ವಿಜ್ಞಾನ ಮಾನವನ ಜೀವನದ ಅವಿಭಾಜ್ಯ ಅಂಗ
-ಸಂತೋಷ ಬಂಡೆ
ಇಂಡಿ: ವಿಜ್ಞಾನ ಮಾನವನ ಜೀವನದ ಅವಿಭಾಜ್ಯ ಅಂಗ. ಭವಿಷ್ಯದ ವಿಜ್ಞಾನಿಗಳಾದ ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡು, ಹೊಸ ಆವಿಷ್ಕಾರಗಳಿಗೆ ಮುಂದಡಿ ಇಡುತ್ತಾ, ತಮ್ಮ ಸಾಧನೆಗೆ ವಿಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಮಾಜ ಮತ್ತು ಆರ್ಥಿಕತೆಯ ಅಭಿವೃದ್ಧಿಗೆ ವಿಜ್ಞಾನ ಅತ್ಯಗತ್ಯ. ಆರೋಗ್ಯ, ರಕ್ಷಣೆ, ಕೃಷಿ, ಇಂಧನ, ಶಿಕ್ಷಣದಂತಹ ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ಪ್ರಗತಿಯನ್ನು ಮುನ್ನಡೆಸುವ ಎಂಜಿನ್ ವಿಜ್ಞಾನ ಆಗಿದ್ದು, ಅದು ನಮ್ಮ ನಿತ್ಯ ಜೀವನದ ಪ್ರತಿ ಕಾರ್ಯದಲ್ಲೂ ಮಾನವನೊಟ್ಟಿಗಿದೆ ಎಂದು ಹೇಳಿದರು.
ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,’ವಿಜ್ಞಾನ ಕೇವಲ ಪ್ರಯೋಗ ಶಾಲೆಯಲ್ಲ. ಅದೊಂದು ಸಂಶೋಧನೆ, ಸಮೀಕ್ಷೆ, ವಿಶೇಷವಾದ ಜ್ಞಾನ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ, ಸಂಶೋಧನೆ ಮತ್ತು ಆವಿಷ್ಕಾರಗಳತ್ತ ಅವರನ್ನು ಉತ್ತೇಜಿಸಿ, ವೈಜ್ಞಾನಿಕ ಮನೋಭಾವ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ ಮಾತನಾಡಿ, ‘ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿದೆ. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ, ಸಂಶೋಧನೆ ಮೂಲಕ ಅಂಧಕಾರ ತೊಡೆದು ಹಾಕಬೇಕು. ವೈಜ್ಞಾನಿಕ ಮನೋಭಾವ ಎಲ್ಲರಲ್ಲಿ ಬಲಗೊಳ್ಳಬೇಕು’ ಎಂದು ತಿಳಿಸಿದರು.
ಶಿಕ್ಷಕಿ ಎನ್ ಬಿ ಚೌಧರಿ, ಅತಿಥಿ ಶಿಕ್ಷಕಿ ಅಲ್ಪಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.


















