ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲಿಸಿ
ಇಂಡಿ : ಹಲವು ದಶಕಗಳಿಂದ ಕರ್ನಾಟಕ ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರ ಮಾಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ಮಾತ್ರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಾಧ್ಯ, ಜನತೆ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ಮಂಗಳ ಕಾರ್ಯಾಲಯದಲ್ಲಿ ಶುಕ್ರವಾರ ಆಮ್ ಆದ್ಮಿ ಪಕ್ಷದ ವತಿಯಿಂದ ಆಯೋಜಿಸಲಾದ ಕಾರ್ಯಕರ್ತರ ಸಭೆ, ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು “ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ 10 ವರ್ಷಗಳ ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದು, ಪಂಜಾಬ್ ನಲ್ಲಿ 3 ವರ್ಷದಿಂದ ಜನಪರ, ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದು ದೇಶದಲ್ಲಿ ಮಾದರಿ ಪಕ್ಷವಾಗಿ ಆಮ್ ಆದ್ಮಿ ಪಾರ್ಟಿ ಹೊರಹೊಮ್ಮಿದೆ” ಎಂದು ಹೇಳಿದರು.
“ವಿಜಯಪುರ ಜಿಲ್ಲೆಯಲ್ಲಿ ಸರ್ಕಾರ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ತರುವ ಪ್ರಯತ್ನ ಮಾಡುತ್ತಿದ್ದು ಇದು ಸರಿಯಲ್ಲ, ಸರ್ಕಾರವೇ ಪೂರ್ಣ ಪ್ರಮಾಣದ ಮೆಡಿಕಲ್ ಕಾಲೇಜು ಸ್ಥಾಪಿಸಲಿ. ಈಗಾಗಲೇ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಗಿದೆ” ಎಂದು ಭೋಗೇಶ್ ಸೋಲಾಪುರ್ ಹೇಳಿದರು.
ಆಮ್ ಆದ್ಮಿ ಪಕ್ಷದ ಇಂಡಿ ತಾಲೂಕು ಅಧ್ಯಕ್ಷರಾಗಿ ಗೋಪಾಲ್ ಪಾಟೀಲ್ ಅಧಿಕಾರ ಸ್ವೀಕರಿಸಿ, “ಆಮ್ ಆದ್ಮಿ ಪಕ್ಷ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಬಾರಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಕಾರ್ಯಕರ್ತರನ್ನು ನಿಲ್ಲಿಸುತ್ತಿದೆ. ಇಂಡಿ ಜನತೆ ಸಹಕಾರ ನೀಡಬೇಕೆಂದು” ಅವರು ಹೇಳಿದರು.
ಇಪ್ಪತ್ತಕೂ ಹೆಚ್ಚು ಜನರು ಆಮ್ ಆದ್ಮಿ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಆನಂದ್ ಚವ್ಹಾಣ್, ಎಂ.ಬಿ.ಪೂಜಾರಿ, ಸಾತಪ್ಪ ಪೂಜಾರಿ, ಮಂಜು ಥೋರಾತ್, ಹುಚ್ಚಪ್ಪ ನಾಟಿಕರ್, ರವಿ ಕಾಂಬ್ಳೆ, ರಾಹುಲ್ ಅಗರಖೇಡ್, ಯಲ್ಲಾಲಿಂಗ ಅಹಿರಸಂಗ್, ವೈ.ಬಿ.ಸಾಲೋಟಗಿ, ಪಾಂಡು ಜಾಧವ್, ಸಿಂಧೆ ಅಜಿತ್, ವಿಜು ದೇವಲೇ, ಜಿ.ಎಂ.ಕಟ್ಟಿಮನಿ ಮತ್ತಿರರಿದ್ದರು.


















