ಶಿವಾಜಿ ಮಹಾರಾಜರ ಧೈರ್ಯ-ಶೌರ್ಯ ಪರಾಕ್ರಮ
ಸಾಹಸಗಳನ್ನ ಎಲ್ಲರೂ ಮೈಗೂಡಿಸಿಕೊಳ್ಳಿ
-ಡಾ.ಔದ್ರಾಮ
ವಿಜಯಪುರ, ಫೆ.19 : ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ ಹಾಗೂ ಪರಾಕ್ರಮ, ಸಾಹಸಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ.ಔದ್ರಾಮ ಹೇಳಿದರು.
ಗುರುವಾರ ನಗರದ ಕಂದಗಲ್ ಶ್ರೀ ಹನಮಂತ್ರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಶಿವಾಜಿ ಮಹಾರಾಜರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಸ್ವರಾಜ ಪಡೆಯುತ್ತೇವೆ ಎಂಬದನ್ನು ಪ್ರತಿಪಾದಿಸಿದ್ದರು. ಶತ್ರುಗಳು ಎಷ್ಟೆ ಬಲಿಷ್ಟವಾಗಿದ್ದರು ಅವರನ್ನು ಎದೆಗುಂದದೆ ಎದುರಿಸಿ ಗೆಲ್ಲುವ ಶಕ್ತಿ ನಮ್ಮಲ್ಲಿ ಇರಬೇಕು. ಸಾರ್ವಜನಿಕರ ಬೆಳವಣಿಗೆಯೆ ನಮ್ಮ ರಾಜ ಧರ್ಮ ಎಂದು ತಿಳಿಸಿದವರು, ಅದರೊಂದಿಗೆ, ಮಹಿಳೆಯರಿಗೆ ಅಪಾರವಾದ ಗೌರವದಿಂದ ಕಾಣುತ್ತಿದ್ದ ಅವರು ನಮ್ಮ ದೇಶಕ್ಕೆ ನಿಜವಾದ ಸ್ವರಾಜ್ಯವನ್ನು ತಂದುಕೊಟ್ಟು ದೇಶದ ಸ್ವಾಂತತ್ರ ಅಡಿಪಾಯ ಹಾಕಿಕೊಟ್ಟ ಅವರ ಸಾಹಸಗಾಥೆ ಎಲ್ಲರೂ ಸ್ಮರಿಸಬೇಕು ಹಾಗೂ ಅವರು ಈ ದೇಶಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಇಂದಿನ ಯುವಕರಿಗೆ ತಿಳಿಹೇಳಬೇಕು ಎಂದು ಅವರು ಹೇಳಿದರು.
ವ್ಹಿ.ಬಿ ದರಬಾರ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಕಾಶಿನಾಥ ಕೋಣೇನವರ ಕಾರ್ಯಕ್ರಮದ ಉಪನ್ಯಾಸ ನೀಡಿ, ಶಿವಾಜಿ ಅವರಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ. ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ ತನ್ನ 17ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿ ಅವರಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು.
ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗ ಓರ್ವ ಎಲ್ಲ ಯುದ್ಧಕಲೆಗಳನ್ನು ಶಿವಾಜಿಗೆ ಕಲಿಸಿದ್ದರು. ಶಿವಾಜಿಯು ಧೈರ್ಯ,ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಅವರ ದೈರ್ಯ, ಸಾಹಸ ಎಂದಿಗೂ ಮರೆಯುವಂತಿಲ್ಲ ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿದೇಶಕರಾದ ಸಂತೋಷ ಬೋವಿ ಸ್ವಗತಿಸಿದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾನಗರ ಪಾಲಿಕೆ ಮಹಾ ಪೌರರಾದ ಸಿದ್ರಾಮಪ್ಪ ಕರಡಿ ಅವರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ ಜಾಧವ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ವಿಜಯಕುಮಾರ ಚವ್ಹಾಣ, ಅಡಿವೆಪ್ಪ ಸಾಲಗಲ್ಲ, ಹಾಗೂ ಇತರರು ಉಪಸ್ಥಿತರಿದ್ದರು. ಎಮ್.ಬಿ.ಕಟ್ಟಿಮನಿ ಕಾರ್ಯಕ್ರಮವನ್ನು ನಿರೂಪಿಸಿದರು.


















