ಶ್ರೀ ಕೃಷ್ಣ ಅವರು ನೀಡಿರುವ ಜೀವನ ಸಂದೇಶವನ್ನು ಅರಿತುಕೊಳ್ಳಬೇಕು
ವಿಜಯಪುರ,ಆಗಸ್ಟ್ ೧೬ : ಶ್ರೀ ಕೃಷ್ಣ ಅವರು ನೀಡಿರುವ ಜೀವನ ಸಂದೇಶವನ್ನು ಅರಿತುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೃಷ್ಣನ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವರ ಸಂದೇಶಗಳು ನಮಗೆಲ್ಲ ದಾರಿ ದೀಪವಾಗಿವೆ. ಅವರ ಆದರ್ಶ ವಿಚಾರಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಮಕ್ಕಳನ್ನು ಆದರ್ಶ ವ್ಯಕ್ತಿಯಾಗಿ ರೂಪಿಸಬೇಕು. ಮಕ್ಕಳು ಜ್ಞಾನಾರ್ಜನೆಗಾಗಿ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಶ್ರೀ ಕೃಷ್ಣರ ಕೌಶಲ್ಯ, ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ, ಆದರ್ಶ, ಸ್ನೇಹ, ಸಹನೆ, ತಾಳ್ಮೆಯಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ, ಸ್ನೇಹಕ್ಕೆ ನೀಡಿದ ಮಹತ್ವÀ, ಯಾವ ಬೇಧ ಭಾವಗಳಿಲ್ಲದ ಅಪರೂಪದ ವ್ಯಕ್ತಿತ್ವ ಅವರದ್ದು, ಶ್ರೀ ಕೃಷ್ಣನ ಆದರ್ಶಗಳು ಮನೆ ಮನ ಬೆಳಗುವಂತಾಗಲಿ, ಮಕ್ಕಳಿಗೆ ಶ್ರೀಕೃಷ್ಣನ ಆದರ್ಶಗಳನ್ನು ಪಾಲಕರು ತಿಳಿಸಿಕೊಡಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಪ್ರೊ.ಯು.ಎನ್.ಕುಟೋಜಿ ವಿಶೇಷ ಉಪನ್ಯಾಸ ನೀಡಿ, ಯುದ್ಧ ನೀತಿಯ ನಿಪುಣ, ಚಿಂತಕ, ಈ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಶ್ರೀ ಕೃಷ್ಣ ಅವರ ಆದರ್ಶ ವಿಚಾರಗಳು, ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವೈದೇಹಿ ವಿ ಕಟ್ಟಿ ಅವರು ಸುಗಮ ಸಂಗೀತ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುಳಗುಂದ, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಅನಸೂಯಾ ಚಲವಾದಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ವೈ.ಎಚ್.ನಾರಾಯಣಕರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅಲ್ತಾಫ್ ಮಣಿಯಾರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ರೇಖಾ ದಶವಂತ, ಸಮಾಜದ ಮುಖಂಡರಾದ ದುರ್ಗಪ್ಪವ ಸೇರಿದಂತೆ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಧಿಕಾರಿ,ಸಿಬ್ಬಂದಿ ವಿವಿಧ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.