ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಒಳಮಿಸಲಾತಿ ಜಾರಿಗೊಳಿಸಿ: ನಂಜುಂಡ ಮೌರ್ಯ
ಹನೂರು: ಪರಿಶಿಷ್ಟ ಜಾತಿಗಳ ಜನಸಂಖ್ಯೆ ಆಧಾರದ ಮೇಲೆ ಒಳಮಿಸಲಾತಿ ಜಾರಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮನ್ನು ಆಳುವ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಇತರ ಸರ್ಕಾರಗಳು ಇದುವರೆಗೂ ಸಾಮಾಜಿಕ ನ್ಯಾಯವನ್ನು ನೀಡಿಲ್ಲ ಎಂದು ದಲಿತ ಜಿಲ್ಲಾ ಸಂಚಾಲಕರು ಮಂಡ್ಯ ಹಾಗೂ ಕರ್ನಾಟಕ ಮಾದಿಗರ ಸಂಸ್ಕೃತಿ ಸಂಘದ ಅಧ್ಯಕ್ಷರಾದ ನಂಜುಂಡ ಮೌರ್ಯ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದಂತಹ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೂರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ ವಿಶೇಷವಾಗಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು, ಸಾಮಾಜಿಕ ನ್ಯಾಯ ನೀಡಬೇಕೆಂದು ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ರವರು ತಿಳಿಸಿದ್ದಾರೆ. ಅವರ ಆಶಯದಂತೆ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ನಾವು ಸುಮಾರು 30 ವರ್ಷಗಳಿಂದ ಕರ್ನಾಟಕ ದಲಿತ ಸಂಘದ ಸಮಿತಿಯು ಹೋರಾಟವನ್ನು ಮಾಡಿಕೊಂಡಿದ್ದೇವೆ. ಅಧಿವೇಶನದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಜಾರಿಗೊಳಿಸುತ್ತೇವೆ ಎಂದು ಸನ್ಮಾನ್ಯ ಸಿದ್ದರಾಮಯ್ಯನವರು ಹೇಳಿದ್ದರು. ಆದರೆ ಅವರು ಯಾವುದೇ ರೀತಿಯ ಒಳ ಮೀಸಲಾತಿಯನ್ನು ನಮಗೆ ನೀಡಿಲ್ಲ. ಆಗಸ್ಟ್ 1 2024ರಂದು ಸುಪ್ರೀಂ ಕೋರ್ಟ್ ತಮ್ಮ ತೀರ್ಪಿನಲ್ಲಿ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರವನ್ನು ನೀಡಿತ್ತು. ಆದರೆ ಮೀಸಲಾತಿಯನ್ನು ನೀಡದಿರುವುದು ಶೋಚನೆಯ ಸಂಗತಿಯಾಗಿದೆ. ಅಸ್ಪೃಶ್ಯರ ಒಳ ಮೀಸಲಾತಿಯ ಹೋರಾಟಕ್ಕೆ ಹುಟ್ಟಿಕೊಂಡಂತಹ ಸಂಘಟನೆಗಳು ಇನ್ನು ಮುಂದೆ ಕಾಂಗ್ರೆಸ್ ಹಾಗೂ ಬಿಜೆಪಿ ಎದುರು ವಿಧಾನಸಭೆ, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ನಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ ಬಾಬು ಜಗಜೀವನ್ ರಾವ್ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಜು, ಶ್ರೀರಂಗಪಟ್ಟಣ ತಾಲ್ಲೂಕಿನ ಸಂಘದ ಅಧ್ಯಕ್ಷರಾದ ಶಂಕರ್, ಹನೂರು ತಾಲೂಕಿನ ಡಾ. ಬಾಬು ಜಗಜೀವನ್ ರಾವ್ ಸಂಘದ ಅಧ್ಯಕ್ಷರಾದ ಅಂಬರೀಶ್, ಹಾಗೂ ಮುಖಂಡರಾದ ರಮೇಶ್ ರಾಜು ರಂಗನಾಥ್ ಮಾಣಿಕ್ಯ ಇನ್ನು ಮುಂತಾದವರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ



















