ಥಿಗಳು ಅವರನ್ನು ನೆನಪಿಸುತ್ತಾರೆ ಎಂದರೆ ಅವರದು ಎಂತಹ ವ್ಯಕ್ತಿತ್ವ. ಅವರ ವ್ಯಕ್ತಿತ್ವೇ ಅವರ ಶಿಷ್ಯ ಬಳಗಕ್ಕೆ ದಾರಿದೀಪವಾಗಿ ಎಂದರು. ಅವರ ನೆನಪು ನಮ್ಮಲ್ಲಿ ಅಜರಾಮರವಾಗಿರಲು ಅವರ ಸರಳತೆಯ ಬದುಕೇ ಮುಖ್ಯ. ಅವರ ವಿಷಯಗಳು ನಮಗೆಲ್ಲ ಆದರ್ಶಮಯವಾಗಿವೆ. ಎಚ್.ಆರ್.ನಧಾಪ್ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಮಾಡಿಕೊಂಡು ರಾಜ್ಯ ಮಟ್ಟದಲ್ಲಿ ಅವರ ಹೆಸರು ಅಜರಾಮರವಾಗಿರುವಂತೆ ಮಾಡುವಲ್ಲಿ ಎಲ್ಲ ಹಳೆಯ ವಿದ್ಯಾರ್ಥಿಗಳು ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾದ ಪಾವರ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದು ಪೂಜಾರಿ ಮಾತನಾಡಿ “ನಧಾಪ್ ಅವರ ಹೆಸರಿನ ಮೇಲೆ ಹಳೆಯ ವಿದ್ಯಾರ್ಥಿಗಳು ಪ್ರಶಸ್ತಿ ನೀಡಬೇಕು ಎನ್ನುವ ವಿಚಾರ ಸಂತಸ ತಂದಿದೆ ಎಂದರು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ಅವರ ಕುರಿತಾದ ಒಂದು ಪುಸ್ತಕವನ್ನು ರಚಿಸಿ ಇಟ್ಟರೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಡಾ.ಸುಜಾತ ಛಲವಾದಿ ಮಾತನಾಡಿ, ನಧಾಪ್ ಸರ್ ಅವರ ವಿದ್ಯಾರ್ಥಿಗಳು ಪ್ರತಿವರ್ಷ ಅವರನ್ನು ನೆನೆಯುತ್ತ ಗುರು ನಮನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಗುರು ಯಾವಾಗಲೂ ನಮ್ಮೊಳಗೆ ಇರುತ್ತಾನೆ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಅದಕ್ಕಿಂತ ನೀಡುವ ದೊಡ್ಡ ಗೌರವ ಬೇರೊಂದಿಲ್ಲ. ಆದರೆ ಇಂದು ಪದವಿಯಲ್ಲಿ ಸಮಾಜ ಕಾರ್ಯ ಅಧ್ಯಯನ ನಶಿಸಿ ಹೋಗುತ್ತಿದೆ. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ತಾವು ಅದನ್ನು ಎತ್ತಿ ಹಿಡಿಯುವ ಕಾರ್ಯಮಾಡಬೇಕು. ಅವರ ಕಂಡ ಕನಸನ್ನು ಶಿಷ್ಯರು ನನಸಾಗಿಸುವ ಕಾರ್ಯದಲ್ಲಿ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೀಲಮ್ಮ ಅರಳಗುಂಡಗಿ ಪ್ರಾಸ್ತಾವಿಕ ಮಾತನಾಡಿದರು. ಕಲ್ಲಪ್ಪ ನಂದರಗಿ ಸ್ವಾಗತಿಸಿದರು. ಸಂತೋಷ ಹಳೆಮನಿ ನಿರೂಪಿಸಿದರು. ಮಲ್ಲೇಶ ಕುಂಬಾರ ವಂದಿಸಿದರು. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಕಾವ್ಯಾ ಕುಂಬಾರ & ಗೀತಾ ಶೇಗಾವಿ ಪ್ರಾರ್ಥಿಸಿದರು.
ಅತಿಥಿಗಳಾದ ಸಂಜೀವ ಖಾನಗೌಡರ, ಎಂ.ಎಸ್.ಮುಜಾವರ, ಡಾ.ಕಲಾವತಿ ಕಾಂಬಳೆ, ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ ಉಪನ್ಯಾಸಕ, ಸಿಂದಗಿ ಕಾನಿಪ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ, ಡಾ.ಶಿವಲಿಂಗ ಮೇತ್ರಿ, ವಿದ್ಯಾ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರ ಹಳೆಯ ವಿದ್ಯಾರ್ಥಿ ಶ್ರೀಶೈಲ ಕೆಂಗನಾಳ ಹಾಗೂ ಸಂತೋಷ ಬಿರಾದಾರ ಗುರುವಿನ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಡಾ.ಎಚ್.ಆರ್.ನಧಾಪ್ ಅವರ ಧರ್ಮಪತ್ನಿ ಆರ್.ಎಚ್. ನಧಾಪ್, ಸುಜಾತ ಅಂಬಿಗೇರ, ಯಶೋಧಾ ಜೋಶಿ, ಇಂದುಮತಿ, ಶ್ರೀನಾಥ ಪಾಟೀಲ, ಗಜಾನನ ಮೇಟಿ, ಶರಣು ಸೇರಿದಂತೆ ಅವರ ಕುಟುಂಬದ ಸದಸ್ಯರು, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಅವರ ಅಭಿಮಾನಿಗಳು ಇದ್ದರು.



















